ಬಡತನ ಸಾಧನೆ ಮಾಡೋಕೆ ಯಾವತ್ತೂ ಅಡ್ಡಿಯಲ್ಲ. ಸಾಧಿಸಬೇಕೆಂಬ ಛಲವೊಂದಿದ್ದರೆ ಸಾಕು. ಅದೆಂಥದೇ ಬಡತನ ಇದ್ದರೂ ಅದನ್ನು ಮೆಟ್ಟಿ ನಿಂತು ಸಾಧಿಸಬಹುದು ಎಂಬುದಕ್ಕೆ ಈ ಯುವತಿ ಸಾಕ್ಷಿಯಾಗಿದ್ದಾಳೆ. ಕಡುಬಡತನದಲ್ಲಿಯೂ ಅಂತರಾಷ್ಟ್ರ ಮಟ್ಟದ ಕ್ರೀಡೆಯಲ್ಲಿ ಮಿಂಚಿ ಗ್ರಾಮೀಣ ಪ್ರದೇಶದ ಬಡ ಪ್ರತಿಭಾವಂತ ಪ್ರತಿಭೆಗಳಿಗೆ ಆದರ್ಶವಾಗಿದ್ದಾಳೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ…
ವಿ.ವೊ: ಚಿಕ್ಕದಾದ ಮನೆ, ಶಾಲೆ ಮೆಟ್ಟಿಲು ಹತ್ತದ ತಂದೆ-ತಾಯಿ. ಮಲೇಷ್ಯಾದಲ್ಲಿ ಬಂಗಾರದ ಪದಕ ಗೆದ್ದು ಬಂದ ಅದೇ ಮನೆ ಮಗಳು. ಹೀಗೆ ಕೆಸರಿನಲ್ಲಿಯೇ ಶ್ರೇಷ್ಟ ಕಮಲ ಹುಟ್ಟೋದು ಎನ್ನುವಂತೆ ಬಡತನದಲ್ಲಿ ಅರಳಿದ ಪ್ರತಿಭಾವಂತ ಯುವತಿಯೇ ವೈಶಾಲಿ ಜಿ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದವರು. ಗುರುಪ್ರಕಾಶ ಹಾಗೂ ಲಕ್ಷ್ಮಿದೇವಿಯವರ ಕೊನೆಯ ಮಗಳು. ಸದ್ಯ ತುಮಕೂರಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ಥ್ರೋ ಬಾಲ್, ಅಥ್ಲೆಟಿಕ್ಸ್ ಕ್ರೀಡೆಗಳೆಂದರೆ ಈಕೆಗೆ ಅಚ್ಚುಮೆಚ್ಚು. ಇತ್ತೀಚೆಗೆ ಮಲೇಶಿಯಾದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಸೀನಿಯರ್ ವಿಭಾಗದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಭಾರತ ತಂಡ ಪ್ರಥಮ ಸ್ಥಾನ ಗಳಿಸಿದೆ. ಈ ತಂಡದಲ್ಲಿ ಆಡುವ ಏಳು ಜನರಲ್ಲಿ ಚಿತ್ರದುರ್ಗದ ವೈಶಾಲಿ ಜಿ ಸಹ ಆಟಗಾರ್ತಿ. ಮಲೇಷ್ಯಾದಲ್ಲಿ ಟೂರ್ನಿಯಲ್ಲಿ ಆಡಿ ಗೆದ್ದು ಬಂದಿದ್ದು ಖುಷಿ. ಆದರೆ ಈ ಟೂರ್ನಿಗೆ ದೆಹಲಿಯಲ್ಲಿ ಆಯ್ಕೆಯಾದಾಗ ಮಲೇಷ್ಯಾಗೆ ಹೋಗಲು ಹಣಕಾಸಿನ ಅಡಚಣೆಯಾಗಿತ್ತು. ಆಗ ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಜೊತೆಗೆ ಕುಟುಂಬದವರ ಸಹಕಾರದಿಂದ ಬಂಗಾರದ ಪದಕ ಗೆಲ್ಲಲು ಸಾಧ್ಯವಾಯ್ತು. ಮುಂದೆ ಇನ್ನು ಸಾಧಿಸುವ ಗುರಿ ಹೆಚ್ಚಿದೆ. ಹಳ್ಳಿ ಪ್ರದೇಶದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತ, ಕುರಿ, ಜಾನುವಾರುಗಳನ್ನು ಕಾಯುತ್ತ ಬೆಳೆದ ತಾನು ಅಂತರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದು ಖುಷಿ ವಿಚಾರ ಎಂಬುದು ಬಂಗಾರ ಗೆದ್ದು ವಾಪಸಾದ ವೈಶಾಲಿಯ ಅನಿಸಿಕೆ.
ಬೈಟ್ ೦೧: ವೈಶಾಲಿ ಜಿ, ಥ್ರೋ ಬಾಲ್ ಕ್ರೀಡಾಪಟು
ವಿ.ವೊ: ಹೀಗೆ ಬಡ ಕುಟುಂಬದಲ್ಲಿ ಹುಟ್ಟಿ, ಕಷ್ಟಪಟ್ಟು ಓದಿ ಸಾಧನೆ ಮಾಡಿರುವುದು ಬರೀ ವದ್ದಿಕೆರೆ ಗ್ರಾಮಕ್ಕಲ್ಲ. ಚಿತ್ರದುರ್ಗ ಜಿಲ್ಲೆಗೆ ಬಹುದೊಡ್ಡ ಹೆಮ್ಮೆ. ಇಂತಹ ಹಳ್ಳಿಯ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಕ್ಕರೆ ಸಾಧನೆ ಮಾಡುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಅಂತಾ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.