ಲಖ್ನೋ,ಸೆ.13- ತೆರಿಗೆ ವಂಚಿಸಿದ ಆರೋಪದ ಹಿನ್ನಲೆಯಲ್ಲಿ ಸಮಾಜವಾದಿ ಪಕ್ಷದ ಮುಖಂಡ ಹಾಗೂ ಮಾಜಿ ಸಚಿವ ಅಜಂಖಾನ್ ಅವರ ನಿವಾಸ ಮತ್ತು ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಜಧಾನಿ ಲಖ್ನೋ, ರಾಂಪುರ್, ಮೀರತ್, ಗಾಜಿಯಾಬಾದ್, ಶರಣಪುರ್, ಸೀತಾಪುರ್ ಹಾಗೂ ಮಧ್ಯಪ್ರದೇಶಸೇರಿದಂತೆ ಒಟ್ಟು 30 ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಅಲ್-ಜೋಹಾರ್-ಟ್ರಸ್ಟ್ನ ಮುಖ್ಯಸ್ಥರು ಆಗಿರುವ ಅಜಂಖಾನ್ ನೂರಾರು ಕೋಟಿ ತೆರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಐಟಿ ಅಧಿಕಾರಿಗಳ ಹಲವು ತಂಡ ಮಿಂಚಿನ ದಾಳಿ ನಡೆಸಿದೆ.ದಾಳಿ ಸಂದರ್ಭದಲ್ಲಿ ತೆರಿಗೆ ವಂಚನೆಗೆ ಸಂಬಂಧಿಸಿದ ಕೆಲವು ದಾಖಲೆಗಳು, ಬ್ಯಾಂಕ್ ಖಾತೆಗಳು, ಸ್ಥಿರ-ಚರಾಸ್ತಿ ಸೇರಿದಂತೆ ಮತ್ತಿತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೋರಿಯಾ ಮಹಿಳೆಗೆ ಚುಂಬಿಸಲು ಯತ್ನಿಸಿದ ಭಾರತೀಯನ ಬಂಧನ
ಹಲವಾರು ವರ್ಷಗಳಿಂದ ಅಲ್-ಜೋಹರ್ ಟ್ರಸ್ಟ್ನ ಮುಖ್ಯಸ್ಥರಾಗಿರುವ ಅಜಂಖಾನ್ ಹಲವಾರು ಕೋಟಿ ತೆರಿಗೆ ವಂಚಿಸಿದ್ದಾರೆ ಎಂಬ ಆರೋಪಗಳಿವೆ. ಈ ವರ್ಷದ ಆರಂಭದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ರಾಂಪುರದಲ್ಲಿ 3.2 ಎಕರೆ ಜಾಗವನ್ನು ಟ್ರಸ್ಟ್ಗೆ ಸಂಶೋಧನಾ ಸಂಸ್ಥೆ ಸ್ಥಾಪಿಸಲು ನೀಡಿದ್ದ ಗುತ್ತಿಗೆಯನ್ನು ರದ್ದುಗೊಳಿಸಿತ್ತು.
ಕೇವಲ 100 ರೂ. ಬಾಡಿಗೆ ಆಧಾರದ ಮೇಲೆ 30 ವರ್ಷ ಲೀಸ್ಗೆ ಹಿಂದಿನ ಸರ್ಕಾರ ಈ ಜಾಗವನ್ನು ನೀಡಿತ್ತು. ಆದರೆ ಇಲ್ಲಿ ಸಂಶೋಧನಾ ಸಂಸ್ಥೆಯನ್ನು ನಡೆಸದೆ ಅಕ್ರಮ ನಡೆದ ಹಿನ್ನಲೆಯಲ್ಲಿ ಗುತ್ತಿಗೆಯನ್ನು ರದ್ದು ಮಾಡಲಾಗಿತ್ತು.ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸಂಪುಟದಲ್ಲಿ ಸಚಿವರಾಗಿದ್ದ ಅಜಂಖಾನ್ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಸರುವಾಸಿಯಾಗಿದ್ದರು.