ನವದೆಹಲಿ: ದೆಹಲಿ ಮುಖ್ಯಮಂತ್ರಿ, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಛತ್ತಿಸ್ಗಢದ ಜಗದಲ್ಪುರ ಮತ್ತು ಮಧ್ಯಪ್ರದೇಶದ ರೇವಾದಲ್ಲಿ ರ್ಯಾಲಿ ನಡೆಸಲಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಸೆಪ್ಟೆಂಬರ್ 14ರಂದು ಛತ್ತಿಸ್ಗಢದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರ್ಯಾಲಿ ನಡೆಸಿದ್ದರು.
ಇದೀಗ ನಾಳೆ (ಸೆಪ್ಟೆಂಬರ್ 16) ಛತ್ತಿಸ್ಗಢದ ಜಗದಲ್ಪುರದಲ್ಲಿ ಮತ್ತು ಸೆಪ್ಟೆಂಬರ್ 18 ರಂದು ಮಧ್ಯಪ್ರದೇಶದ ರೇವಾಗೆ ಕೇಜ್ರಿವಾಲ್ ಭೇಟಿ ನೀಡಲಿದ್ದಾರೆ.
ರಾಯಗಢದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ಛತ್ತಿಸ್ಗಢದ ಭೂಪೇಶ್ ಬಘೇಲ್ ನೇತೃತ್ವದ ಸರ್ಕಾರ ಬಡವರ ಕಲ್ಯಾಣದಲ್ಲಿ ಹಿಂದುಳಿದಿದೆ ಆದರೆ, ಭ್ರಷ್ಟಾಚಾರದಲ್ಲಿ ಮುಂದಿದೆ ಎಂದು ಟೀಕಿಸಿದರು. ಛತ್ತಿಸ್ಗಢದ ಕಾಂಗ್ರೆಸ್ ಸರ್ಕಾರವು ಹಗರಣಗಳಲ್ಲಿ ತೊಡಗಿದೆ ಎಂದು ಅವರು ಆರೋಪಿಸಿದರು.
‘ಛತ್ತಿಸ್ಗಢ, ನಕ್ಸಲೀಯರ ದಾಳಿ ಮತ್ತು ಹಿಂಸಾಚಾರಕ್ಕೆ ಮಾತ್ರ ಹೆಸರುವಾಸಿಯಾಗಿದ್ದ ಕಾಲವೊಂದಿತ್ತು. ಆದರೆ, ಬಿಜೆಪಿ ಸರ್ಕಾರದ ಪ್ರಯತ್ನದ ನಂತರ ಇಂದು ಅಭಿವೃದ್ಧಿ ಕಾರ್ಯಗಳಿಂದಾಗಿ ಗುರುತಿಸಿಕೊಳ್ಳುತ್ತಿದೆ ಎಂದು ಮೋದಿ ತಿಳಿಸಿದರು.