ನಾಯಕನಹಟ್ಟಿ: ಗುರು ತಿಪ್ಪೇರುದ್ರಸ್ವಾಮಿ ದೇವರ ಮರಿಪರಿಷೆ ಅದ್ದೂರಿಯಾಗಿ ಸಂಭ್ರಮ, ಸಡಗರದಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ನಡೆಯಿತು.ಜಾತ್ರೆಗೆ ಬರಲು ಸಾಧ್ಯವಾಗದ ಜನರು ಮರಿಪರಿಷೆಗೆ ಬಂದು ದೇವರ ದರ್ಶನ ಪಡೆಯುವುದು ವಾಡಿಕೆ. ಮಾರ್ಚ್ 20ರಂದು ವಿಜೃಂಭಣೆಯ ರಥೋತ್ಸವ ಜರುಗಿತು.ಈ ಹಿನ್ನೆಲೆಯಲ್ಲಿ ಮರಿಪರಿಷೆಗೆ ಭಾರಿ ಪ್ರಮಾಣದಲ್ಲಿ ಜನರು ಆಗಮಿಸಿದ್ದರು. ನೆರೆಯ ಜಿಲ್ಲೆ ಹಾಗೂ ಸುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಜಾತ್ರೆಗೆ ಆಗಮಿಸಿದ್ದರು. ಎತ್ತಿನಗಾಡಿ, ಟ್ರ್ಯಾಕ್ಟರ್, ಸರಕು ಸಾಗಾಣಿಕೆ ವಾಹನ ಸೇರಿ ನಾನಾ ವಾಹನಗಳಲ್ಲಿ ಭಕ್ತರು ಆಗಮಿಸಿದ್ದರು. ಬೀಡುಬಿಟ್ಟ ಭಕ್ತರು ಪಟ್ಟಣದ ಹೊರವಲಯಗಳಲ್ಲಿ ತಂಗಿದ್ದರು. ಸ್ಥಳದಲ್ಲಿಯೇ ಅಡುಗೆ ಮಾಡಿ ನೈವೇದ್ಯ ಅರ್ಪಿಸಿದರು.ಸೋಮವಾರ ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ 8 ಗಂಟೆಗೆ ದೇವರಿಗೆ ಮಹಾ ಮಂಗಳಾರತಿ ಮಾಡಲಾಯಿತು. ನಂತರ ನೆರೆದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು. ಬೆಳಿಗ್ಗೆಯಿಂದಲೇ ಹೊರಮಠ ಹಾಗೂ ಒಳಮಠಗಳು ಭಕ್ತರಿಂದ ತುಂಬಿತ್ತು. ರಥದ ಮುಂಭಾಗ, ದೇವಾಲಯಗಳ ಮುಂಭಾಗದಲ್ಲಿ ಸಾವಿರಾರು ಭಕ್ತರು ಕೊಬ್ಬರಿ ಸುಟ್ಟು ಹರಕೆ ಸಲ್ಲಿಸಿದರು. ಹೊರಮಠದಲ್ಲಿ ಸಾವಿರಾರು ಭಕ್ತರು ಪರುವುಗಳನ್ನು ಮಾಡಿ ಎಡೆ ಹಾಕುವ ಮೂಲಕ ಹರಕೆ ಪೂರೈಸಿದರು.ಮರಿಪರಿಷೆ ಅಂಗವಾಗಿ ವಿಶೇಷ ವಾರೋತ್ಸವ ಜರುಗಿತು. ಅಲಂಕೃತ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ದೇವಾಲಯದ ಸಾಂಪ್ರದಾಯಿಕ ವಾದ್ಯಗಳು, ನಂದಿಧ್ವಜ ಸೇರಿ ನಾನಾ ವಾದ್ಯಗಳು ಉತ್ಸವದಲ್ಲಿದ್ದವು. ಸಂಜೆ ಊಳಿಗದ ಯುವಕರು ಸಂಪ್ರದಾಯದಂತೆ ತಿಪ್ಪೇರುದ್ರಸ್ವಾಮಿಯ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕಾರ ಮಾಡಿದ್ದ ಹೂವಿನ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಒಳಮಠದಿಂದ ತೇರುಬೀದಿ ಮಾರ್ಗವಾಗಿ ಹೊರಮಠಕ್ಕೆ ಕೆರೆತಂದು ವಾರೋತ್ಸವ ಕಾರ್ಯಕ್ರಮವನ್ನು ನಡೆಸಿದರು. ನಂತರ ಪಲ್ಲಕ್ಕಿಯನ್ನು ಅದೇ ಮಾರ್ಗದಲ್ಲಿ ಒಳಮಠಕ್ಕೆ ತಂದು ದೇವರನ್ನು ಗುಡಿದುಂಬಿಸಲಾಯಿತು.ಮರಿಪರಿಷೆಯಲ್ಲಿ ನೆರೆದ ಸಾವಿರಾರು ಭಕ್ತರಿಗೆ ಒಳಮಠದ ಆವರಣದಲ್ಲಿ ದಾವಣಗೆರೆಯ ಬಿ. ಪ್ರಭಣ್ಣ ಬೇತೂರು ಇಂಡಸ್ಟ್ರೀಸ್ ವತಿಯಿಂದ 3 ಸಾವಿರ ಲಡ್ಡು ವಿತರಿಸಲಾಯಿತು.ಭರ್ಜರಿ ವ್ಯಾಪಾರ ವಹಿವಾಟು: ಪಟ್ಟಣದ ಸಂತೆಪೇಟೆ ಮೈದಾನ, ತೇರುಬೀದಿ, ಒಳಮಠದ ರಸ್ತೆಯಲ್ಲಿ ಹಲವು ವ್ಯಾಪಾರ ಮಳಿಗೆಗಳು ಭರ್ಜರಿ ವಹಿವಾಟು ನಡೆಸಿದವು. ಖಾರಮಂಡಕ್ಕಿ, ಬೆಂಡು ಬತ್ತಾಸು, ಮಕ್ಕಳ ಆಟಿಕೆಗಳು ಸೇರಿ ಹಲವು ಅಂಗಡಿಗಳು ಮರಿಪರಿಷೆಗೆ ವಿಶೇಷವಾದ ಮೆರುಗು ನೀಡಿದ್ದವು.ದೇವಾಲಯ ಕಾರ್ಯನಿರ್ವಾಹಕಾಧಿಕಾರಿ ಎಚ್. ಗಂಗಾಧರಪ್ಪ, ಎಸ್. ಸತೀಶ್ ದೇವಾಲಯ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಎಂ.ವೈ.ಟಿ. ಸ್ವಾಮಿ, ಜೆ.ಪಿ. ರವಿಶಂಕರ್, ಪಟ್ಟಣ ಪಂಚಾಯಿತಿ ಸದಸ್ಯರಾದ ಎನ್. ಮಹಾಂತಣ್ಣ, ಜೆ.ಆರ್. ರವಿಕುಮಾರ್, ಗ್ರಾಮಸ್ಥರಾದ ಸಿದ್ದೇಶ್ಕುಮಾರ್, ದಳವಾಯಿ ರುದ್ರಮುನಿ, ಮಹಾಂತೇಶ್, ಟಿ. ರುದ್ರಮುನಿ, ಉಮೇಶ್ ಅವರೂ ಇದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada