ನವದೆಹಲಿ: ವಿಶ್ವಕರ್ಮ ಜಯಂತಿಯ ಅಂಗವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಪಿ.ಎಂ ವಿಶ್ವಕರ್ಮ’ ಎಂಬ ಹೊಸ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಯೋಜನೆಯಿಂದ ಸಾಂಪ್ರದಾಯಿಕ ಕೌಶಲ ಕಾರ್ಯಗಳಲ್ಲಿ ತೊಡಗಿರುವ ಕುಶಲಕರ್ಮಿಗಳು ಹಾಗೂ ಕರಕುಶಲಿಗರಿಗೆ ಸಹಾಯವಾಗಲಿದೆ.
ಯೋಜನೆ ಅಡಿ ಫಲಾನುಭವಿಗಳಿಗೆ ಪ್ರಮಾಣಪತ್ರ ಮತ್ತು ಗುರುತಿನ ಚೀಟಿ ನೀಡಲಾಗುತ್ತದೆ.
ಮೂಲಭೂತ ಮತ್ತು ಸುಧಾರಿತ ತರಬೇತಿ ಒಳಗೊಂಡ ಕೌಶಲ ಉನ್ನತೀಕರಣ, ₹ 15,000ದಷ್ಟು ಟೂಲ್ಕಿಟ್ ಪ್ರೋತ್ಸಾಹ ಧನ, ₹ 1 ಲಕ್ಷದವರೆಗೆ ಆಧಾರ ರಹಿತ ಸಾಲ (ಮೊದಲ ಕಂತು) ಮತ್ತು ಶೇಕಡಾ 5ರ ಬಡ್ಡಿ ದರದಲ್ಲಿ ₹ 2 ಲಕ್ಷ (ಎರಡನೇ ಕಂತು) ಸಾಲ ನೀಡಲಾಗುವುದು. ಡಿಜಿಟಲ್ ವಹಿವಾಟುಗಳಿಗೆ ಪ್ರೋತ್ಸಾಹ ಧನ ಮತ್ತು ಮಾರುಕಟ್ಟೆ ವ್ಯವಹಾರಕ್ಕೆ ಬೆಂಬಲ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಯೋಜನೆಯಡಿ ನೇಕಾರರು, ಅಕ್ಕಸಾಲಿಗರು, ಕಮ್ಮಾರರು, ಮಡಿವಾಳರು ಮತ್ತು ಕ್ಷೌರಿಕರು ಸೇರಿದಂತೆ ಸುಮಾರು 30 ಲಕ್ಷ ಕುಟುಂಬಗಳಿಗೆ ಪ್ರಯೋಜನ ಸಿಗಲಿದೆ.
ಪಿ.ಎಂ ವಿಶ್ವಕರ್ಮ ಯೋಜನೆ ಪ್ರಾರಂಭಿಸುವುದಾಗಿ ಮೋದಿ ಅವರು ಸ್ವಾತಂತ್ರ್ಯ ದಿನದಂದು ಘೋಷಿಸಿದ್ದರು. ಇದಕ್ಕಾಗಿ ₹ 13 ಸಾವಿರ ಕೋಟಿಯಷ್ಟು ನಿಧಿಯನ್ನು ಮೀಸಲಿಡಲಾಗಿದೆ. ಈ ಯೋಜನೆಯಡಿ ಬಯೋಮೆಟ್ರಿಕ್ ಆಧಾರಿತ ಪಿ.ಎಂ ವಿಶ್ವಕರ್ಮ ಪೊರ್ಟಲ್ನಲ್ಲಿ ಅರ್ಹ ಫಲಾನುಭವಿಗಳು ತಮ್ಮ ಹೆಸರನ್ನು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದಾಗಿದೆ.
ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕರಕುಶಲಿಗರ ಉತ್ಪನ್ನಗಳು ಮತ್ತು ಸೇವೆಗಳ ಲಭ್ಯತೆ ಹಾಗೂ ಗುಣಮಟ್ಟವನ್ನು ಉತ್ತಮಗೊಳಿಸುವುದು ಯೋಜನೆಯ ಗುರಿಯಾಗಿದೆ
ಯೋಜನೆಯ ಲಾಭ ಪಡೆಯಲು ಫಲಾನುಭವಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
ಇಂದು ಪ್ರಧಾನಿ ಮೋದಿ ಅವರ ಹುಟ್ಟುಹಬ್ಬವೂ ಹೌದು, ಅವರು 73ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.