ಬೆಂಗಳೂರು: ಪತ್ನಿಯ ಶೀಲ ಶಂಕಿಸಿದ ಪತಿ ಮುದ್ದೆಕೋಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ತಲಘಟ್ಟ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.
ನಾಗೇಗೌಡನ ಪಳ್ಯದ ನಿವಾಸಿ ಪದ್ಮಾ (45) ಕೊಲೆ ಯಾದ ಮಹಿಳೆ.
ಕೊಲೆ ಪ್ರಕರಣದ ಸಂಬಂಧ ತಲಘಟ್ಟಪುರ ಪೊಲೀಸರು ಆಕೆಯ ಪತಿ ಮಾರಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮಾರಪ್ಪ ವ್ಯವಸಾಯ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪತ್ನಿ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿ ಪತಿ ಮಾರಪ್ಪ ಆಗಾಗ್ಗೆ ಜಗಳವಾಡುತ್ತಿದ್ದ. ಶುಕ್ರವಾರ ಸಂಜೆ 6.30ರಿಂದ 9.30ರ ನಡುವೆ ಇದೇ ವಿಚಾರವಾಗಿ ದಂಪತಿ ನಡುವೆ ಜಗಳವಾಗಿದೆ. ಆ ಸಂದರ್ಭದಲ್ಲಿ ಮಾರಪ್ಪ ಕೈಗೆ ಸಿಕ್ಕಿದ ಮುದ್ದೆಕೋಲಿನಿಂದ ಪತ್ನಿಗೆ ಹೊಡೆದು ಕೊಲೆ ಮಾಡಿದ್ದಾನೆ.
ನಂತರ ಮನೆಯ ಬಾಗಿಲ ಚಿಲಕ ಹಾಕಿಕೊಂಡು ಒಳಗೆ ಇದ್ದ. ಮಗ ಗಿರೀಶ್ ಮನೆಗೆ ಬಂದು ಅಮ್ಮ ಎಂದು ಕೂಗಿದ್ದಾನೆ. ಬಾಗಿಲು ತೆರೆಯದಿದ್ದಾಗ ಅಪ್ಪ ಎಂದು ಕೂಗಿದ್ದಾನೆ. ಒಳಗಿದ್ದ ಅಪ್ಪ ಓಹ್ ಎಂದು ಹೇಳಿದ್ದಾನೆ. ಆದರೆ ಬಾಗಿಲು ತೆಗೆಯುವಂತೆ ಹೇಳಿದರೂ ತೆಗೆದಿಲ್ಲ. ಅನುಮಾನಗೊಂಡ ಗಿರೀಶ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಘಟನೆ ಅರಿತು ಸ್ಥಳಕ್ಕಾಗಮಿಸಿದ ತಲಘಟ್ಟಪುರ ಠಾಣೆ ಪೊಲೀಸರು ಬಾಗಿಲು ತೆಗೆಸಿದ್ದು, ಒಳಗೆ ಹೋಗಿ ನೋಡಿದಾಗ ಮಹಿಳೆ ಕೊಲೆಯಾಗಿರುವುದು ಕಂಡುಬಂದಿದೆ. ತಕ್ಷಣ ಪೊಲೀಸರು ಆರೋಪಿ ಮಾರಪ್ಪನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಮೃತ ದೇಹವನ್ನು ಕೆಂಪೇಗೌಡ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: