ಪ್ರಪ್ರಥಮ ಕನ್ನಡಿಗ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜಕೀಯ ಪಟ್ಟುಗಳನ್ನು ಕಲಿತು ಬೆಳೆದ, ಪ್ರಸ್ತುತ ಅವರ ಪುತ್ರ ಎಚ್.ಡಿ. ರೇವಣ್ಣ ಅವರ ಅಭೇದ್ಯ ಕೋಟೆಯಂತಾಗಿರುವ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ ರಾಜ್ಯದ ಪ್ರತಿಷ್ಠಿತ ಕಣಗಳಲ್ಲಿ ಒಂದು.1957ರಿಂದ ಇದುವರೆಗೂ ನಡೆದಿರುವ 14 ಸಾರ್ವತ್ರಿಕ ಚುನಾವಣೆಗಳಲ್ಲಿ ಒಮ್ಮೆ ವೈ.ವೀರಭದ್ರಪ್ಪ, ಆರು ಬಾರಿ ಎಚ್.ಡಿ. ದೇವೇಗೌಡ, ತಲಾ ಒಂದು ಬಾರಿ ಜಿ.ಪುಟ್ಟಸ್ವಾಮಿಗೌಡ ಮತ್ತು ಎ. ದೊಡ್ಡೇಗೌಡ ಹಾಗೂ ಐದು ಬಾರಿ ಎಚ್.ಡಿ. ರೇವಣ್ಣ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.ವೈ.ವೀರಭದ್ರಪ್ಪ ಅವರು ಪ್ರಜಾ ಸೋಷಲಿಸ್ಟ್ ಪಾರ್ಟಿಯಿಂದ, ದೇವೇಗೌಡರು ಎರಡು ಬಾರಿ ಸ್ವತಂತ್ರವಾಗಿ, ಒಮ್ಮೆ ಕಾಂಗ್ರೆಸ್ನಿಂದ ಮತ್ತು ಮೂರು ಬಾರಿ ಜನತಾ ಪಕ್ಷದಿಂದ ಗೆದ್ದಿದ್ದರು. ಜಿ.ಪುಟ್ಟಸ್ವಾಮಿಗೌಡ ಮತ್ತು ಎ.ದೊಡ್ಡೇಗೌಡ ಕ್ರಮವಾಗಿ 1989 ಮತ್ತು 1999ರಲ್ಲಿ ಕಾಂಗ್ರೆಸ್ ಬಾವುಟ ಹಾರಿಸಿದ್ದರು. ಉಳಿದಂತೆ, ಜನತಾದಳದಿಂದ ಎಚ್.ಡಿ.ರೇವಣ್ಣ ಸತತ ಗೆಲುವು ಸಾಧಿಸುತ್ತ ಬಂದಿದ್ದು, ಈ ಕ್ಷೇತ್ರ ಮೊದಲಿನಿಂದಲೂ ಜೆಡಿಎಸ್ನ ಭದ್ರಕೋಟೆ ಆಗಿದೆ. 2008ರಲ್ಲಿ ಕ್ಷೇತ್ರ ಪುನರ್ವಿಂಗಡಣೆ ಆದ ನಂತರವಂತೂ ಮೂರು ತಾಲೂಕುಗಳ ಐದು ಹೋಬಳಿಗಳನ್ನೊಳಗೊಂಡು ರಚನೆಗೊಂಡ ಹೊಳೆನರಸೀಪುರ ಕ್ಷೇತ್ರ ರೇವಣ್ಣರ ಅಭೇದ್ಯ ಕೋಟೆಯಾಗಿ ಮಾರ್ಪಟ್ಟಿದೆ.ಕುರುಬ ಜನಾಂಗದ ಮತದಾರರ ಪ್ರಾಬಲ್ಯ ಹೊಂದಿರುವ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಹೋಬಳಿ ಅರಕಲಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರಿದೆ. ಉಳಿದ ಕಸಬಾ ಮತ್ತು ಹಳೇಕೋಟೆ, ಹಾಸನ ತಾಲೂಕಿನ ದುದ್ದ ಮತ್ತು ಶಾಂತಿಗ್ರಾಮ ಹಾಗೂ ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿಗಳು ಹೊಳೆನರಸೀಪುರ ಕ್ಷೇತ್ರ ವ್ಯಾಪ್ತಿಗೆ ಸೇರುತ್ತವೆ. ಈ ಐದೂ ಹೋಬಳಿಗಳಲ್ಲಿ ಒಕ್ಕಲಿಗ ಜನಾಂಗದ ಪ್ರಾಬಲ್ಯ ಹೆಚ್ಚಿರುವುದು ರೇವಣ್ಣ ಅವರ ಸತತ ಗೆಲುವಿನ ಮೂಲಶಕ್ತಿ. ಜತೆಗೆ, ಕ್ಷೇತ್ರದ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಕುಡಿಯುವ ನೀರು, ಆಸ್ಪತ್ರೆ, ಶಿಕ್ಷಣ ಸೇರಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಕೈ ಹಿಡಿಯುತ್ತಿವೆ. ಅಲ್ಲದೆ, ಕ್ಷೇತ್ರವು ಮೂರು ತಾಲೂಕುಗಳಲ್ಲಿ ಹಂಚಿ ಹೋಗಿರುವುದರಿಂದ ಎಲ್ಲ ಪ್ರದೇಶಗಳ ಮತದಾರರ ವಿಶ್ವಾಸ ಗಳಿಸುವುದು ಪ್ರತಿಸ್ಪರ್ಧಿ ಅಭ್ಯರ್ಥಿಗೆ ಬಹುದೊಡ್ಡ ಸವಾಲಾಗಿರುವುದು ರೇವಣ್ಣ ಅವರಿಗೆ ಅನುಕೂಲಕರವಾಗಿ ಪರಿಣಮಿಸಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…