ಭೋಪಾಲ್: ‘ಇಂಡಿಯಾ’ ಮೈತ್ರಿಕೂಟದ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ವಿರೋಧ ಪಕ್ಷಗಳ ಸೊಕ್ಕಿನ ಒಕ್ಕೂಟವು ಸನಾತನ ಧರ್ಮವನ್ನು ನಾಶಮಾಡಲು ಬಯಸುತ್ತಿದೆ ಎಂದು ಆರೋಪಿಸಿದ್ದಾರೆ.
ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ವಿರೋಧ ಪಕ್ಷಗಳು ಸನಾತನ ಧರ್ಮದ ವಿರುದ್ಧ ಈಗಾಗಲೇ ಬಹಿರಂಗವಾಗಿ ದಾಳಿ ಮಾಡಲಾರಂಭಿಸಿವೆ.
ಮುಂದಿನ ದಿನಗಳಲ್ಲಿ ಅದು ಇನ್ನಷ್ಟು ಹೆಚ್ಚಾಗಲಿದೆ. ಸನಾತನ ಧರ್ಮವನ್ನು ಅನುಸರಿಸುತ್ತಿರುವ ನಾವು ತುಂಬಾ ಎಚ್ಚರಿಕೆಯಿಂದ ಇರಬೇಕಾಗಿದೆ’ ಎಂದು ಕರೆ ನೀಡಿದ್ದಾರೆ.
ದೇಶದಾದ್ಯಂತ ಇರುವ ಎಲ್ಲ ಸನಾತನಿಗಳು (ಸನಾತನ ಧರ್ಮ ಪಾಲನೆ ಮಾಡುತ್ತಿರುವವರು) ಮತ್ತು ಭಾರತವನ್ನು ಪ್ರೀತಿಸುವ ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
‘ಈ ಘಮಂಡಿಯಾ (ಸೊಕ್ಕಿನ) ಮೈತ್ರಿಕೂಟವು ಸನಾತನ ಧರ್ಮದ ಆಚಾರಗಳು ಮತ್ತು ಸಂಪ್ರದಾಯಗಳನ್ನು ಕೊನೆಗೊಳಿಸುವ ಉದ್ದೇಶದೊಂದಿಗೆ ರಚನೆಯಾಗಿದೆ. ಮಹಾತ್ಮ ಗಾಂಧೀಜಿ ಅವರು ತಮ್ಮ ಜೀವನದುದ್ದಕ್ಕೂ ಸನಾತನದ ಮೇಲೆ ನಂಬಿಕೆ ಇರಿಸಿದ್ದರು. ಅಸ್ಪೃಷ್ಯತೆ ವಿರುದ್ಧದ ಚಳವಳಿಗೆ ಸನಾತನ ಆಚರಣೆಯು ಗಾಂಧೀಜಿಗೆ ಸ್ಫೂರ್ತಿ ನೀಡಿತ್ತು’ ಎಂದಿದ್ದಾರೆ.
ಮಧ್ಯಪ್ರದೇಶ: ₹50,700 ಕೋಟಿ ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆಸನಾತನ ಧರ್ಮವನ್ನು ಪ್ರಸಾರ ಮಾಡಲು ಸಂತ ರವಿದಾಸ್, ರಾಣಿ ಅಹಲ್ಯಾ ಬಾಯಿ, ರಾಣಿ ಲಕ್ಷ್ಮೀ ಬಾಯಿ ಹಾಗೂ ಸ್ವಾಮಿ ವಿವೇಕಾನಂದ ಅವರು ಅಪಾರ ಕೊಡುಗೆ ನೀಡಿದ್ದಾರೆ ಎಂದೂ ಮೋದಿ ಒತ್ತಿಹೇಳಿದ್ದಾರೆ.
ಮುಂದುವರಿದು, ‘ಸೊಕ್ಕಿನ ಒಕ್ಕೂಟಕ್ಕೆ ನಾಯಕನೇ ಇಲ್ಲ. ಒಡೆದು ಆಳುವ ರಾಜಕೀಯ ನೀತಿ ಮೂಲಕ ಸ್ವಯಂ ಅಭಿವೃದ್ಧಿ ಹೊಂದುವ ಯೋಜನೆಯಲ್ಲಿ ‘ಇಂಡಿಯಾ’ ಮೈತ್ರಿಕೂಟವಿದೆ. ದೇಶದ ಜನರಿಗಾಗಿ ಸೇವೆ ಸಲ್ಲಿಸುವ ದೂರದೃಷ್ಟಿಯನ್ನು ಬಿಜೆಪಿ ಹೊಂದಿದೆ’ ಎಂದು ಹೇಳಿದ್ದಾರೆ.
ಮಧ್ಯಪ್ರದೇಶ ವಿಧಾನಸಭೆಗೆ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದೆ. ರಾಜ್ಯಕ್ಕೆ ಇಂದು ಭೇಟಿ ನೀಡಿದ ಮೋದಿ, ಸುಮಾರು ₹ 50,700 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.