ಮಂಗಳೂರು: ನನ್ನನ್ನು ವಿಧಾನಸಭೆಯ ಉಪನಾಯಕನನ್ನಾಗಿ ಮಾಡಿದ್ದಕ್ಕೂ ಸಿಎಂ ಇಬ್ರಾಹಿಂ ಅಸಮಾಧಾನಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ವಿಧಾನಸಭೆಯ ಉಪನಾಯಕ, ಶಾಸಕ ಯು.ಟಿ.ಖಾದರ್ ಅವರು ಸೋಮವಾರ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ.ಇಬ್ರಾಹೀಂರನ್ನು ಹಿಂದೆಯೂ ಪಕ್ಷ ಗುರುತಿಸಿದೆ.ಮುಂದೆಯೂ ಗುರುತಿಸಲಿದೆ. ಪಕ್ಷ ಎಂದಿಗೂ ಅಂಬೇಡ್ಕರ್ ಅವರ ಸಂವಿಧಾನ, ಮಹಾತ್ಮ ಗಾಂಧಿಯವರ ತತ್ವ ಸಿದ್ಧಾಂತಗಳ ಆಧಾರದಲ್ಲಿ ಕಾರ್ಯಾಚರಿಸುತ್ತದೆ. ವಿಧಾನಸಭೆ ಉಪನಾಯಕನಾಗಿ ನನ್ನ ಮೇಲಿನ ಜವಾಬ್ದಾರಿ ಹೆಚ್ಚಾಗಿದೆ. ಇದು ಸ್ಥಾನ ಮಾನಕ್ಕಿಂತಲೂ ಹೆಚ್ಚಿನ ಜವಾಬ್ದಾರಿ. ಸರಕಾರದ ವೈಫಲ್ಯಗಳನ್ನು ಇನ್ನಷ್ಟು ಸಮರ್ಥವಾಗಿ ಬಿಂಬಿಸಿ ಹೋರಾಟ ಮಾಡುವ ಜವಾಬ್ದಾರಿ ಎಂದು ಹೇಳಿದರು.ಇದೇ ವೇಳೆ ಅಲ್ಪ ಸಂಖ್ಯಾತ ನಾಯಕರನ್ನು ಕಾಂಗ್ರೆಸ್ ಬದಿಗೊತ್ತುತ್ತಿದೆ ಎಂಬ ಆರೋಪಗಳನ್ನು ನಿರಾಕರಿಸಿದ ಅವರು, ಎಸ್ಎಂ ಕೃಷ್ಣಾ, ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ 5-7 ಸಚಿವರು ಮುಸ್ಲಿಂ ಸಮುದಾಯದವರಾಗಿದ್ದರು. ಹೀಗಿರುವಾಗ ಇಲ್ಲಿ ತಾರತಮ್ಯ ಇಲ್ಲಿದೆ? ಒಂದೇ ಬಾರಿ ಎಲ್ಲವನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಪ್ರತೀಯೊಬ್ಬರೂ ಸಂವಿಧಾನದ ತತ್ತ್ವಗಳನ್ನು ಅನುಸರಿಸುವಂತೆ ಮಾಡುತ್ತಿರುವ ಪಕ್ಷ ಎಂದರೆ ಅದು ಕಾಂಗ್ರೆಸ್ ಮಾತ್ರ ಎಂದು ತಿಳಿಸಿದರು.ವಿಧಾನಸಭೆ ವಿರೋಧ ಪಕ್ಷದ ಉಪನಾಯಕನಾಗಿ ಆಯ್ಕೆಯಾಗುತ್ತಿದ್ದಂತೆಯೇ ನಾನು ಸಿಎಂ ಇಬ್ರಾಹಿಂ ಹಾಗೂ ಪಕ್ಷದ ನಾಯಕರಾದ ತನ್ವೀರ್ ಸೇಠ್, ಜಮೀರ್ ಅಹ್ಮದ್ ಖಾನ್ ಜೊತೆಗೆ ಮಾತುಕತೆ ನಡೆಸಿದೆ. ಎಲ್ಲರೂ ನನಗೆ ಬೆಂಬಲ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ನಾನು ಕೆಲಸ ಮಾಡುತ್ತೇನೆಂದಿದ್ದಾರೆ.
ಬೆಲೆ ಏರಿಕೆ ವಿರುದ್ಧ ವಾಗ್ದಾಳಿ
ಖಾಸಗಿ ಬಸ್ ಸಂಸ್ಥೆಗಳ ಒತ್ತಡಕ್ಕೆ ಮಣಿಯುತ್ತಿರುವ ರಾಜ್ಯ ಸರ್ಕಾರ ಬಸ್ ದರಗಳನ್ನು ಏರಿಕೆ ಮಾಡಿದೆ. ತಮ್ಮ ದರಕ್ಕೆ ಹೊಂದಿಕೊಳ್ಳುವಂತೆ ಮಾಡಲು ಖಾಸಗಿ ಬಸ್ ನಿರ್ವಾಹಕರು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಯಾವುದೇ ಅಧಿಕೃತ ಘೋಷಣೆಗಳಿಲ್ಲದೆಯೇ ಮೌನವಾಗಿಯೇ ಸರ್ಕಾರ ಬಸ್ ಟಿಕೆಟ್ ದರಗಳ ಏರಿಕೆ ಮಾಡಿದೆ. ದೇರಾಲಕಟ್ಟೆ-ಮಂಗಳೂರಿಗೆ (18ಕಿಮೀ) ಪ್ರಯಾಣಿಸಲು ಇದ್ದ ಟಿಕೆಟ್ ದರವನ್ನು ರೂ.13ರಿಂದ ರೂ.20ಕ್ಕೆ ಏರಿಕೆ ಮಾಡಲಾಗಿದೆ. ಟಿಕೆಟ್ ದರ ಏರಿಕೆ ಮಾಡಿದರೆ ಸಾಮಾನ್ಯ ವ್ಯಕ್ತಿ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಇದರ ವಿರುದ್ಧ ಪಕ್ಷ ಪ್ರತಿಭಟನೆ ನಡೆಸಲಿದೆ ಎಂದಿದ್ಹಾರೆ. ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.ಏತನ್ಮಧ್ಯೆ, ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ಕಾಂಗ್ರೆಸ್ ನಾಯಕರು ಮತ್ತು ಧಾರ್ಮಿಕ ಮುಖಂಡರನ್ನು ಭೇಟಿ ಮಾಡಿದ ಖಾದರ್ ಅವರು, ಅವರ ಆಶೀರ್ವಾದಗಳನ್ನು ಪಡೆದುಕೊಂಡರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada