ಉತ್ತಮ ಮಳೆಯಾದ ಸಂದರ್ಭದಲ್ಲಿ ಸಕಾಲಕ್ಕೆ ರಸಗೊಬ್ಬರ ನೀಡಿದರೆ ಒಳ್ಳೆಯ ಫಸಲು ಸಿಗಬಹುದು ಎಂಬ ನಿರೀಕ್ಷೆ ರೈತ ಸಮುದಾಯದಲ್ಲಿರುತ್ತದೆ. ಆದರೆ ಸಕಾಲಕ್ಕೆ ರಸಗೊಬ್ಬರ ಸಿಗದಿದ್ದರೆ ಉತ್ತಮ ಬೆಳೆಯ ಕನಸು ಕರಗಿಹೋಗುತ್ತದೆ.
ಈ ಬಾರಿ ಮುಂಗಾರು ಮಳೆ ಉತ್ತಮವಾಗಿರುತ್ತದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮಾಹಿತಿ ನೀಡಿದ್ದು, ಹೀಗಾಗಿ ರೈತರು ತಮ್ಮ ಹೊಲಗದ್ದೆಗಳನ್ನು ಹಸನುಗೊಳಿಸಿ ಬೆಳೆಯ ತಯಾರಿಯಲ್ಲಿದ್ದಾರೆ. ಆದರೆ ಹೆಚ್ಚುತ್ತಿರುವ ದರ ಮತ್ತು ಪೂರೈಕೆಯಲ್ಲಾಗುತ್ತಿರುವ ವ್ಯತ್ಯಾಸದಿಂದಾಗಿ ಈ ಬಾರಿ ರಸಗೊಬ್ಬರ ಕೊರತೆ ಎದುರಾಗಬಹುದೆಂಬ ಆತಂಕ ರೈತ ಸಮುದಾಯವನ್ನು ಕಾಡುತ್ತಿದೆ.
ಇದಕ್ಕೆ ಪುಷ್ಟಿ ನೀಡುವಂತೆ ರೈತರು, ಅಂಗಡಿಗಳ ಮುಂದೆ ಕಾದು ನಿಲ್ಲಬೇಕಾದ ಪರಿಸ್ಥಿತಿ ಇದ್ದು, ಕೆಲವೆಡೆ ರಸಗೊಬ್ಬರ ಪೂರೈಕೆಯಾದ ತಕ್ಷಣವೇ ಖಾಲಿಯಾಗುತ್ತಿದೆ. ರಸಗೊಬ್ಬರ ದುಬಾರಿಯಾಗಿರುವುದರ ಮಧ್ಯೆ ಅದರ ಕೊರತೆಯೂ ಎದುರಾದರೆ ಹೇಗೆ ಎಂಬ ಚಿಂತೆ ಕೃಷಿಕರನ್ನು ಕಾಡುತ್ತಿದೆ. ಆದರೆ ಕೃಷಿ ಇಲಾಖೆ ಅಧಿಕಾರಿಗಳ ಪ್ರಕಾರ ರಾಜ್ಯದಲ್ಲಿ ರಸಗೊಬ್ಬರ ಅಭಾವ ಎದುರಾಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಮುಂಗಾರು ಹಂಗಾಮಿನಲ್ಲಿ ರೈತರಿಗೆ ಸಾಕಷ್ಟು ರಸಗೊಬ್ಬರ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: