ಹಿಂದಿ ರಾಷ್ಟ್ರೀಯ ಭಾಷೆ ಎನ್ನುವ ವಿಚಾರದಲ್ಲಿ ನಟ ಸುದೀಪ್ ಮತ್ತು ಅಜಯ್ ದೇವಗನ್ ನಡುವೆ ವಾಗ್ವಾದ ನಡೆದಿತ್ತು. ಕೊನೆಗೆ ಅಜಯ್ ದೇವಗನ್ ಸುದೀಪ್ ಬಳಿ ಕ್ಷಮೆ ಕೇಳಿದ್ದರು. ಬಾಲಿವುಡ್ ನಟ ಅಜಯ್ ದೇವ್ಗನ್ ಹಿಂದಿ ರಾಷ್ಟ್ರ ಭಾಷೆ ಎಂದು ಮಾಡಿದ್ದ ಟ್ವೀಟ್ನಿಂದ ಈಗಾಗಲೇ ಹಿಂದಿ ರಾಷ್ಟ್ರ ಭಾಷೆ ಹೌದೋ ಅಲ್ಲವೋ ಎಂದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದೆ.
ಹೆಚ್ಚಿನ ಮಂದಿ ಸುದೀಪ್ ಮಾತನ್ನು ಒಪ್ಪಿದ್ದರು. ಅಜಯ್ ದೇವಗನ್ ಹೇಳುತ್ತಿರುವ ಮಾತಿನಲ್ಲಿ ಹುರುಳಿಲ್ಲ, ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದು ಹಲವು ಸಿನಿಮಾ ತಾರೆಯರು, ಅದರಲ್ಲೂ ಬಾಲಿವುಡ್ ತಾರೆಯರು ಕಿಚ್ಚನ ಪರ ಬ್ಯಾಟ್ ಬೀಸಿದ್ದರು. ಸುದೀಪ್ ಹೇಳುತ್ತಿರುವುದು ಸರಿ ಎಂದು ಒಪ್ಪಿಕೊಂಡಿದ್ದರು.
ಆದರೆ ಈಗ ಮತ್ತೊಬ್ಬ ಬಾಲಿವುಡ್ ನಟ ಅರ್ಜುನ್ ರಾಮ್ಪಾಲ್ “ಹಿಂದಿ ನಮ್ಮ ರಾಷ್ಟ್ರಭಾಷೆ, ಅದಕ್ಕೆ ನಾವು ಗೌರವ ಕೊಡಬೇಕು” ಎಂದು ಹೇಳಿದ್ದಾರೆ. ಈ ಮೂಲಕ ಮತ್ತೆ ಹಿಂದಿ ರಾಷ್ಟ್ರ ಭಾಷೆ ಎನ್ನುವ ವಾದವನ್ನು ಮುಂದುವರೆಸಿದ್ದಾರೆ.
ಹಿಂದಿ ರಾಷ್ಟ್ರ ಭಾಷೆ: ಅರ್ಜುನ್ ರಾಮ್ಪಾಲ್!
ಇತ್ತೀಚೆಗೆ ಹಿಂದಿ ಭಾಷೆಯ ಬಗ್ಗೆ ಮಾತನಾಡಿದ ಅರ್ಜುನ್ ರಾಮ್ಪಾಲ್ “ಭಾರತವು ಹಲವು ಭಾಷೆ, ಸಂಸ್ಕೃತಿ, ಸಂಪ್ರದಾಯ, ಹಬ್ಬ, ಧರ್ಮಗಳಿಂದ ಕೂಡಿದ ರಾಷ್ಟ್ರವಾಗಿದೆ. ನಾವೆಲ್ಲರೂ ಇಲ್ಲಿ ಶಾಂತಿಯುತವಾಗಿ, ಖುಷಿಯಿಂದ ಒಟ್ಟಾಗಿ ನೆಲೆಸಿದ್ದೇವೆ. ಹಾಗಿರೋವಾಗ ನನಗೆ ಇಲ್ಲಿ ಭಾಷೆ ಮುಖ್ಯ ಎನಿಸುವುದಿಲ್ಲ. ಆದರೆ ಭಾವನೆಗಳೂ ಹೆಚ್ಚು ಮುಖ್ಯ ಎನಿಸುತ್ತವೆ. ಹಿಂದಿ ರಾಷ್ಟ್ರ ನಮ್ಮ ಭಾಷೆ, ಅದನ್ನು ನಾವು ಗೌರವಿಸಬೇಕು. ನಮ್ಮಲ್ಲಿ ಹಿಂದಿಯನ್ನು ಹೆಚ್ಚು ಮಾತನಾಡುತ್ತಾರೆ, ಅರ್ಥ ಮಾಡಿಕೊಳ್ಳುತ್ತಾರೆ.” ಎಂದು ನಟ ಅರ್ಜುನ್ ರಾಮ್ಪಾಲ್ ಹೇಳಿದ್ದಾರೆ.
ತಮಿಳು, ತೆಲುಗು ಸ್ವಲ್ಪ ಕಲಿಯಿರಿ: ಅರ್ಜುನ್ರಾಮ್ ಪಾಲ್!
“ಆದರೆ ಹಿಂದಿ ಬೇರೆ ಭಾಷೆಯಿಂದ ದೂರ ಆಗೋದಿಲ್ಲ. ನಾವು ವೈವಿಧ್ಯಮಯ ರಾಷ್ಟ್ರದಲ್ಲಿ ವಾಸಿಸುತ್ತಿರುವುದರಿಂದ, ಪ್ರತಿಯೊಬ್ಬರ ವಿಭಿನ್ನ ಸಂಸ್ಕೃತಿಗಳನ್ನು ಅಳವಡಿಸಿಕೊಳ್ಳುವುದು ಉತ್ತಮ. ತಮಿಳು, ತೆಲುಗು ಸ್ವಲ್ಪ ಕಲಿಯಿರಿ. ನಾನು ಓದಲು ತಮಿಳುನಾಡಿಗೆ ಹೋಗಿದ್ದೆ, ಹಾಗಾಗಿ ಸುಲಭವಾಗಿ ತಮಿಳು ಕಲಿತೆ. ಪಂಜಾಬ್ಗೆ ಶೂಟಿಂಗ್ಗೆ ಹೋದಾಗ ನಾನು ಪಂಜಾಬಿ ಭಾಷೆ ಕಲಿತೆ. ಗುಜರಾತಿಗೆ ಹೋದರೆ ಅಲ್ಲಿ ಗುಜರಾತಿ ಭಾಷೆ ಕಲಿಯುತ್ತೀರಿ. ನಾನು ಮಹಾರಾಷ್ಟ್ರದಲ್ಲಿ ಇರೋದರಿಂದ ಮರಾಠಿ ಕಲಿತೆ. ಈ ಎಲ್ಲ ಭಾಷೆ ಕಲಿತು ಮಾತನಾಡೋದರಿಂದ ಖುಷಿ ಸಿಗುತ್ತದೆ. ನಾವು ಅದನ್ನು ಆಚರಿಸಬೇಕು.” ಎಂದಿದ್ದಾರೆ.
ವಿವಾದ ಹುಟ್ಟು ಹಾಕಿದ್ದ ಅಜಯ್ ದೇವಗನ್ ಟ್ವೀಟ್!
ಈ ಹಿಂದೆ ಇದೇ ವಿಚಾರವಾಗಿ ನಟ ಅಜಯ್ ದೇವಗನ್ ಸುದೀಪ್ ಮಾಡಿದ್ದ ಟ್ವೀಟ್ ಹೀಗಿದೆ. “ಸಹೋದರ ಕಿಚ್ಚ ಸುದೀಪ್, ನಿಮ್ಮ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದಾದರೆ, ನಿಮ್ಮ ಮಾತೃ ಭಾಷೆಯ ಸಿನಿಮಾಗಳನ್ನು ಹಿಂದಿಗೆ ಯಾಕೆ ಡಬ್ ಮಾಡಿ ರಿಲೀಸ್ ಮಾಡುತ್ತೀರಿ? ಹಿಂದಿ ನಮ್ಮ ಮಾತೃ ಭಾಷೆ, ರಾಷ್ಟ್ರ ಭಾಷೆ ಆಗಿದೆ. ಇಂದು ಮತ್ತು ಎಂದೆಂದಿಗೂ ರಾಷ್ಟ್ರ ಭಾಷೆ ಆಗಿರುತ್ತದೆ.” ಎಂದು ಅಜಯ್ ದೇವ್ಗನ್ ಟ್ವೀಟ್ ಮಾಡಿದ್ದರು.
ಅಜಯ್ ದೇವಗನ್ಗೆ ಖಡಕ್ ಉತ್ತರ ಕೊಟ್ಟಿದ್ದ ಕಿಚ್ಚ!
ನಟ ಸುದೀಪ್ ಅಜಯ್ ದೇವಗನ್ಗೆ ಕೊಟ್ಟ ಉತ್ತರ ಕಂಡು ಅಜಯ್ ದೇವಗನ್, ಸುದೀಪ್ ಬಳಿ ಕ್ಷಮೆ ಕೇಳಿದ್ದರು. “ಹಾಯ್ ಕಿಚ್ಚ ಸುದೀಪ್.. ನೀವು ನನ್ನ ಸ್ನೇಹಿತ. ನನ್ನ ತಪ್ಪು ತಿಳುವಳಿಕೆಯನ್ನು ಸರಿ ಪಡಿಸಿದ್ದಕ್ಕಾಗಿ ಧನ್ಯವಾದಗಳು. ಯಾವಾಗಲೂ ಚಿತ್ರರಂಗ ಒಂದೇ ಎಂದು ನಂಬಿರುವವನು ನಾನು. ನಾವು ಎಲ್ಲಾ ಭಾಷೆಗಳನ್ನು ಗೌರವಿಸುತ್ತೇವೆ. ಹಾಗೇ, ನಮ್ಮ ಭಾಷೆಯನ್ನೂ ಇತರರು ಗೌರವಿಸಬೇಕು ಎಂದು ಭಾವಿಸುತ್ತೇವೆ. ಬಹುಶಃ ಅನುವಾದದಲ್ಲಿ ಏನೋ ತಪ್ಪಾಗಿರುವ ಹಾಗಿದೆ” ಎಂದು ಅಜಯ್ ಟ್ವೀಟ್ ಮಾಡಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada