ಲಖ್ನೋ,ಸೆ.10- ರೈತನೊಬ್ಬ ಮನೆಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿಷಯ ತಿಳಿದ ಪತ್ನಿ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಚಿಂತಾಜನಕ ಸ್ಥಿತಿಯಲ್ಲಿರುವ ಘಟನೆ ಉತ್ತರಪ್ರದೇಶದ ಮೀರ್ ಜಿಲ್ಲೆಯ ಅಕ್ಬರ್ಪುರ ಗ್ರಾಮದಲ್ಲಿ ನಡೆದಿದೆ.
ವಿಪಿನ್ಕುಮಾರ್ (35) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಸುಂದರಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ದಂಪತಿಗೆ ಮಕ್ಕಳಿರಲಿಲ್ಲ. ತುಂಡು ಭೂಮಿಗಾಗಿ ವಿಪಿನ್ ತನ್ನ ಕಿರಿಯ ಸಹೋದರ ಅರವಿಂದ್ ಅವರೊಂದಿಗೆ ವಿವಾದ ಹೊಂದಿದ್ದರು. ಇಡೀ ಭೂಮಿಯನ್ನು ವಿಪಿನ್ನಿಂದ ಕಿತ್ತುಕೊಳ್ಳಲು ಬಯಸಿದ್ದರು ಇವರ ತಂದೆಯೂ ಸೋದರನಿಗೆ ಬೆಂಬಲವಾಗಿ ನಿಂತಿದ್ದರು ಎಂದು ನೆರೆಹೊರೆಯವರು ತಿಳಿಸಿದ್ದಾರೆ.
ಇದರಿಂದ ನೊಂದಿದ್ದ ವಿಪಿನ್ಕುಮಾರ್ ಮನೆಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುಂಡೇಟಿನ ಶಬ್ದ ಕೇಳಿದ ಪತ್ನಿ ಸ್ಥಳಕ್ಕೆ ಓಡಿ ಬಂದು ನೋಡಿದಾಗ ಪತಿ ಸತ್ತಿಬಿದ್ದಿರುವುದು ಕಂಡಿದ್ದಾರೆ. ಘಟನೆಯಿಂದ ಉದ್ವೇಗ, ದುಃಖಕ್ಕೊಳಗಾದ ಆಕೆ ತಾನು ಕೂಡ ವಿಷ ಸೇವಿಸಿ ಸಾಯಲು ಯತ್ನಿಸಿದ್ದಾಳೆ ಎಂದು ಮೀರತ್ನ ಗ್ರಾಮಾಂತರ ಎಸ್ಪಿ ಕಮಲೇಶ್ ಬಹದ್ದೂರ್ ತಿಳಿಸಿದ್ದಾರೆ.
ಸದ್ಯ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸಲಾಗುತ್ತಿದೆ. ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.