ಹುಳಿಯಾರು: ಬೆಸ್ಕಾಂ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ವಿದ್ಯುತ್ ಅವಘಡಕ್ಕೆ ತುತ್ತಾದ ಕಾರ್ಮಿಕನೋರ್ವ ಪ್ರಾಣಾಪಾಯದಿಂದ ಪಾರಾದ ಘಟನೆ ತುಮಕೂರು ಜಿಲ್ಲೆಯ ಹುಳಿಯಾರಿನಲ್ಲಿ ವರದಿಯಾಗಿದೆ.
ಘಟನೆಯಲ್ಲಿ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿಯನ್ನು ಗದಗ ಮೂಲದ ಕೂಲಿ ಕಾರ್ಮಿಕ ಸಮೀರ್ ಎಂದು ಗುರುತಿಸಲಾಗಿದೆ.
ವಿದ್ಯುತ್ ಗುತ್ತಿಗೆದಾರ ಯಲ್ಲಪ್ಪ ಎಂಬವರು ಕೆ.ಬಿ.ಕ್ರಾಸ್ 220 ಕೆ.ವಿ. ಸ್ವೀಕರಣಾ ಕೇಂದ್ರದ 4ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಗುತ್ತಿಗೆ ಪಡೆದಿದ್ದರು ಎನ್ನಲಾಗಿದೆ.
ರವಿವಾರ ಹುಳಿಯಾರು ಪಟ್ಟಣದಲ್ಲಿ ಕಾರ್ಮಿಕರು ಹಳೆಯ ವೈರ್ ಬದಲಾಯಿಸಿ, ಹೊಸ ವೈರ್ ಹಾಕುವ ಕಾಮಗಾರಿಯನ್ನು ಕೈಗೊಂಡಿದ್ದರು ಎನ್ನಲಾಗಿದೆ.
ಕೆ.ಬಿ.ಕ್ರಾಸ್ನಿಂದ ಮೇನ್ ಸಪ್ಲೈ ತೆಗೆದ ನಂತರವೂ ಲೈನ್ಕ್ಲಿಯರ್ ಪಡೆದುಕೊಂಡಿದ್ದರೂ ಹುಳಿಯಾರು ಟೌನ್ನ ಡಿಸಿಸಿ ಬ್ಯಾಂಕ್ ಬಳಿ ಕೆಲಸ ನಿರ್ವಹಿಸುತ್ತಿರುವಾಗ ಕೂಲಿ ಕಾರ್ಮಿಕ ಸಮೀರ್ಗೆ ವಿದ್ಯುತ್ ತಗಲಿ ಕಂಬದಲ್ಲಿ ನೇತಾಡುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಬಿದುರಿನ ಏಣಿಯ ಮೂಲಕ ಕಂಬದಲ್ಲಿದ್ದ ಸಮೀರ್ಗೆ ತಿವಿದು ಗೂಡಂಗಡಿಯ ಮೇಲೆ ಬೀಳಿಸಲಾಯಿತು. ನಂತರ ಬೆಸ್ಕಾಂ ಸಿಬ್ಬಂದಿಗಳೇ ಕೃತಕ ಉಸಿರಾಟ ಕೊಟ್ಟು ಹುಳಿಯಾರು ಸರಕಾರಿ ಆಸ್ಪತ್ರೆಗೆ ಕಾರ್ಮಿಕನನ್ನು ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಟ್ಟು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಉತ್ತಮ ಚಿಕಿತ್ಸೆ ಹಾಗೂ ಬೆಸ್ಕಾಂ ಸಿಬ್ಬಂದಿಯ ಸಹಾಯದಿಂದ ಸಮೀರ್ ಆರೋಗ್ಯವಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹುಳಿಯಾರಿನ ತನ್ನ ಮನೆಯಲ್ಲಿ ವಿಶ್ರಾಂತಿ ಸಹ ಪಡೆಯುತ್ತಿದ್ದಾರೆ.
ಸಮೀರ್ ಲೈನ್ ಗ್ರೌಡಿಂಗ್ ಮಾಡಿಕೊಂಡು ಕೆಲಸ ನಿರ್ವಹಿಸುತ್ತಿದ್ದರೆ ಈ ಅವಘಡ ಸಂಭವಿಸುತ್ತಿರಲಿಲ್ಲ. ಬೆಸ್ಕಾಂ ಹುಳಿಯಾರು ಶಾಖೆಯ ಅಧಿಕಾರಿಗಳು ಮತ್ತು ನೌಕರರು ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ಮತ್ತು ಸಮಯ ಪ್ರಜ್ಞೆಯಿಂದಾಗಿ ಸಮೀರ್ ಬದುಕಿ ಉಳಿದಿದ್ದಾನೆ ಎಂದು ಹುಳಿಯಾರು ಬೆಸ್ಕಾಂ ಶಾಖಾ ವ್ಯವಸ್ಥಾಪಕ ಉಮೇಶ್ನಾಯ್ಕ್ ತಿಳಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada