ಢಾಕಾ (ಬಾಂಗ್ಲಾದೇಶ), ಮಾ. 18: ರೊಹಿಂಗ್ಯಾ ನಿರಾಶ್ರಿತರಿರುವ ಬಂಗಾಳ ಕೊಲ್ಲಿಯ ದೂರದ ದ್ವೀಪಕ್ಕೆ ವಿಶ್ವಸಂಸ್ಥೆಯ ನಿಯೋಗವೊಂದು ಮೂರು ದಿನಗಳ ಭೇಟಿಯನ್ನು ಆರಂಭಿಸಿದೆ. ಮಾನವಹಕ್ಕು ಸಂಘಟನೆಗಳ ವಿರೋಧದ ಹೊರತಾಗಿಯೂ ಡಿಸೆಂಬರ್ನಿಂದ ಆ ದುರ್ಗಮ ದ್ವೀಪಕ್ಕೆ ರೊಹಿಂಗ್ಯಾ ನಿರಾಶ್ರಿತರನ್ನು ಸಾಗಿಸಲಾಗುತ್ತಿದೆ.
ಮ್ಯಾನ್ಮಾರ್ ಗಡಿಗೆ ಹೊಂದಿಕೊಂಡ ಬಾಂಗ್ಲಾದೇಶದ ಪಟ್ಟಣಗಳಲ್ಲಿ ನಿರ್ಮಿಸಲಾಗಿರುವ ನಿರಾಶ್ರಿತ ಶಿಬಿರಗಳಲ್ಲಿ ಸುಮಾರು 10 ಲಕ್ಷ ರೊಹಿಂಗ್ಯಾ ಮುಸ್ಲಿಮ್ ನಿರಾಶ್ರಿತರು ವಾಸಿಸುತ್ತಿದ್ದಾರೆ. ಈ ಶಿಬಿರಗಳಲ್ಲಿ ನಿರಾಶ್ರಿತರು ಕಿಕ್ಕಿರಿದು ವಾಸಿಸುತ್ತಿದ್ದು, ಸುಮಾರು ಒಂದು ಲಕ್ಷ ಮಂದಿಯನ್ನು ಬಂಗಾಳ ಕೊಲ್ಲಿಯ ದ್ವೀಪ ಭಾಸನ್ ಚಾರ್ಗೆ ಸ್ಥಳಾಂತರಿಸುವ ಗುರಿಯನ್ನು ಬಾಂಗ್ಲಾದೇಶ ಹೊಂದಿದೆ.
ಈ ದ್ವೀಪವು ಕೇವಲ 20 ವರ್ಷಗಳ ಹಿಂದೆ ಬಂಗಾಳ ಕೊಲ್ಲಿಯಲ್ಲಿ ಉದ್ಭವವಾಗಿದ್ದು, ಪ್ರವಾಹಕ್ಕೆ ಸುಲಭವಾಗಿ ತುತ್ತಾಗುತ್ತದೆ ಎನ್ನಲಾಗಿದೆ.
2017ರಲ್ಲಿ ಮ್ಯಾನ್ಮಾರ್ ಸೇನೆಯ ಅಮಾನುಷ ದಮನ ಕಾರ್ಯಾಚರಣೆಗೆ ಬೆದರಿ ರೊಹಿಂಗ್ಯಾ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.
”ಬಾಂಗ್ಲಾದೇಶದಲ್ಲಿರುವ ರೊಹಿಂಗ್ಯಾ ನಿರಾಶ್ರಿತರೊಂದಿಗೆ ವ್ಯವಹರಿಸುತ್ತಿರುವ ವಿಶ್ವಸಂಸ್ಥೆಯ ವಿವಿಧ ಸಂಘಟನೆಗಳ ಪರಿಣತರು ನಿರಾಶ್ರಿತರ ದ್ವೀಪಕ್ಕೆ ಮೂರು ದಿನಗಳ ಭೇಟಿ ನೀಡುತ್ತಿದ್ದಾರೆ” ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಗೆ ಹೇಳಿದೆ.