ಮಂಡ್ಯ,ಮಾರ್ಚ್ 7: ಚುನಾವಣಾ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ನಡುವೆ ಕ್ರೆಡಿಟ್ ವಾರ್ ಜೋರಾಗಿದೆ. ಈ ಹಿಂದೆ ಬೆಳಗಾವಿಯ ರಾಜಹಂಸಗಡ ಕೋಟೆಯ ಶಿವಾಜಿ ಪ್ರತಿಮೆ ಕುರಿತು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಕ್ರೆಡಿಟ್ ವಾರ್ ಶುರುವಾಗಿದ್ದು, ಇದೀಗ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ವಿಚಾರವಾಗಿ ಕೈ-ಕಮಲ ವಾರ್ ಶುರುವಾಗಿದೆ.
ಈ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಸಿದ್ದರಾಮಯ್ಯ ವಿರುದ್ದ ಕಿಡಕಾರಿದ್ದಾರೆ. ಒಂದೇ ಒಂದು ರೂಪಾಯಿ ಗ್ರ್ಯಾಂಟ್ ಕೊಟ್ಟಿದ್ರೆ ಅವರ ಕೊಡುಗೆ ಆಗುತ್ತೆ. ಊರಲ್ಲಿರುವ ಮಕ್ಕಳೆಲ್ಲ ನನ್ನ ಅಂತ ಹೇಳಿದರೆ ಊರಿನವರು ಕಾಲಲ್ಲಿ ಇರೋದು ಕೈಗೆ ಹಿಡಿದುಕೊಳ್ಳುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ.
ಸುಳ್ಳು ಮತ್ತು ಸಿದ್ದರಾಮಯ್ಯ ಒಂದು ನಾಣ್ಯದ ಎರಡು ಮುಖಗಳು. ಅವರ ಕಾಲದಲ್ಲಿ ಒಂದು ರೂಪಾಯಿ ಗ್ರ್ಯಾಂಟ್ ಕೊಟ್ಟಿದ್ರೆ ಹೇಳಲಿ, ದಶಪಥ ಹೆದ್ದಾರಿಗೆ ಪ್ರಧಾನಿ ನರೇಂದ್ರ ಮೋದಿ ಕೊಟ್ಟಿರುವ ಹಣ. ಸಿದ್ದರಾಮಯ್ಯ ತಮ್ಮ ಹೆಸರು ಹಾಕಿಕೊಳ್ಳಲು ಹೋದರೆ ಯಾವ ಡಿಎನ್ಎ ಟೆಸ್ಟ್ ನಲ್ಲಿಯು ಮ್ಯಾಚ್ ಆಗಲ್ಲ. 2004 ರಿಂದ 2014 ರ ವರೆಗೂ ಕಾಂಗ್ರೆಸ್ ಅಧಿಕಾರದಲ್ಲಿ ಇತ್ತು, ಆ ವೇಳೆ ಅವರಿಗೆ ಕಿಸಿಯೋಕೆ ಆಗಿಲಿಲ್ಲ ಎಂದು ಹರಿಹಯ್ದಿದ್ದಾರೆ.
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಏನು ನಡೆಯಲಿಲ್ಲ. ಎಲ್ಲ ನಡೆದಿದ್ದು ಮೋದಿ ಸರ್ಕಾರದಲ್ಲಿ, ಬುರುಡೆ ಬಿಡೋದಕ್ಕೆ ಇದಕ್ಕಿಂತ ಇನ್ನೇನ್ ಬೇಕು. ಸಣ್ಣ ಮಕ್ಕಳಿಗು ಇದು ಬುರುಡೆ ಅಂತಾ ಗೊತ್ತಾಗುತ್ತದೆ ಎಂದು ಹೇಳಿದರು.
ಸಿದ್ದರಾಮಯ್ಯರಿಂದ ಹೆದ್ದಾರಿ ಕಾಮಗಾರಿ ಪರಿಶೀಲನೆ ವಿಚಾರವಾಗಿ ಮಾತನಾಡಿ, ಕಾಮಗಾರಿ ಅವರು ಪರಿಶೀಲನೆ ಮಾಡಲಿ. ಜನರು ಸಿದ್ದರಾಮಯ್ಯ ಯಾವಾಗ ಇಂಜಿನಿಯರ್ ಆದ್ರು ಅಂತ ಕೇಳ್ತಾರೆ. ಏನಾದ್ರು ಮಾಡಿ ಹೆದ್ದಾರಿ ಕ್ರೆಡಿಟ್ ಪಡೆದುಕೊಳ್ಳಬೇಕು ಎಂಬ ದಾಹ ಕಾಂಗ್ರೆಸ್ ಗಿದೆ. ಮುಖ್ಯಮಂತ್ರಿಯಾದಾಗ ಒಂದು ಬಿಡಿಗಾಸು ಕೊಡಲಿಲ್ಲ. ನರೇಂದ್ರ ಮೋದಿಗೆ ಕ್ರೆಡಿಟ್ ಹೋಗುತ್ತಲ್ಲ, ತಾವು ಪ್ರಚಾರದಲ್ಲಿರಲು ಹೊರಟಿದ್ದಾರೆ. ಪ್ರಚಾರಕ್ಕಾಗಿ ಪರಿಶೀಲನೆ ಮಾಡ್ತೀನಿ ಅಂದ್ರೆ ಮಾಡ್ಕೊಳ್ಳಲಿ, ಸಿದ್ದರಾಮಯ್ಯ ಬುರುಡೆ ಬಿಡ್ತಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಬುರುಡೆ ಸಿದ್ದರಾಮಯ್ಯ, ಸುಳ್ಳಿನ ಸಿದ್ದರಾಮಯ್ಯ ಅನ್ನೋದು ಜನಕ್ಕೆ ಅರ್ಥ ಆಗುತ್ತೆ. ಕಾಂಗ್ರೆಸ್ ಒಂದು ರೂಪಾಯಿ ಬಿಡುಗಡೆ ಮಾಡಿದ್ದರೇ ಸಿದ್ದರಾಮಯ್ಯ ದಾಖಲೆ ತೋರಿಸಲಿ ಎಂದು ಸವಾಲ್ ಹಾಕಿದ ಅವರು, ಇಲ್ಲದಿದ್ದರೆ ಬುರುಡೆ ಬಿಡುವ ನಾಯಕತ್ವವನ್ನ ಸಿದ್ದರಾಮಯ್ಯ ನೇತೃತ್ವ ವಹಿಸಿರೋದು ಸ್ಪಷ್ಟವಾಗುತ್ತೆ. ಇದು 100% ಬಿಜೆಪಿಗೆ ಸೇರಬೇಕಾದ ಕ್ರೆಡಿಟ್. ದಶಪಥ ಹೆದ್ದಾರಿ ಸ್ಯಾಂಕ್ಷನ್ ಮಾಡಿದ್ದು, ಅಡಿಗಲ್ಲು ಹಾಕಿದ್ದು ಬಿಜೆಪಿ. ನಾಟಕದಲ್ಲಿ ಮುಖ್ಯಪಾತ್ರಧಾರಿಗಳು ಇರ್ತಾರೆ, ವಿದೂಷಕರು ಇರಬೇಕಲ್ವ. ಕಾಂಗ್ರೆಸ್ ನವರು ವಿದೂಷಕ ಪಾತ್ರ ವಹಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada