ಶಿವಮೊಗ್ಗ: ಸರ್ಕಾರಕ್ಕೆ ಸಚಿವ ಸಂಪುಟ ವಿಸ್ತರಣೆ ಈಗ ಅನಿವಾರ್ಯವಾಗಿದ್ದು ನಾಲ್ಕು ಸಚಿವ ಸ್ಥಾನ ಖಾಲಿಯಿದೆ. ಸದ್ಯ ಸಚಿವ ಸ್ಥಾನಕ್ಕೆ ಸಾಕಷ್ಟು ಪೈಪೋಟಿಯಿದೆ. ನನಗೆ ಯಾವ ಹುದ್ದೆ ಕೊಟ್ಟರೂ ನಿಭಾಯಿಸಲು ಸಿದ್ಧನಿದ್ದೇನೆ ಎಂದು ಹಿರಿಯ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಅವರು, ರಾಜ್ಯದ ಜನರು ಬಿಜೆಪಿ ಪರವಾಗಿಯೇ ಇದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಗಳೇ ಅದಕ್ಕೆ ಸಾಕ್ಷಿಯಾಗಿದೆ. ಇನ್ನು ವಿಧಾನಸಭೆ ಚುನಾವಣೆಗೆ ಒಂದು ವರ್ಷ ಮೂರು ತಿಂಗಳು ಬಾಕಿಯಿದೆ. ಈ ಸಂದರ್ಭದಲ್ಲಿ ಸಚಿವ ಸ್ಥಾನ ಖಾಲಿಯಿಡುವುದು ಸೂಕ್ತವಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದ್ದು ಕೇಂದ್ರ ಮತ್ತು ರಾಜ್ಯದ ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದರು.
ನಾಲ್ಕು ಖಾಲಿಯಿರುವ ಸ್ಥಾನಗಳನ್ನು ಇದುವರೆಗೆ ಯಾವ ಜಿಲ್ಲೆಗೆ, ಕ್ಷೇತ್ರಕ್ಕೆ ಪ್ರಾತಿನಿಧ್ಯ ಸಿಗದವರಿಗೆ ಈ ಬಾರಿ ನೀಡುವುದು ರಾಜಕೀಯವಾಗಿ ಸೂಕ್ತ. ಅಭಿವೃದ್ಧಿ ಕಾರ್ಯಗಳಿಗೂ ಒಳ್ಳೆಯದಾಗುತ್ತದೆ ಎಂದರು.
ಸಂಪುಟದಿಂದ ತೆಗೆದರೂ ಬೇಸರವಿಲ್ಲ: ಸದ್ಯಕ್ಕೆ ಸಚಿವ ಸಂಪುಟದಲ್ಲಿ ನಾನೇ ಹಿರಿಯ ಸಚಿವ, ನನ್ನನ್ನು ಸಚಿವ ಸ್ಥಾನದಿಂದ ತೆಗೆದು ಪಕ್ಷ ಸಂಘಟನೆಯ ಅಥವಾ ಬೇರೆ ಜವಾಬ್ದಾರಿ ಕೊಟ್ಟರೆ ಏನೂ ಬೇಸರವಿಲ್ಲ, ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ.ಪಕ್ಷದ ಸಂಘಟನೆ ನನಗೆ ಬಹಳ ಇಷ್ಟ, ರಾಜ್ಯದ, ಪಕ್ಷದ, ಸರ್ಕಾರದ, ಜನರ ಹಿತದೃಷ್ಟಿಯಿಂದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಿದ್ದೇನೆ ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada