ನವದೆಹಲಿ, ಸೆ.10-ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಪತ್ನಿ ಅಕ್ಷತಾ ಮೂರ್ತಿಯೊಂದಿಗೆ ದೆಹಲಿಯ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ದೇವಾಲಯದಲ್ಲಿ ಪ್ರಾರ್ಥನೆ, ಪೂಜೆ ಸಲ್ಲಿಸಿದ ನಂತರ ರಾಜ್ ಘಾಟ್ ಗೆ ತೆರಳಿ ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿಸಿದರು.
ಸುನಕ್ ಅವರ ಭೇಟಿಯ ಹಿನ್ನೆಲೆಯಲ್ಲಿ ವಿಸ್ತಾರವಾದ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು.
ಎರಡು ದಿನಗಳ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸುನಕ್ ಅವರು ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ಭಾರತಕ್ಕೆ ಬಂದಿದ್ದಾರೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಯುಕೆ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ರಿಷಿ ಸುನಕ್ ಅವರು ಪ್ರಧಾನಿಯಾಗಿ ಭಾರತಕ್ಕೆ ನೀಡಿದ ಮೊದಲ ಭೇಟಿ ಇದಾಗಿದೆ.
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದ ಕುರಿತು ಅಕ್ಷರಧಾಮ ದೇವಾಲಯದ ನಿರ್ದೇಶಕ ಜ್ಯೋತಿಂದ್ರ ದವೆ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿ, ಅವರ ಅನುಭವ ಅಸಾಧಾರಣವಾಗಿತ್ತು. ಅವರು ಬಹಳ ನಂಬಿಕೆಯಿಂದ ಪೂಜೆ ಮತ್ತು ಆರತಿಯನ್ನು ಮಾಡಿದರು. ನಾವು ಅವರಿಗೆ ದೇವಾಲಯವನ್ನು ತೋರಿಸಿದ್ದೇವೆ. ನಂತರ ದೇವಸ್ಥಾನದ ಮಾದರಿಯನ್ನು ಉಡುಗೊರೆಯಾಗಿ ನೀಡಿದೆವು.
ಅವರು ಇಲ್ಲಿ ಪ್ರತಿ ನಿಮಿಷವನ್ನು ಆನಂದಿಸಿದರು. ಅವರ ಪತ್ನಿ ಅಕ್ಷತಾ ಮೂರ್ತಿ ಸಹ ಖುಷಿಪಟ್ಟರು ಎಂದರು.
ಜಿ20 ಶೃಂಗಸಭೆಯಲ್ಲಿ ಭಾಗವಹಿಸುವ ಸಲುವಾಗಿ ರಿಷಿ ಸುನಕ್ ದಂಪತಿ ನವದೆಹಲಿಗೆ ಆಗಮಿಸಿದ್ದು, ಕೆಲ ವಿಶ್ವ ನಾಯಕರ ಜೊತೆಗೆ ವಿಶ್ವದ ಕೆಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಬ್ರಿಟನ್ ಪ್ರಧಾನಿಯಾದ ಬಳಿಕ ರಿಷಿ ಸುನಕ್ ಅವರು ಮೊದಲ ಬಾರಿಗೆ ಭಾರತಕ್ಕೆ ಅಧಿಕೃತವಾಗಿ ಭೇಟಿ ನೀಡಿದ್ದಾರೆ.
ದೆಹಲಿಗೆ ಆಗಮಿಸಿದ ಸಂದರ್ಭ ರಿಷಿ ಸುನಕ್ ನಾನೊಬ್ಬ ಹೆಮ್ಮೆಯ ಹಿಂದೂ ಎಂದು ಹೇಳಿದ್ದರು. ಅಲ್ಲದೇ ಹಲವು ದೇವಸ್ಥಾನಕ್ಕೆ ಭೇಟಿ ನೀಡುವುದಾಗಿಯೂ ತಿಳಿಸಿದ್ದರು. ಇಷ್ಟು ಮಾತ್ರವಲ್ಲದೇ ತಾವು ದೆಹಲಿಯಲ್ಲಿ ಆಗಾಗ ಭೇಟಿ ನೀಡುತ್ತಿದ್ದ ಕೆಲವು ರೆಸ್ಟೋರೆಂಟ್ಗಳಿಗೆ ಭೇಟಿ ನೀಡಲು ಯೋಜನೆ ಹಾಕಿಕೊಂಡಿರುವುದಾಗಿ ಮಾಹಿತಿ ನೀಡಿದ್ದರು.ಸೆಪ್ಟೆಂಬರ್ 9ರಂದು ನಡೆದ ಜಿ20 ಶೃಂಗಸಭೆಯಲ್ಲಿ ಸುನಕ್ ಅವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ವ್ಯಾಪಾರ ಸಂಬಂಧಗಳನ್ನು ಗಟ್ಟಿಗೊಳಿಸಲು ಮತ್ತು ಹೂಡಿಕೆಯನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಿದರು.