ಗುಡಿಬಂಡೆ: ಅಕಾಲಿಕ ಮಳೆಗೆ ತಾಲೂಕಿನಾದ್ಯಂತ ಹೆಕ್ಟೇರ್ಗಟ್ಟಲೇ ಬೆಳೆ ಹಾನಿಯಾಗಿದೆ. ಇದರಿಂದಾಗಿ ರೈತ ಕಂಗಾಲಾಗಿದ್ದು, ಎಲ್ಲಾ ರೈತರಿಗೂ ಸಮರ್ಪಕವಾಗಿ ಬೆಳೆ ಹಾನಿ ಪರಿಹಾರ ನೀಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಲಕ್ಷ್ಮೀನಾರಾಯಣ ತಿಳಿಸಿದರು.ಪಟ್ಟಣದ ತಾಲೂಕು ಕಛೇರಿ ಮುಂಭಾಗ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ರೈತ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳೆದ ಬೆಳೆ ಅಕಾಲಿಕ ಮಳೆಗೆ ನಷ್ಟವಾಗಿದೆ. ಆದರೆ ಕೇವಲ ಮೂರು ನಾಲ್ಕು ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾದ ಬೆಳೆಗೆ ಮಾತ್ರ ಪರಿಹಾರ ನೀಡಲಾಗಿದೆ. ಅದರಲ್ಲೂ ಲಕ್ಷಾಂತರ ರೂಪಾಯಿಗಳು ಖರ್ಚು ಮಾಡಿ ಬೆಳೆದ ಬೆಳೆ ನಾಷವಾಗಿದ್ದರೇ, ಸರ್ಕಾರ ನೀಡುತ್ತಿರುವುದು ಮಾತ್ರ ಪುಡಿಗಾಸಾಗಿದೆ. ಸರ್ಕಾರ ನೀಡುತ್ತಿರುವ ಬೆಳೆ ಹಾನಿ ಪರಿಹಾರ ಅವೈಜ್ಞಾನಿಕವಾಗಿದೆ. ಆದ್ದರಿಂದ ಸರ್ಕಾರ ಈ ಬೆಳೆ ಹಾನಿ ಪರಿಹಾರ ಮೊತ್ತವನ್ನು ಹೆಚ್ಚಳ ಮಾಡಬೇಕಾಗಿದೆ. ಅಷ್ಟೇ ಅಲ್ಲದೇ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಬಗರ್ಹುಕುಂ ಯೋಜನೆಯಡಿ ಇನ್ನೂ ಭೂಮಿ ಮಂಜೂರು ಮಾಡಿರುವುದಿಲ್ಲ. ಈ ಯೋಜನೆಯಡಿ ಸಾಗುವಳಿ ಮಾಡಿಕೊಂಡ ನೂರಾರು ಸಂಖ್ಯೆಯ ರೈತರು ಸಹ ಬೆಳೆ ಹಾಕಿದ್ದು, ಅವರಿಗೆ ಬೆಳೆ ಹಾನಿ ಪರಿಹಾರ ಸೌಲಭ್ಯ ಸಿಗುತ್ತಿಲ್ಲ. ಈ ಕುರಿತು ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಬಳಿಕ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀನಿವಾಸ್, ತಾಲೂಕಿನಲ್ಲಿ ಅಕಾಲಿಕ ಮಳೆಯಿಂದಾಗಿ ಎಲ್ಲಾ ಬೆಳೆ ನಾಶವಾಗಿದೆ. ಇಲ್ಲಿಯವರೆಗೂ ಅನೇಕ ರೈತರಿಗೆ ಇನ್ನೂ ಪರಿಹಾರ ಹಣ ಸಿಕ್ಕಿಲ್ಲ. ಮಾಹಿತಿ ಪ್ರಕಾರ ಇನ್ನೂ 6 ಸಾವಿರಕ್ಕೂ ಹೆಚ್ಚಿನ ಹೆಕ್ಟೇರ್ ಪ್ರದೇಶಕ್ಕೆ ಪರಿಹಾರ ಹಣ ನೀಡಬೇಕಿದೆ. ಕೂಡಲೇ ಅಧಿಕಾರಿಗಳು ಎಲ್ಲಾ ರೈತರಿಗೂ ಪರಿಹಾರ ಹಣ ಸಿಗುವಂತೆ ಕ್ರಮ ತೆಗೆದುಕೊಳ್ಳಬೇಕೆಂದರು.ಬೆಳೆ ಹಾನಿ ಪರಿಹಾರ ಹೆಚ್ಚಳ, ಗುಡಿಬಂಡೆ ತಾಲೂಕಿಗೆ ಪ್ರತ್ಯೇಕ ಭೂ ಮಂಜೂರಾತಿ ಸಮಿತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ತಹಸೀಲ್ದಾರ್ ಸಿಗ್ಬತ್ತುಲ್ಲಾ ರವರ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಿಪಿಎಂ ಪಕ್ಷದ ಮುಖಂಡರಾದ ಆದಿನಾರಾಯಣಪ್ಪ, ದೇವರಾಜು, ಶ್ರೀನಿವಾಸ, ನಾಗರಾಜು, ರೈತ ಮುಖಂಡ ವರದರಾಜು ಸೇರಿದಂತೆ ಹಲವರು ಇದ್ದರು.ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯ ಮನವಿ ಪತ್ರವನ್ನು ತಹಸೀಲ್ದಾರ್ ಸಿಗ್ಬತ್ತುಲ್ಲಾ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.