ಭೋಪಾಲ್ (ಮಧ್ಯಪ್ರದೇಶ), ಸೆ.14- ವಿಧಾನಸಭೆ ಚುನಾವಣೆ ಜರುಗಲಿರುವ ಮಧ್ಯಪ್ರದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಹೆಗ್ಗುರಿಯೊಂದಿಗೆ ಪ್ರಧಾನಿ ನರೇಂದ್ರಮೋದಿಯವರು ಇಂದು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಡಿಸೆಂಬರ್ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ ಮತ ಬೇಟೆಗೆ ಇಳಿದಿರುವ ಮೋದಿಯವರು ಸಾವಿರಾರು ಕೋಟಿ ಮೊತ್ತದ ಯೋಜನೆಗಳಿಗೆ ಚಾಲನೆ ಕೊಡುವರು.
ರಾಜ್ಯದ ಬಿನಾದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 50,700 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಯೋಜನೆಗಳ ಪೈಕಿ ಬಿನಾ ರಿಫೈನರಿಯಲ್ಲಿ ಪೆಟ್ರೋಕೆಮಿಕಲ್ ಸಂಕೀರ್ಣ ಮತ್ತು ರಾಜ್ಯಾದ್ಯಂತ 10 ಹೊಸ ಕೈಗಾರಿಕಾ ಯೋಜನೆಗಳು ಒಳಗೊಂಡಿವೆ. ವರ್ಷಾಂತ್ಯದಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮಧ್ಯಪ್ರದೇಶದ ಹೊಸ ಯೋಜನೆಗಳು ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನವನ್ನು ನೀಡುತ್ತವೆ ಎಂದು ಅಧಿಕಾರಿಯೊಬ್ಬರು ಹೇಳಿದರು.
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ನ ಅತ್ಯಾಧುನಿಕ ಬಿನಾ ರಿಫೈನರಿ ಸುಮಾರು 49,000 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಹೊಂದಲಿದೆ. ಸುಮಾರು 1,200 ಕೆಟಿಪಿಎ (ವರ್ಷಕ್ಕೆ ಕಿಲೋ-ಟನ್) ಎಥಿಲೀನ್ ಮತ್ತು ಪ್ರೊಪಿಲೀನ್ ಉತ್ಪಾದಿಸಲಿದೆ. ಜವಳಿ, ಪ್ಯಾಕೇಜಿಂಗ್ ಮತ್ತು ಫಾರ್ಮಾ ಮುಂತಾದ ವಿವಿಧ ಕ್ಷೇತ್ರಗಳು ಇದರಲ್ಲಿ ಒಳಗೊಂಡಿವೆ.
ಈ ಯೋಜನೆ ದೇಶದ ಆಮದು ಅವಲಂಬನೆಯನ್ನು ತಗ್ಗಿಸಲಿದೆ. ಪ್ರಧಾನ ಮಂತ್ರಿಯವರ ಆತ್ಮನಿರ್ಭರ ಭಾರತ್ ದೂರದೃಷ್ಟಿ ಈಡೇರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು. ಮೆಗಾ ಯೋಜನೆಯು ವಿಫುಲ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಪೆಟ್ರೋಲಿಯಂ ವಲಯದಲ್ಲಿರುವ ಕೆಳ ಹಂತದ ಕೈಗಾರಿಕೆಗಳ ಅಭಿವೃದ್ಧಿಯನ್ನೂ ಉತ್ತೇಜಿಸುತ್ತದೆ ಎಂದರು.
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(14-09-2023)
ಕಾರ್ಯಕ್ರಮದಲ್ಲಿ ನರ್ಮದಾಪುರಂ ಜಿಲ್ಲೆಯಲ್ಲಿ ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನಾ ವಲಯಗಳು, ಇಂದೋರ್ನಲ್ಲಿ ಎರಡು ಐಟಿ ಪಾರ್ಕ್ಗಳು, ರತ್ಲಾಮ್ನಲ್ಲಿ ಮೆಗಾ ಇಂಡಸ್ಟ್ರಿಯಲ್ ಪಾರ್ಕ್ ಮತ್ತು ಮಧ್ಯಪ್ರದೇಶದಾದ್ಯಂತ ಆರು ಹೊಸ ಕೈಗಾರಿಕಾ ಪ್ರದೇಶಗಳು ಸೇರಿದಂತೆ 10 ಯೋಜನೆಗಳಿಗೆ ಮೋದಿ ಶಂಕುಸ್ಥಾಪನೆ ನೆರವೇರಿಸುವರು.
ರೈಲ್ವೆ ಕ್ಷೇತ್ರದ ಯೋಜನೆಗಳ ಲೋಕಾರ್ಪಣೆ :
ಇದಾದ ಬಳಿಕಪ್ರಧಾನಿ ಮೋದಿ, ಛತ್ತೀಸ್ಘಢದ ರಾಯಗಢ ಜಿಲ್ಲೆಯಲ್ಲಿ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ, ಸುಮಾರು 6,350 ಕೋಟಿ ರೂಪಾಯಿ ಮೌಲ್ಯದ ರೈಲ್ವೆ ಕ್ಷೇತ್ರದ ಯೋಜನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಕೇಂದ್ರದ ಆರೋಗ್ಯ ಉಪಕ್ರಮದ ಅಡಿಯಲ್ಲಿ ಛತ್ತೀಸ್ಘಢದ ಒಂಬತ್ತು ಜಿಲ್ಲೆಗಳಲ್ಲಿ ನಿರ್ಮಿಸಲು 50 ಹಾಸಿಗೆಗಳ ಪ್ರತಿ ಕ್ರಿಟಿಕಲ್ ಕೇರ್ ಬ್ಲಾಕ್ಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ವರ್ಷಾಂತ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಕಾರದಿಂದ ಕೆಳಗಿಳಿಸುವ ಉದ್ದೇಶದಿಂದ ಪ್ರತಿಪಕ್ಷ ಭಾರತೀಯ ಜನತಾ ಪಕ್ಷ (ಬಿಜೆಪಿ) ತಮ್ಮ ಪರಿವರ್ತನ್ ಯಾತ್ರೆ ಪ್ರಾರಂಭಿಸಿದ ಕೇವಲ ಎರಡು ದಿನಗಳ ನಂತರ ಛತ್ತೀಸ್ಘಢಕ್ಕೆ ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದಾರೆ.