ಅವನೇ ಶ್ರೀಮನ್ನಾರಾಯಣ ಚಿತ್ರದ ಸಹ ನಿರ್ಮಾಪಕರಾದ ಕೆ.ಎಚ್ ಪ್ರಕಾಶ್ ಶ್ರೀದೇವಿ ಎಂಟರ್ ಟೈನರ್ಸ್ ಬ್ಯಾನರ್ ಅಡಿ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನ ಜಿ. ಭರತ್ ವಹಿಸಿಕೊಂಡಿದ್ದಾರೆ. ಈ ಹಿಂದೆ ರೇಡಿಯೋ ಮತ್ತು ಜಾಹೀರಾತು ವಿಭಾಗದಲ್ಲಿ ಕೆಲಸ ಮಾಡಿದ ಅನುಭವದೊಂದಿಗೆ ಭರತ್ ಈ ಚಿತ್ರದ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಇದೊಂದು ಕಾಮಿಡಿ ಹಾರರ್ ಚಿತ್ರವಾಗಿದ್ದು, ಸದ್ಯಕ್ಕೆ ಇದರ ಪ್ರೀ-ಪ್ರೊಡಕ್ಷನ್ ಕೆಲಸಗಳು ತೆರೆಮರೆಯಲ್ಲಿ ನಡೆಯುತ್ತಿದೆ. ಕಾಡಿನಲ್ಲಿರುವ 103 ವರ್ಷದ ಹಳೆಯ ಬ್ರಿಟಿಷ್ ಪ್ರಾಚ್ಯ ಸಂಶೋಧನಾ ಕಟ್ಟಡದಲ್ಲಿ ನಡೆಯುವ ರಹಸ್ಯ ಘಟನೆಗಳ ಕುರಿತ ಕಥೆ ಇದಾಗಿದೆ. ಭಯ ಮತ್ತು ಹಾಸ್ಯ ಎರಡರ ಮಿಶ್ರಿತ ಚಿತ್ರ ಇದಾಗಿದೆ. ದೆವ್ವದ ಇರುವಿಕೆ ಕುರಿತಂತೆ ಪ್ರಶ್ನೆಗಳನ್ನು ಹುಟ್ಟುಹಾಕಲಿದೆ. ಚಿತ್ರದ ಶೂಟಿಂಗ್ಗಾಗಿ ಈಗಾಗಲೇ ಊಟಿ ಸೇರಿದಂತೆ ಹಲವು ಜಾಗಗಳನ್ನು ಗುರುತಿಸಲಾಗಿದ್ದು, ಲಾಕ್ ಡೌನ್ ಮುಗಿದ ಬಳಿಕ ಶೂಟಿಂಗ್ ಪ್ರಾರಂಭ ಮಾಡುವ ಯೋಚನೆಯಲ್ಲಿದ್ದೇವೆ ಎಂದಿದ್ದಾರೆ ನಿರ್ದೇಶಕ ಭರತ್. ಇದಿನ್ನು ಈಗ ಚಿತ್ರಕ್ಕಾಗಿ ಅಗತ್ಯವಿರುವ ಗ್ರೌಂಡ್ ವರ್ಕ್ ಮಾಡುತ್ತಿದ್ದೇವೆ ಅಷ್ಟೇ, ಸದ್ಯಕ್ಕೆ ತಂತ್ರಜ್ಞರು ಮತ್ತು ಕಲಾವಿದರ ಆಯ್ಕೆ ಮಾಡುವ ಪ್ರಕ್ರಿಯೆ ಬಾಕಿ ಉಳಿದಿದೆ. ಅತೀ ಶೀಘ್ರದಲ್ಲಿಯೇ ಸಿನಿಮಾಗಾಗಿ ಆಡಿಶನ್ ಪ್ರಾರಂಭವಾಗಲಿದೆ. ಆದಷ್ಟು ಬೇಗ ಸಿನಿಮಾದ ಶೂಟಿಂಗ್ ಶುರು ಮಾಡುತ್ತೇವೆ ಎಂದು ನಿರ್ಮಾಪಕ ಪ್ರಕಾಶ್ ಹೇಳಿಕೆ ನೀಡಿದ್ದಾರೆ.