ಶ್ರೀನಗರ,ಸೆ.14- ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೋಕರ್ನಾಗ್ ಪ್ರದೇಶದಲ್ಲಿ ಮೂವರು ವೀರ ಯೋಧರನ್ನು ಬಲಿಪಡೆದ ಪ್ರತೀಕಾರಕ್ಕೆ ಭದ್ರತಾ ಪಡೆಗಳು ಇಬ್ಬರು ಲಷ್ರ್ಕ-ಎ-ತೊಯ್ಬಾ ಭಯೋತ್ಪಾದಕರನ್ನು ಸುತ್ತುವರೆದಿವೆ. ಈ ಕುರಿತು ಕಾಶ್ಮೀರ ವಲಯ ಪೊಲೀಸರು ಎಕ್ಸ್ ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.
ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಮುನ್ನಡೆಯುತ್ತಿದ್ದ ಕರ್ನಲ್ ಮನ್ಪ್ರೀತ್ ಸಿಂಗ್, ಮೇಜರ್ಆಶಿಶ್ ಧೋನಕ್ ಮತ್ತು ಡಿಎಸ್ಪಿ ಹುಮಾಯೂನ್ ಭಟ್ ಅವರ ಅಚಲ ಶೌರ್ಯಕ್ಕೆ ಗೌರವಪೂರ್ವಕ ಶ್ರದ್ಧಾಂಜಲಿ. ಉಝೈರ್ ಖಾನ್ ಸೇರಿದಂತೆ ಇಬ್ಬರು ಎಲಇಟಿ ಭಯೋತ್ಪಾದಕರನ್ನು ಸುತ್ತುವರೆದಿದ್ದು ನಮ್ಮ ಪಡೆಗಳು ಅಚಲವಾದ ಸಂಕಲ್ಪದೊಂದಿಗೆ ಮುಂದುವರಿಯುತ್ತಿವೆ ಎಂದಿದ್ದಾರೆ.
ಮತ್ತೊಂದೆಡೆ, ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್ಕೌಂರ್ಟ ನಡೆದ ಅನಂತ್ನಾಗ್ನ ಕೋಕರ್ನಾಗ್ ಪ್ರದೇಶದ ದೃಶ್ಯಗಳು ಮತ್ತು ಹುತಾತ್ಮ ಡಿಎಸ್ಪಿ ಹುಮಾಯೂನ್ ಭಟ್ ನಿವಾಸದ ದೃಶ್ಯಗಳು ಸಿಕ್ಕಿವೆ. ಬುದ್ಗಾನ್ನಲ್ಲಿ ಡಿಎಸ್ಪಿ ಹುಮಾಯೂನ್ ಮುಝಮ್ಮಿಲ್ ಭಟ್ ಅಂತ್ಯಕ್ರಿಯೆ ನೆರವೇರಿದೆ.
ಪೊಲೀಸ್ ಅಧಿಕಾರಿ ಮತ್ತು ಇಬ್ಬರು ಸೇನಾ ಅಧಿಕಾರಿಗಳ ದೇಹಗಳು ದಟ್ಟ ಅರಣ್ಯ ಪ್ರದೇಶದಲ್ಲಿ ಸಿಕ್ಕಿವೆ. ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಏರ್ಲಿಫ್ಟ್ ಮಾಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅವರು ಬದುಕುಳಿಯಲಿಲ್ಲ. ಅಡಗಿದ್ದ ಉಗ್ರರು ಪಾಕಿಸ್ತಾನ ಪೋಷಿತ ಲಷ್ಕರ್-ಎ -ತಯಬಾ ಸಂಘಟನೆಯ ಅಂಗಸಂಸ್ಥೆ ದಿ ರೆಸಿಸ್ಟೆನ್ಸ್ ಫ್ರಂಟ್ ಜತೆಗೆ ನಂಟು ಹೊಂದಿರುವವರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕರ್ನಲ್ ಮನ್ಪ್ರೀತ್ ಸಿಂಗ್ ಅವರು 19 ರಾಷ್ಟ್ರೀಯ ರೈಫಲ್ಸ್ ಘಟಕದ ಕಮಾಂಡಿಂಗ್ ಅಧಿಕಾಯಾಗಿದ್ದು, ಅವರು ಪ್ರತಿಷ್ಠಿತ ಸೇನಾ ಪದಕ ಪಡೆದುಕೊಂಡಿದ್ದರು. ಮೃತ ಪೊಲೀಸ್ ಅಧಿಕಾರಿ ಹುಮಾಯುನ್ ಭಟ್ ಅವರ ತಂದೆ ಗುಲಾಂ ಹಸನ್ ಭಟ್ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯ ನಿವೃತ್ತ ಐಜಿಯಾಗಿದ್ದಾರೆ. ಅವರು ಹುತಾತ್ಮ ಪುತ್ರನ ದೇಹಕ್ಕೆ ಶ್ರದ್ಧಾಂಜಲಿ ಸಲ್ಲಿಸುವ ದೃಶ್ಯ ಮನಕಲಕುವಂತಿತ್ತು.
ಇದಕ್ಕೂ ಮುನ್ನ ಕಣಿವೆಯ ರಾಜೌರಿಯ ನಾರ್ಲಾದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಈ ಕಾರ್ಯಾಚರಣೆ ವೇಳೆ ಕೆಂಟ್ ಎಂಬ ಹೆಸರಿನ ಶ್ವಾನವು ಉಗ್ರರ ಗುಂಡಿಗೆ ಅಡ್ಡ ನಿಂತು ಯೋಧನ ಜೀವ ಕಾಪಾಡಿ, ತನ್ನ ಪ್ರಾಣ ಅರ್ಪಿಸಿದೆ. ಮೃತ ಶ್ವಾನಕ್ಕೆ ಭಾರತೀಯ ಸೇನೆ ಭಾವುಕ ಗೌರವ ಸಲ್ಲಿಸಿದೆ.
ಗೃಹಪ್ರವೇಶಕ್ಕೆ ಕಾಯುತ್ತಿತ್ತು ಕುಟುಂಬ:
ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಮೇಜರ್ ಆಶಿಶ್ ಧೋನಕ್ ಹೊಸದಾಗಿ ತಮ್ಮ ಕನಸಿನ ಮನೆ ನಿರ್ಮಿಸಿದ್ದು, ಗೃಹಪ್ರವೇಶಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದವು. ಕುಟುಂಬ ಮಗನಿಗಾಗಿ ಕಾಯುತ್ತಿತ್ತು. ಆದರೆ, ನಿನ್ನೆ ಭಯೋತ್ಪಾದಕರ ವಿರುದ್ಧ ನಡೆದ ಗುಂಡಿನ ದಾಳಿಯಲ್ಲಿ ವೀರ ಯೋಧ ಆಶಿಶ್ ಮೃತಪಟ್ಟರು. ಈ ಸುದ್ದಿ ಆಶಿಶ್ ಮನೆಯವರಿಗೆ ತಿಳಿದಿರಲಿಲ್ಲ. ಆದರೆ ಟಿವಿಯಲ್ಲಿ ಪ್ರಸಾರವಾದ ಸುದ್ದಿ ನೋಡಿ, ಮಗ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿರುವುದು ತಿಳಿದಿದೆ.
ವಿಚಾರ ತಿಳಿದ ಕುಟುಂಬದಲ್ಲಿ ಒಂದೆಡೆ ಮಗ ಪರಮ ತ್ಯಾಗ ಮಾಡಿರುವ ಹೆಮ್ಮೆ, ಮತ್ತೊಂದೆಡೆ ಮನೆಮಗನನ್ನು ಕಳೆದುಕೊಂಡ ದುಃಖ ಆವರಿಸಿದೆ. ಆಶಿಶ್ ಕುರಿತು ಅವರ ಚಿಕ್ಕಪ್ಪ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು. ಆಶಿಶ್ ಬಾಲ್ಯದಿಂದಲೂ ಭಾರತೀಯ ಸೇನೆ ಸೇರಲು ಆಸಕ್ತಿ ಹೊಂದಿದ್ದ. ಉತ್ತಮ ವಿದ್ಯಾರ್ಥಿಯಾಗಿದ್ದಲ್ಲದೇ ಕ್ರೀಡೆಯಲ್ಲಿಯೂ ಆಸಕ್ತಿ ಹೊಂದಿದ್ದನು. ಬ್ಯಾಡ್ಮಿಂಟನ್ನಲ್ಲಿ ಚಿನ್ನದ ಪದಕ ಗೆದ್ದಿದ್ದ. ಚಿಕ್ಕವನಿದ್ದಾಗಲೂ ಆಟಿಕೆ ಬಂದೂಕುಗಳೊಂದಿಗೆ ಆಟವಾಡುತ್ತಿದ್ದ. ತನ್ನನ್ನು ಸೈನಿಕ ಎಂದು ಕರೆಸಿಕೊಳ್ಳಲು ಇಷ್ಟಪಡುತ್ತಿದ್ದ.
ಹಾಗೆಯೇ ಯೋಧ ಆಶಿಶ್ನ 2ನೇ ಚಿಕ್ಕಪ್ಪನ ಮಗ ಮೊದಲು ಲೆಫ್ಟಿನೆಂಟ್ ಆಗಿ ನೇಮಕಗೊಂಡಿದ್ದ. ಇದನ್ನು ನೋಡಿದ ಆಶಿಶ್ಗೂ ಲೆಫ್ಟಿನೆಂಟ್ ಆಗುವ ಕನಸಿತ್ತು. 2012ರಲ್ಲಿ, ಆಶಿಶ್ ಲೆಫ್ಟಿನೆಂಟ್ ಆಗಿ ನೇಮಕಗೊಂಡರು ಎಂದು ತಿಳಿಸಿದರು. ಆಶಿಶ್ 2015ರಲ್ಲಿ ಜಿಂದ್ ಅರ್ಬನ್ ಎಸ್ಟೇಟ್ ನಿವಾಸಿ ಜ್ಯೋತಿ ಅವರನ್ನು ವಿವಾಹವಾಗಿದ್ದು, ಎರಡೂವರೆ ವರ್ಷದ ಮಗಳಿದ್ದಾಳೆ. ದೇಶಕ್ಕಾಗಿ ಪ್ರಾಣ ಅರ್ಪಿಸಿದ ಆಶಿಶ್ ತನ್ನ ಕುಟುಂಬ, ತನ್ನ ಮುದ್ದಿನ ಮಗಳು ವಾಮಿಕಾಳನ್ನು ಅಗಲಿದ್ದಾರೆ.