ದೇಶದಲ್ಲಿ ಆತಂಕವನ್ನು ಸೃಷ್ಟಿ ಮಾಡಿದ ಎಚ್3ಎನ್2 ವೈರಸ್ನಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ಶುಕ್ರವಾರ ತಿಳಿಸಿವೆ. ಹರಿಯಾಣದಲ್ಲಿ ಓರ್ವ ವ್ಯಕ್ತಿ ಮೃತಪಟ್ಟರೆ, ಮತ್ತೊಬ್ಬರು ಕರ್ನಾಟಕದಲ್ಲಿ ಎಚ್3ಎನ್2ನಿಂದಾಗಿ ಸಾವನ್ನಪ್ಪಿದ್ದಾರೆ.
ಇಲ್ಲಿಯವರೆಗೆ ದೇಶದಲ್ಲಿ ಸುಮಾರು 90 ಎಚ್3ಎನ್2 ಪ್ರಕರಣಗಳು ದಾಖಲಾಗಿವೆ. ಜೊತೆಗೆ ಎಚ್1ಎನ್1 ವೈರಸ್ನ ಎಂಟು ಪ್ರಕರಣಗಳು ವರದಿಯಾಗಿವೆ.
ಗಮನಾರ್ಹವಾಗಿ ಕಳೆದ ಹಲವಾರು ದಿನಗಳಿಂದ ದೇಶದಲ್ಲಿ ಜ್ವರ ಪ್ರಕರಣಗಳು ಹೆಚ್ಚುತ್ತಿವೆ. ಹೆಚ್ಚಿನ ಸೋಂಕುಗಳು ಎಚ್3ಎನ್2 (H3N2) ವೈರಸ್ನಿಂದ ಉಂಟಾಗುತ್ತವೆ. ಇದನ್ನು ‘ಹಾಂಗ್ ಕಾಂಗ್ ಫ್ಲೂ’ ಎಂದೂ ಕರೆಯುತ್ತಾರೆ. ಭಾರತದಲ್ಲಿ ಇದುವರೆಗೆ ಎಚ್3ಎನ್2 ಮತ್ತು ಎಚ್1ಎನ್1 ಸೋಂಕುಗಳು ಮಾತ್ರ ಪತ್ತೆಯಾಗಿವೆ. ಈ ಸೋಂಕಿನ ಲಕ್ಷಣಗಳೆಂದರೆ ಜ್ವರ, ಶೀತ, ಕೆಮ್ಮು, ಉಸಿರಾಟದ ತೊಂದರೆ ಆಗಿದೆ.
ತಜ್ಞರ ಪ್ರಕಾರ, ವೈರಸ್ ಹೆಚ್ಚು ಸಾಂಕ್ರಾಮಿಕವಾಗಿದೆ. ಕೆಮ್ಮುವಿಕೆ, ಸೀನುವಿಕೆ ಮತ್ತು ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದ ಮೂಲಕ ಹರಡುತ್ತದೆ.
ಕೈ ಮತ್ತು ಮಾಸ್ಕ್ಗಳನ್ನು ನಿಯಮಿತವಾಗಿ ತೊಳೆಯುವುದು ಸೇರಿದಂತೆ ಕೋವಿಡ್ ತರಹದ ಮುನ್ನೆಚ್ಚರಿಕೆಗಳನ್ನು ವೈದ್ಯರು ಸಲಹೆ ನೀಡಿದ್ದಾರೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಸೀನುವಾಗ ಮತ್ತು ಕೆಮ್ಮುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವಂತೆ ಸಾರ್ವಜನಿಕರಿಗೆ ಸೂಚಿಸಿದೆ. ಪದೇ ಪದೇ ಕಣ್ಣು ಮತ್ತು ಮೂಗನ್ನು ಸ್ಪರ್ಶಿಸುವುದನ್ನು ತಪ್ಪಿಸಿ. ಜ್ವರ ಮತ್ತು ದೇಹದ ನೋವು ಹೆಚ್ಚಾದಲ್ಲಿ ವೈದ್ಯರನ್ನು ಸಂಪರ್ಕಿಸಿ ಎಂದಿದ್ದಾರೆ.
ದೀರ್ಘಕಾಲದ ವೈದ್ಯಕೀಯ ಸಮಸ್ಯೆಗಳಿಂದಾಗಿ ದುರ್ಬಲಗೊಂಡ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿರುವ ಜನರಲ್ಲದೆ, ವಯಸ್ಸಾದ ವಯಸ್ಕರು ಮತ್ತು ಕಿರಿಯ ಮಕ್ಕಳನ್ನು ಈ ವೈರಸ್ ಬಾದಿಸುತ್ತದೆ.
ಕರ್ನಾಟಕದಲ್ಲಿ ಓರ್ವ ಎಚ್3ಎನ್2 ವೈರಸ್ಗೆ ಸಾವು
ಈ ಸೋಂಕಿನಿಂದ ಕರ್ನಾಟಕದ ಹಾಸನ ಜಿಲ್ಲೆಯ ಆಲೂರಿನಲ್ಲಿ 78 ವರ್ಷದ ವೃದ್ಧ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಾರ್ಚ್ 1 ರಂದು ಇವರು ಮೃತಪಟ್ಟಿದ್ದು, ಇವರಿಗೆ ಎಚ್3 ಎನ್2 ವೈರಸ್ ದೃಢ ಆಗಿರುವ ಬಗ್ಗೆ ವೈದ್ಯರು ಇಂದು ಮಾಹಿತಿ ನೀಡಿದ್ದಾರೆ. ಗಂಟಲು ನೋವು, ಕೆಮ್ಮಿನಿಂದ ಬಳಲುತ್ತಿದ್ದರಿಂದ ವೃದ್ಧ ಆಸ್ಪತ್ರೆಗೆ ಸೇರಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಕೆಮ್ಮು, ಜ್ವರ ಹಾಗೂ ಕೋವಿಡ್ ರೀತಿಯ ರೋಗಲಕ್ಷಣದ ಎಚ್3ಎನ್2 26 ಪ್ರಕರಣಗಳು ಪತ್ತೆಯಾಗಿವೆ. ಇದರ ಬೆನ್ನಲ್ಲೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಾಂತ್ರಿಕ ಸಲಹಾ ಸಮಿತಿ ಜೊತೆಗೆ ಸಭೆ ನಡೆಸಿದ್ದು, ಸೋಮವಾರ ವಿಸ್ತೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada