ಬೆಂಗಳೂರು, ಫೆಬ್ರವರಿ 11: ಬೆಂಗಳೂರಿನ ಪ್ರಾಣಾ ಅನಿಮಲ್ ಫೌಂಡೇಶನ್ 24/7 ಆಂಬ್ಯುಲೆನ್ಸ್ ಸೇವೆ ಮತ್ತು ಸಹಾಯವಾಣಿಯನ್ನು ಪ್ರಾರಂಭಿಸುತ್ತಿದೆ. ಅದು ಗಾಯಗೊಂಡ ಇಲ್ಲವೇ ತಕ್ಷಣದ ನೆರವಿನ ಅಗತ್ಯವಿರುವ ಪ್ರಾಣಿಗಳಿಗೆ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸುತ್ತದೆ.
ಪ್ರಾಣಾ ಅನಿಮಲ್ ಫೌಂಡೇಶನ್ ನಗರದಲ್ಲಿ ಆಂಬ್ಯುಲೆನ್ಸ್ಗಳ ಕೊರತೆ ಮತ್ತು ಪ್ರಾಣಿಗಳಿಗೆ ಸರಿಯಾದ ಚಿಕಿತ್ಸಾ ಸೌಲಭ್ಯಗಳನ್ನು ಪರಿಗಣಿಸಿ ಸೇವೆಗಳನ್ನು ಪ್ರಾರಂಭಿಸಲಾಗುತ್ತಿದೆ.
ಹೆಚ್ಚಿನ ಸಂರಕ್ಷಣಾ ಕೇಂದ್ರಗಳು ಮತ್ತು ಮನೆಗಳು ಉತ್ತರ ಹಾಗೂ ಪೂರ್ವ ಬೆಂಗಳೂರಿನಲ್ಲಿ ನೆಲೆಗೊಂಡಿವೆ. ತುರ್ತು ಆರೈಕೆಯ ವಿಳಂಬದಿಂದಾಗಿ ಅನೇಕ ಪ್ರಾಣಿಗಳು ಸಾಯುತ್ತಿವೆ. ಹೀಗಾಗಿ ಅನಿಮಲ್ ಫೌಂಡೇಶನ್ ಆರಂಭಿಸಲು ಪ್ರೇರೇಪಿಸಿತು ಎಂದು ಪ್ರಾಣಾ ಅನಿಮಲ್ ಫೌಂಡೇಶನ್ ಸಂಸ್ಥಾಪಕಿ ಹಾಗೂ ಕನ್ನಡದ ಖ್ಯಾತ ನಟಿ ಸಂಯುಕ್ತ ಹೊರನಾಡು ಹೇಳಿದ್ದಾರೆ.
ಸರಾಸರಿಯಾಗಿ ಒಂದು ಆಶ್ರಯ ಕೇಂದ್ರವು ಪ್ರತಿದಿನ ಪ್ರಾಣಿಗಳ ಆಪಘಾತ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು 50 ಕರೆಗಳನ್ನು ಸ್ವೀಕರಿಸುತ್ತದೆ. ಅವುಗಳಲ್ಲಿ ಹೆಚ್ಚಿನವು ಸೌಲಭ್ಯಗಳ ಕೊರತೆಯಿಂದಾಗಿ ಗಮನಿಸದೆ ಹೋಗುತ್ತವೆ. ಹಸುಗಳು ಮತ್ತು ಇತರ ದೊಡ್ಡ ಪ್ರಾಣಿಗಳನ್ನು ರಕ್ಷಣಾ ಕೇಂದ್ರಗಳಿಗೆ ಸ್ಥಳಾಂತರಿಸುವುದು ಸವಾಲಿನ ಕಾರಣದಿಂದ ದೊಡ್ಡ ಆಂಬ್ಯುಲೆನ್ಸ್ಗಳ ಅಗತ್ಯವಿದೆ ಎಂದು ನಟಿ ಸಂಯುಕ್ತಾ ಹೇಳಿದರು.
ಫೆಬ್ರವರಿ 14 ರಂದು ಪ್ರಾರಂಭವಾಗಲಿರುವ ಆಂಬ್ಯುಲೆನ್ಸ್ಗಳು ದಕ್ಷಿಣ ಬೆಂಗಳೂರಿನಲ್ಲಿ ಇರುತ್ತವೆ. ನಗರದಾದ್ಯಂತದ ದೂರುಗಳನ್ನು ಆಲಿಸಿ ಸ್ಪಂದಿಸುತ್ತವೆ. ಪ್ರತಿಷ್ಠಾನವು ಚಿಕಿತ್ಸೆ ಸೌಲಭ್ಯಗಳನ್ನು ಒದಗಿಸಲು ನಾಲ್ಕು ಆಸ್ಪತ್ರೆಗಳೊಂದಿಗೆ ಕೈಜೋಡಿಸಿದೆ. ಅವರು 24/7 ಪಶುವೈದ್ಯಕೀಯ ಚಿಕಿತ್ಸಾಲಯವನ್ನು ಪ್ರಾರಂಭಿಸಲು ಯೋಜಿಸಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಪ್ರಾಣಾ ಅನಿಮಲ್ ಫೌಂಡೇಶನ್ 24/7 ಆಂಬ್ಯುಲೆನ್ಸ್ ಸೇವೆ ಮತ್ತು ಸಹಾಯವಾಣಿಯನ್ನು ನಟಿ ಸಂಯುಕ್ತ ಹೊರನಾಡು ಅವರು ಫೆಬ್ರವರಿ 14ರಂದು ಪ್ರಾರಂಭಿಸಲಿದ್ದಾರೆ. ಇದರ ಉದ್ಘಾಟನೆಗೆ ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್ ಅವರನ್ನು ಕರೆಸಲಾಗುತ್ತಿದೆ. ಕನ್ನಡದ ನಟಿಯೊಬ್ಬರು ತಾವು ದುಡಿದ ಹಣ ಹಾಗೂ ತಮ್ಮ ಸಮಯವನ್ನು ಮೂಕ ಜೀವಿಗಳ ವೇದನೆಗೆ ಸ್ಪಂದಿಸಲು ಮೀಸಲು ಇಟ್ಟಿರುವುದು ಶ್ಲಾಘನೀಯವಾಗಿದೆ.
ನಟಿ ಸಂಯುಕ್ತ ಹೊರನಾಡು ಅವರಿಗೆ ಪ್ರಾಣಿಗಳೆಂದರೆ ಬಹು ಇಷ್ಟ. ಹೀಗಾಗಿ ಅವರು ಸತತ ಐದು ವರ್ಷಗಳಿಂದಲೂ ಸಮಾಜಮುಖಿಯಾಗಿ ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಅವರಿ ಅವರ ಸ್ನೇಹಿತರಾದ ಅನಿರುದ್ಧ್ ಹಾಗೂ ಅದಿತಿನಾಗ್ ಕೂಡ ಸಾಥ್ ನೀಡಿದ್ದಾರೆ. ಚಿಕ್ಕಂದಿನಿಂದಲೂ ಅವರು ಪಶುವೈದ್ಯರಾಗಬೇಕು ಎಂದುಕೊಂಡಿದ್ದರು. ಕೊರೋನಾ ಸಮಯದಿಂದಲೂ ಅವರು ಪ್ರಾಣಿಗಳಿಗೆ ನೆರವು ನೀಡುತ್ತಿದ್ದಾರೆ. ಈ ಕೆಲಸವೇ ಅವರಿಗೆ ಫೌಂಡೇಶನ್ ಆರಂಭಿಸಲು ಪ್ರೇರಣೆಯಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada