ಕೊರೊನಾ ವೈರಸ್ ರೋಗಲಕ್ಷಣಗಳಿದ್ದರೂ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದ 18 ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಸಚಿವ ಶ್ರೀರಾಮುಲು ಶೋಕಾಸ್ ನೋಟಿಸ್ ನೀಡಿದ್ದಾರೆ. ಜೂನ್ 27 ರಂದು ಬೆಂಗಳೂರು ಮೂಲದ 51 ವರ್ಷದ ರೋಗಿಯೊಬ್ಬರಿಗೆ ಉಸಿರಾಟ ತೊಂದರೆ ಉಂಟಾಗಿದೆ. ಆರೋಗ್ಯದಲ್ಲಿ ಏರುಪೇರಾದ ಕಾರಣ ಆತನ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಕರೆದುಕೊಂಡು ಹೋಗಿದ್ದಾರೆ. ಆದರೆ, ಯಾವ ಆಸ್ಪತ್ರೆಯೂ ರೋಗಿಗೆ ಚಿಕಿತ್ಸೆ ನೀಡದೆ ನಿರಾಕರಿಸಿದ್ದಾರೆ. ಬೆಂಗಳೂರಿನ 18 ಪ್ರಮುಖ ಆಸ್ಪತ್ರೆಗಳು ಹಾಸಿಗೆ ಕೊರತೆ ಹಾಗೂ ಐಸಿಯು ವಾರ್ಡ್ ಸಮಸ್ಯೆ ಇರುವ ಕಾರಣ ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಕರ್ನಾಟಕ ಆರೋಗ್ಯ ಸಚಿವ ಶ್ರೀರಾಮುಲು ಎಲ್ಲ 18 ಆಸ್ಪತ್ರೆಗಳಿಗೂ ರೋಗಿಗೆ ಚಿಕಿತ್ಸೆ ನೀಡದಿರಲು ಕಾರಣ ಹೇಳಿ ಎಂದು ಶೋಕಾಸ್ ನೋಟಿಸ್ ನೀಡಿದ್ದಾರೆ.