ಈಶಾನ್ಯ ರಾಜ್ಯ ಅಸ್ಸಾಂಗೆ ಮಳೆ, ಪ್ರವಾಹ ಹೊಸತಲ್ಲ. ಆದರೆ, ಈ ವರ್ಷ ಕೋವಿಡ್ ವೈರಸ್ ವಿರುದ್ಧದ ಹೋರಾಟದ ನಡುವೆಯೇ ಪ್ರವಾಹದ ವಿರುದ್ಧವೂ ಸೆಣಸಬೇಕಾದ ಅನಿವಾರ್ಯತೆಗೆ ರಾಜ್ಯ ಸಿಲುಕಿದೆ. ಇಲ್ಲಿನ ೩೩ ಜಿಲ್ಲೆಗಳ ಪೈಕಿ ೨೫ ಜಿಲ್ಲೆಗಳು ಮಳೆ, ಪ್ರವಾಹದಿಂದ ತತ್ತರಿಸಿಹೋಗಿದ್ದು, ೪೦ ಲಕ್ಷಕ್ಕೂ ಅಧಿಕ ಮಂದಿ ಅತಂತ್ರರಾಗಿದ್ದಾರೆ. ಅದರಲ್ಲೂ ವಿಶ್ವವಿಖ್ಯಾತ ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿನ ವನ್ಯಜೀವಿಗಳು ತೀವ್ರ ಸಂಕಷ್ಟಕ್ಕೆ ಗುರಿಯಾಗಿವೆ. ಅಸ್ಸಾಂನ ಹೆಮ್ಮೆ ಎಂದೇ ಕರೆಯಲ್ಪಡುವ ಒಂದು ಕೊಂಬಿನ ಘೇಂಡಾಮೃಗಗಳು ವಿನಾಶದಂಚಿನಲ್ಲಿದ್ದು, ಅವುಗಳ ಉಳಿವಿಗೆ ಈ ಪ್ರವಾಹ ಮತ್ತಷ್ಟು ಅಡ್ಡಿ ಉಂಟುಮಾಡಿದೆ. ಅಸ್ಸಾಂನ ರೈನೋಗಳಿಗೆ ಇಬ್ಬರು ಶತ್ರುಗಳು. ಒಂದು ಪ್ರವಾಹ, ಮತ್ತೂಂದು ಬೇಟೆಗಾರರು. ಬೇಟೆಯ ವಿರುದ್ಧ ಅರಣ್ಯ ಅಧಿಕಾರಿಗಳು ದಶಕಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಇತ್ತೀಚೆಗಷ್ಟೇ ಗೆಲುವು ದೊರಕತೊಡಗಿದೆ. ಅಷ್ಟರಲ್ಲೇ, ಪ್ರಕೃತಿ ವಿಕೋಪವು ರೈನೋಗಳ ಜೀವಕ್ಕೆ ಅಪಾಯ ತಂದೊಡ್ಡಿದೆ. ಕಾಜಿರಂಗಾ ಉದ್ಯಾನದ ಶೇ.೯೫ ಭಾಗ ಜಲಾವೃತವಾಗಿದ್ದು, ಉದ್ಯಾನದೊಳಗಿನ ೨೨೩ ಅರಣ್ಯ ಶಿಬಿರಗಳ ಪೈಕಿ ೧೫೩ ಮುಳುಗಡೆಯಾಗಿವೆ.
ಕೊರೊನಾದ ನಡುವೆ ಪ್ರವಾಹದ ಸೆಣಸಾಟ
Please follow and like us: