ಕನ್ನಡ ಚಿತ್ರರಂಗದಲ್ಲಿ ಕ್ರೇಜಿಸ್ಟಾರ್ ಎನ್ನುವ ಹೆಸರು ಬಹುದೊಡ್ಡ ಹೆಸರು.ಈಗ ಕ್ರೇಜಿಸ್ಟಾರ್ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಅಪ್ಪನ ಹಾದಿಯಲ್ಲಿ ಭಿನ್ನ ಸಿನಿಮಾಗಳನ್ನು ಮಾಡಲು ಮುಂದಾಗಿದ್ದಾರೆ. ಸದ್ಯ ಕ್ರೇಜಿಸ್ಟಾರ್ ಹಿರಿಯ ಪುತ್ರ ಮನೋರಂಜನ್ ಅಭಿನಯದ ‘ಮುಗಿಲ್ ಪೇಟೆ’ ರಿಲೀಸ್ ಆಗಿದೆ.
ಮನೋರಂಜನ್ 2017ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇದೀಗ ಮನೋರಂಜನ್ ಅಭಿನಯದ ಮೂರನೆಯ ಸಿನಿಮಾ ‘ಮುಗಿಲ್ ಪೇಟೆ’ ರಿಲೀಸ್ ಆಗಿದೆ.
ಮುಗಿಲ್ ಪೇಟೆ ಮನೋರಂಜನ್ ಅಭಿನಯದ ಮೂರನೇ ಸಿನಿಮಾ. ಮೊದಲ ಎರಡು ಚಿತ್ರಗಳಿಗೆ ಹೋಲಿಸಿದರೆ, ಈ ಚಿತ್ರದಲ್ಲಿ ಮನೋರಂಜನ್ ಬೇರೆ ರೀತಿಯೇ ಕಾಣುತ್ತಾರೆ. ಈ ಮೊದಲು ಬಂದ ‘ಸಾಹೇಬ’ ಮತ್ತು ಬೃಹಸ್ಪತಿ ಚಿತ್ರಗಳಲ್ಲಿ ತೋರಿದ ಅಭಿನಯಕ್ಕಿಂತಲೂ ಮುಗಿಲ್ ಪೇಟೆಯಲ್ಲಿ ಡಿಫರೆಂಟ್ ಎನಿಸುತ್ತಾರೆ.
ಪ್ರೇಮಿಯ ವ್ಯಥೆಯೊಂದಿಗೆ ಆರಂಭ ಆಗುತ್ತೆ ‘ಮುಗಿಲ್ ಪೇಟೆ’ ಪಯಣ!
ಚಿತ್ರದ ಆರಂಭದಲ್ಲಿ ಅತಿಯಾದ ಅಬ್ಬರ ಇಲ್ಲ. ಹೀರೋ ಇಂಟ್ರೋಡಕ್ಷನ್ಗಾಗಿ ಗಾಳಿ ಹಾರಲ್ಲ, ಬೈಕ್ ಎಗರಲ್ಲ, ಧೂಳು ಹಬ್ಬುವುದಿಲ್ಲ. ತುಂಬಾನೆ ಸಹಜ ಎನಿಸುವಂತೆ ಚಿತ್ರದ ಮೊದಲ ದೃಶ್ಯದಲ್ಲಿ ನಾಯಕನ ಡೈಲಾಗ್ಸ್ಗಳು ಕಿವಿಗೆ ಬೀಳುತ್ತವೆ. ರೈಲ್ವೆ ಸ್ಟೇಷನ್ನಿಂದ ಕಥೆ ಆರಂಭ ಆಗುತ್ತೆ. ಚಿತ್ರದ ನಾಯಕ ಏನನ್ನೋ ಹುಡುಕಲು ರೈಲ್ ಹತ್ತುತ್ತಾನೆ. ಹೀಗೆ ಸಿನಿಮಾ ಆರಂಭ ಆಗುತ್ತೆ.
‘ರಾಜ’ನ ಪಾತ್ರದಲ್ಲಿ ಇಷ್ಟ ಆಗುತ್ತಾರೆ ಯಂಗ್ ಕ್ರೇಜಿಸ್ಟಾರ್ ಮನು!
ಕನ್ನಡ ಚಿತ್ರ ಪ್ರೇಮಿಗಳಿಗೆ ಮತ್ತೊಬ್ಬ ‘ರಾಜ’ ಸಿಕ್ಕಿದ್ದಾನೆ. ಅಂದರೆ ಇಲ್ಲಿ ತನಕ ರವಿಚಂದ್ರನ್ ತಮ್ಮ ಹಲವು ಲವ್ ಸ್ಟೋರಿ ಸಿನಿಮಾಗಳಲ್ಲಿ ‘ರಾಜ’ ಎನ್ನುವ ಹೆಸರಿನೊಂದಿಗೆ ಕಾಣಿಸಿಕೊಂಡಿದ್ದರು. ಈಗ ಅವರ ಪುತ್ರ ಈ ರಾಜನ ಪಟ್ಟಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಮನೋರಂಜನ್ ಪಾತ್ರದ ಹೆಸರು ರಾಜ. ಈ ರಾಜನ ಬದುಕಿನಲ್ಲಿ ಅಪ್ಪ, ಅಮ್ಮ, ಪ್ರೀತಿ, ಪ್ರೇಮ ಸ್ನೇಹಿತರು ಹೀಗೆ ಸಾಮಾನ್ಯವಾಗಿ ಎಲ್ಲರ ಬದುಕಿನಲ್ಲಿ ಬರುವಂತಹ ಸಹಜ ಪಾತ್ರಗಳು ಬರುತ್ತವೆ. ಈ ಪಾತ್ರಗಳು ರಾಜನ ಜೀವನದಲ್ಲಿ ಹಲವು ತಿರುವುಗಳನ್ನ ನೀಡುತ್ತವೆ. ರಾಜನ ಜೀವನಕ್ಕೆ ಯಾವ ಯಾವ ಪಾತ್ರಗಳು ಯಾವ ರೀತಿ ವ್ಯಥೆಯನ್ನು ಕೊಡುತ್ತವೆ. ಎಲ್ಲಾ ಜಂಜಾಟಗಳ ನಡುವೆ, ಅವರೆಲ್ಲರ ಮನಸ್ಸು ಗೆದ್ದು, ಮೆಚ್ಚಿನ ರಾಜನಾಗಿ ನಾಯಕ ಹೇಗೆ ಗೆಲ್ಲುತ್ತಾನೆ ಎನ್ನುವುದೇ ಸಿನಿಮಾ.
ಸಂಬಂಧಗಳ ಬೆಲೆ ಹೇಳುತ್ತೆ ಮುಗುಲ್ ಪೇಟೆ!
ಒಂದು ಕಡೆ ಅಪ್ಪ-ಅಮ್ಮ ಆದರೆ ಮತ್ತೊಂದು ಕಡೆ ಪ್ರೀತಿಸಿದ ಹುಡುಗಿ. ಪ್ರೀತಿ ಅಂತ ಬಂದಾಗ ಸಹಜವಾಗಿಯೇ ಕನಸು, ಮುನಿಸು, ನಗು ಅಳು ಇದ್ದೆ ಇರುತ್ತೆ. ಅಪ್ಪ, ಅಮ್ಮ , ಪ್ರೇಯಸಿ, ಎಲ್ಲರಿಗೂ ಪ್ರೀತಿ ಕೊಡಬೇದ ನಾಯಕನ ಪಾತ್ರದ ಮೂಲಕ ಸಂಬಂಧಗಳ ಬೆಲೆ ಏನು ಎನ್ನುವುದನ್ನು ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ. ಸೀರಿಯಸ್ ಆದ ಫ್ಯಾಮಿಲಿ ಕಥೆ ಮತ್ತು ಲವ್ ಸ್ಟೋರಿ ನಡುವೆ ನಕ್ಕು ನಗಿಸುತ್ತೆ ಚಿತ್ರದಲ್ಲಿರುವ ಕಾಮಿಡಿ.
ಪಾತ್ರವರ್ಗ ಚಿತ್ರದ ದೊಡ್ಡ ಶಕ್ತಿ!
ಸಾಧುಕೋಕಿಲ, ಅಪ್ಪಣ್ಣ, ಪ್ರಶಾಂತ್ ಸಿದ್ದಿಯ ಕಾಮಿಡಿ ಚಿತ್ರಕ್ಕೆ ಮತ್ತಷ್ಟು ಮೆರುಗು ತಂದಿದೆ. ಇನ್ನು ನಾಯಕಿಯಾಗಿ ಕಯಾದು ಲಹರಿ ಇಷ್ಟ ಆಗುತ್ತಾರೆ. ನಟಿ ತಾರ, ರಂಗಾಯಣ ರಘು, ಅವಿನಾಶ್, ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನಟ ರಿಷಿ ಚಿತ್ರದ ಬಂದು ಸರ್ಪ್ರೈಸ್ ಕೊಡುತ್ತಾರೆ. ಆದರೆ ಕಾವ್ಯ ಶಾ ಚಿತ್ರದ ಬಹುಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅದನ್ನು ಸಿನಿಮಾದಲ್ಲಿ ನೋಡೊದೇ ಚೆಂದ.
ಪ್ರೇಮಿಗಳಿಗೆ ಮಾತ್ರ ಸೀಮಿತ ಅಲ್ಲ ಮುಗಿಲ್ ಪೇಟೆ ಪಯಣ!
ಪ್ರೇಮ ಕಥೆ ಎಂದ ಮಾತ್ರಕ್ಕೆ, ಇದು ಪ್ರೇಮಿಗಳಿಗೆ ಸೀಮಿತವಾಗಿರುವ ಸಿನಿಮಾ ಎಂದಲ್ಲ. ಮುಗಿಲ್ ಪೇಟೆ ಚಿತ್ರವನ್ನು ಒಂದು ಕೌಟುಂಬಿಕ ಮನೋರಂಜನ ಸಿನಿಮಾ ಎಂದು ಹೇಳಬಹುದು. ಕುಟುಂಬದ ಸದಸ್ಯರಿಗೆ ಈ ಚಿತ್ರದ ಕಥೆ ಕನೆಕ್ಟ್ ಆಗುತ್ತೆ. ಸಂಬಂಧಗಳ ಬೆಲೆಯನ್ನು ಚಿತ್ರದಲ್ಲಿ ಸೂಕ್ಷ್ಮವಾಗಿ ಹೇಳಲಾಗಿದೆ.
ಉತ್ತಮ ಕಥೆಯನ್ನು ಸಿನಿಮಾ ಪ್ರೇಕ್ಷಕರ ಮುಂದೆ ಇಡಬೇಕು ಎನ್ನುವ ನಿರ್ದೇಶಕರ ಆಲೋಕನೆ ಸರಿ. ಆದರೆ ನೀಟಾದ ಚಿತ್ರಕಥೆ ಕಟ್ಟಿ ಕೊಡುವಲ್ಲಿ ನಿರ್ದೇಶಕ ಎಡವಿದ್ದಾರೆ. ಸಿನಿಮಾದಲ್ಲಿನ ಹಲವು ಸನ್ನಿವೇಶಗಳು ಪ್ರೇಕ್ಷಕನ ಮನಸಲ್ಲಿ ಹಲವು ಪ್ರಶ್ನೆಗಳನ್ನ ಹುಟ್ಟಿ ಹಾಕುತ್ತದೆ. ಆದರೆ ಆ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ.
ಒಳ್ಳೆಯ ಸಿನಿಮಾ ಎನ್ನುವ ಭಾವ
ಒಟ್ಟಾರೆ ಹೇಳ ಬೇಕು ಅಂದರೆ… ಏನೆ ಪ್ರಶ್ನೆ ಗೊಂದಲಗಳು ಮೂಡಿದರು ಸಿನಿಮಾ ತನ್ನೊಂದಿಗೆ ಪ್ರೇಕ್ಷಕನನ್ನು ಕರೆದುಕೊಂಡು ಹೋಗುತ್ತದೆ. ಚಿತ್ರ ಮಂದಿರದಿಂದ ಹೊರ ಬರುತ್ತಾ ಒಳ್ಳೆಯ ಸಿನಿಮಾ ಎನ್ನುವ ಭಾವ ಮನಸಲ್ಲಿ ಉಳಿಯುತ್ತದೆ.
ಇನ್ನು ಚಿತ್ರವನ್ನು ಭರತ್ ಎಸ್ ನಾವುಂದ ನಿರ್ದೇಶನ ಮಾಡಿದ್ದಾರೆ. ರವಿವರ್ಮ ಛಾಯಗ್ರಹಣ ಚಿತ್ರಕ್ಕಿದೆ. ಶ್ರೀಧರ್ ವಿ ಸಂಭ್ರಮ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ರಕ್ಷಾ ವಿಜಯ್ಕುಮಾರ್ ನಿರ್ಮಾಣದಲ್ಲಿ ಚಿತ್ರ ಮೂಡಿ ಬಂದಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: