ನವದೆಹಲಿ,ಸೆ.20-ತಮಿಳುನಾಡಿನವರು ಕಾವೇರಿ ನದಿ ನೀರನ್ನು ಕ್ರಿಮಿನಲ್ ಆಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತಕಲ್ಯಾಣ ಸಚಿವ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ. ದೆಹಲಿಯಲ್ಲಿಂದು ನಡೆದ ಸರ್ವಪಕ್ಷ ಸಂಸದರ ನಿಯೋಗದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ನೆಲ, ಜಲ, ಭಾಷೆ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಾವೆಲ್ಲಾ ಭಾಗವಹಿಸಿದ್ದೇವೆ ಎಂದರು.
ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡಬಹುದು. ನಾಡಿನ ಹಿತದ ವಿಷಯ ಬಂದಾಗ ಅದರ ರಕ್ಷಣೆಗಾಗಿ ಎಲ್ಲರೂ ಒಟ್ಟಾಗಿ ನಿಲ್ಲುತ್ತೇವೆ. ಇದು ಮೊದಲಿನಿಂದಲೂ ನಡೆದುಕೊಂಡು ಬರುತ್ತಿದೆ ಎಂದು ಹೇಳಿದರು.
ಕಾವೇರಿ ನದಿ ಪಾತ್ರದ 4 ಜಲಾಶಯಗಳಲ್ಲಿ 50 ಟಿಎಂಸಿ ನೀರಿದೆ. ಬೆಂಗಳೂರಿಗೆ ದಿನಬಿಟ್ಟು ದಿನ ನೀರು ಬಿಡಲು 30 ಟಿಎಂಸಿ ನೀರು ಬೇಕು. ನಮ್ಮ ಅಗತ್ಯ ಪಕ್ಕಕ್ಕಿಟ್ಟು ತಮಿಳುನಾಡಿಗೆ 15 ಸಾವಿರ, 12 ಸಾವಿರ, 10 ಸಾವಿರ, 5 ಸಾವಿರ ಕ್ಯೂಸೆಕ್ಸ್ನಂತೆ ನೀರು ಹರಿಸಲಾಗಿದೆ. ಈ ವಿಚಾರವನ್ನು ಸುಪ್ರೀಂಕೋರ್ಟ್ಗೆ ಮತ್ತು ನೀರು ನಿರ್ವಹಣಾ ಪ್ರಾಧಿಕಾರಗಳಿಗೆ ಮನವರಿಕೆ ಮಾಡಿಕೊಡುವ ಪ್ರಬಲ ವಾದ ಮಂಡಿಸಲು ಸಲಹೆ ನೀಡಲಾಗಿದೆ ಎಂದರು.
ಜೊತೆಗೆ ಇಂದು ಸಂಜೆ ಕೇಂದ್ರ ಜಲಶಕ್ತಿ ಸಚಿವರ ಜೊತೆ ರಾಜ್ಯಸರ್ಕಾರದ ನಿಯೋಗ ಮತ್ತು ಕೇಂದ್ರ ಸಚಿವರ ಸಹಯೋಗದಲ್ಲಿ ಸಭೆ ನಡೆಯಲಿದೆ. ಅಲ್ಲಿ ವಾಸ್ತವ ಪರಿಸ್ಥಿತಿಗಳ ಚರ್ಚೆಯಾಗಲಿದೆ ಎಂದು ಹೇಳಿದರು.
ಇದರ ಜೊತೆಗೆ ತಮಿಳುನಾಡು ಕಾವೇರಿ ನದಿ ನೀರನ್ನು ಅನ್ಯಾಯವಾಗಿ ಹಾಗೂ ಕ್ರಿಮಿನಲ್ಲಿ ರೂಪದಲ್ಲಿ ದುರುಪಯೋಗಪಡಿಸಿಕೊಂಡಿದೆ ಎಂಬುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕಿದೆ. ಕಾವೇರಿ ನ್ಯಾಯಾಕರಣದಿಂದ ನೀರು ಹಂಚಿಕೆಯಾದಾಗ ತಮಿಳುನಾಡು ಎಷ್ಟು ಬೆಳೆ ಬೆಳೆಯಬೇಕಿತ್ತು ಅದಕ್ಕಿಂತಲೂ ಏಳೆಂಟು ಪಟ್ಟು ಹೆಚ್ಚು ಬೆಳೆ ಭೂಮಿಯನ್ನು ವಿಸ್ತರಣೆ ಮಾಡಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ತಮಿಳುನಾಡು ಪದೆ ಪದೆ ನೀರನ್ನು ಹರಿಸುತ್ತಿದೆ.
ಕಳೆದ ವರ್ಷ ಕರ್ನಾಟಕದಲ್ಲಿ ಉತ್ತಮ ಮಳೆಯಾಗಿದ್ದರಿಂದ 650 ಟಿಎಂಸಿ ನೀರನ್ನು ಮೆಟ್ಟೂರು ಜಲಾಶಯಕ್ಕೆ ಹರಿಸಲಾಗಿತ್ತು. ಅದರಲ್ಲಿ 400 ಟಿಎಂಸಿಯನ್ನು ಉಳಿಸಿಕೊಂಡು, 200 ಟಿಎಂಸಿಯನ್ನುಸಮುದ್ರಕ್ಕೆ ಹರಿಸಿದ್ದಾರೆ. ಅದನ್ನು ಉಳಿಸಿಕೊಳ್ಳಬಹುದಿತ್ತು ಎಂದರು.
ಈ ವರ್ಷದ ಆರಂಭದಲ್ಲಿ ಜಲಾಶಯಗಳಲ್ಲಿ 111 ಟಿಎಂಸಿ ನೀರು ಸಂಗ್ರಹವಿತ್ತು. ಅದನ್ನು ಬೆಳೆಗಳಿಗೆ ಹರಿಸಿದ್ದಾರೆ. ಕರ್ನಾಟಕದಲ್ಲಿನ ಕುಡಿಯುವ ನೀರಿನ ಅಗತ್ಯವನ್ನು ಕಡೆಗಣಿಸಿ ತಮಿಳುನಾಡು ತನ್ನ ಬೆಳೆಗಳಿಗೆ ನೀರು ಬಿಡಬೇಕು ಎಂದು ಒತ್ತಡ ಹಾಕುತ್ತಿದೆ. ಈ ಕುರಿತಂತೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ ಹೇಳಿದರು.