ಕನ್ನಡ ಚಿತ್ರರಂಗದ ವರನಟ ಡಾ ರಾಜ್ಕುಮಾರ್ ಕುಟುಂಬದ ಮೂರನೇ ತಲೆಮಾರಿನ ನಟರ ಎಂಟ್ರಿ ಈಗಾಗಲೇ ವಿನಯ್ ರಾಜ್ಕುಮಾರ್ ಮೂಲಕ ಆಗಿದ್ದು, ಇದೀಗ ವಿನಯ್ ರಾಜ್ಕುಮಾರ್ ತಮ್ಮ ಯುವ ರಾಜ್ಕುಮಾರ್ ಎಂಟ್ರಿಗೆ ಸಿದ್ಧತೆ ನಡೆಯುತ್ತಿದೆ. ಹೌದು, ರಾಘವೇಂದ್ರ ರಾಜ್ಕುಮಾರ್ ಕಿರಿಯ ಪುತ್ರ ಯುವ ರಾಜ್ಕುಮಾರ್ ಚಿತ್ರರಂಗ ಪ್ರವೇಶಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದು, ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಿದೆ.
ಇನ್ನು ಯುವ ರಾಜ್ಕುಮಾರ್ ಯುವ ರಣಧೀರ ಕಂಠೀರವ ಎಂಬ ಚಿತ್ರದ ಮೂಲಕ ಇಂಡಸ್ಟ್ರಿಗೆ ಕಾಲಿಡಬೇಕಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿಲ್ಲ. ಚಿತ್ರದ ಘೋಷಣೆಗಾಗಿ ಮಾಡಲಾಗಿದ್ದ ಟೀಸರ್ನಲ್ಲಿ ಯುವ ರಾಜ್ಕುಮಾರ್ ನಟನೆ ಕಂಡಿದ್ದ ಸಿನಿ ರಸಿಕರು ರಾಜ್ ಮನೆತನದ ಮೂರನೇ ತಲೆಮಾರು ಸಹ ಚಿತ್ರರಂಗವನ್ನು ರೂಲ್ ಮಾಡಲಿದೆ ಬಿಡಿ ಎಂದಿದ್ದರು.
ಇನ್ನು ನಟ ಪುನೀತ್ ರಾಜ್ಕುಮಾರ್ ನಿಧನ ಹೊಂದಿದ ನಂತರ ಯುವ ರಾಜ್ಕುಮಾರ್ ಮೊದಲ ಚಿತ್ರದಲ್ಲಿ ಭಾರೀ ಬದಲಾವಣೆ ಮಾಡಲಾಯಿತು. ಯುವ ರಣಧೀರ ಕಂಠೀರವ ಬದಲಾಗಿ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಚಿತ್ರದ ಮೂಲಕ ಯುವ ರಾಜ್ಕುಮಾರ್ ಇಂಡಸ್ಟ್ರಿಗೆ ಪದಾರ್ಪಣೆ ಮಾಡಲು ತೀರ್ಮಾನಿಸಲಾಯಿತು. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಇಂಡಸ್ಟ್ರಿ ಹಿಟ್ ರಾಜಕುಮಾರ ಸೇರಿದಂತೆ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದ ಸಂತೋಷ್ ಆನಂದ್ರಾಮ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
ಈ ಚಿತ್ರಕ್ಕೆ ನಾಯಕಿ ಯಾರಾಗಲಿದ್ದಾರೆ ಎಂಬ ಹಲವು ಸುದ್ದಿಗಳು ಕೆಲ ದಿನಗಳಿಂದ ಹರಿದಾಡುತ್ತಿದ್ದು, ನಿನ್ನೆಯಷ್ಟೇ ( ಫೆಬ್ರವರಿ 22 ) ಕನ್ನಡತಿ ರುಕ್ಮಿಣಿ ವಸಂತ್ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಸಹ ದೊಡ್ಡ ಮಟ್ಟದಲ್ಲಿ ಹರಿದಾಡಿತ್ತು. ಈ ಕುರಿತು ಚಿತ್ರದ ನಿರ್ದೇಶಕ ಸಂತೋಷ್ ಆನಂದ್ರಾಮ್ ಆಗಲಿ ಅಥವಾ ಹೊಂಬಾಳೆ ಫಿಲ್ಮ್ಸ್ ಆಗಲಿ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿರಲಿಲ್ಲ ಹಾಗೂ ರುಕ್ಮಿಣಿ ವಸಂತ್ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲು ಚಿತ್ರತಂಡ ನಟಿಯ ಜತೆ ಮಾತುಕತೆ ನಡೆಸಿದೆ ಎಂಬ ಸುದ್ದಿ ಹರಿದಾಡಿತ್ತು.
ಈ ರೀತಿಯ ಸುದ್ದಿಗಳು ಹರಿದಾಡುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ರುಕ್ಮಿಣಿ ವಸಂತ್ ತನ್ನನ್ನು ಈ ಚಿತ್ರಕ್ಕೆ ನಾಯಕಿಯಾಗುವಂತೆ ಯಾರೂ ಸಹ ಸಂಪರ್ಕಿಸಿಲ್ಲಾ ಹಾಗೂ ಮಾತುಕತೆಯನ್ನು ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿರುವ ಶ್ರೀ ಮುರಳಿ ನಟನೆಯ ಬಘೀರ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ರುಕ್ಮಿಣಿ ವಸಂತ್ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪ್ರೀತಮ್ ಗುಬ್ಬಿ ಕಾಂಬಿನೇಶನ್ನ ಬಾನ ದಾರಿಯಲಿ ಹಾಗೂ ರಕ್ಷಿತ್ ಶೆಟ್ಟಿ ಹಾಗೂ ಹೇಮಂತ್ ಎಂ ರಾವ್ ಕಾಂಬಿನೇಶನ್ನ ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.
ಹೀಗೆ ರುಕ್ಮಿಣಿ ವಸಂತ್ ತಾನು ಯುವ ರಾಜ್ಕುಮಾರ್ ಹಾಗೂ ಸಂತೋಷ್ ಆನಂದ್ರಾಮ್ ಕಾಂಬಿನೇಶನ್ನ ಚಿತ್ರಕ್ಕೆ ನಾಯಕಿಯಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದು, ನಾಯಕಿಯನ್ನಾಗಿ ಇನ್ಯಾರನ್ನು ಚಿತ್ರತಂಡ ಆಯ್ಕೆ ಮಾಡಲಿದೆ ಎಂಬ ಕುತೂಹಲ ಹೆಚ್ಚಿದೆ. ಈ ಹಿಂದೆ ಚಿತ್ರಕ್ಕೆ ಮಲಯಾಳಂನ ಕಲ್ಯಾಣಿ ಪ್ರಿಯದರ್ಶನ್ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಇದಕ್ಕಿಂತ ದೊಡ್ಡ ಮಟ್ಟದಲ್ಲಿ ಹರಿದಾಡಿತ್ತು. ಆ ಸುದ್ದಿಯೇ ನಿಜವಿರಬಹುದಾ ಎಂಬ ಪ್ರಶ್ನೆ ಕೂಡ ಇದೀಗ ಮೂಡಿದೆ.
ಇನ್ನು ಈ ಚಿತ್ರದ ಟೈಟರ್ ಟೀಸರ್ನ ಚಿತ್ರೀಕರಣ ಆರಂಭವಾಗಿದೆ ಎನ್ನಲಾಗಿದ್ದು, ಮಾರ್ಚ್ 17ಕ್ಕೆ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿ ಚಿತ್ರದ ಅಪ್ಡೇಟ್ ನೀಡಲಾಗುವುದು ಎಂಬ ಸುದ್ದಿ ಇದೆ. ಪುನೀತ್ ರಾಜ್ಕುಮಾರ್ ಅಗಲಿಕೆಯ ನಂತರ ಅವರ ಪರಂಪರೆಯನ್ನು ಮುನ್ನಡೆಸುವ ನಟ ಎಂದೇ ಯುವ ರಾಜ್ಕುಮಾರ್ಗೆ ರಾಜ್ವಂಶದ ಅಭಿಮಾನಿಗಳು ನೀಡುತ್ತಿದ್ದಾರೆ. ಒಟ್ಟಿನಲ್ಲಿ ಇಷ್ಟರ ಮಟ್ಟಿಗೆ ಯಾವುದೇ ಚಿತ್ರದಲ್ಲೂ ನಟಿಸದೇ ಹೈಪ್ ಪಡೆದುಕೊಂಡ ನಟ ಎನಿಸಿಕೊಂಡಿದ್ದಾರೆ ಯುವ ರಾಜ್ಕುಮಾರ್.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada