ತಿರುವನಂತಪುರಂ: ಯುವಕನೊಬ್ಬ ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿಯ ಕಪಾಳಕ್ಕೆ ಬಾರಿಸಿ ಎಸ್ಕೇಪ್ ಆಗುವಾಗ ಸರಣಿ ಅಪಘಾತ ಸಂಭವಿಸಿರುವ ಘಟನೆ ಸೋಮವಾರ ಸಂಜೆ ನೆಯ್ಯಟ್ಟಿಂಕರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಯುವತಿಯ ಕೆನ್ನೆಗೆ ಬಾರಿಸಿದ ಯುವಕನನ್ನು ಅನವೂರ್ ಮೂಲದ ಶಿನೋಜ್ ಎಂದು ಗುರುತಿಸಲಾಗಿದೆ.
ಕಪಾಳಕ್ಕೆ ಬಾರಿಸಿ ಓಡಿ ಹೋಗುವಾಗ ಶಿನೋಜ್ನನ್ನು ನೋಡಿದ ಸ್ಥಳೀಯರು ಆತನನ್ನು ಹಿಡಿಯಲು ಪ್ರಯತ್ನಿಸಿದರು. ಈ ವೇಳೆ ಶಿನೋಜ್ ತನ್ನ ಸ್ನೇಹಿತನ ಜೊತೆ ಕಾರಿನಲ್ಲಿ ಎಸ್ಕೇಪ್ ಆಗುವ ಭರದಲ್ಲಿ ಸರಣಿ ಅಪಘಾತ ಮಾಡಿದ್ದಾರೆ. ಎರಡು ಆಟೋ ಮತ್ತು ನಾಲ್ಕು ಬೈಕ್ಗಳಿಗೆ ಕಾರು ಡಿಕ್ಕಿ ಹೊಡೆದಿದೆ. ಓರ್ವ ಬೈಕ್ ಸವಾರನಿಗೆ ಗಾಯವಾಗಿದೆ.
ಸರಣಿ ಅಪಘಾತದ ಬಳಿಕ ಕಾರು ರಸ್ತೆಯಲ್ಲಿ ಎದುರಿಗೆ ಸಿಕ್ಕ ಪೊಲೀಸ್ ಜೀಪ್ಗೂ ಡಿಕ್ಕಿ ಹೊಡೆದಿದೆ. ಕಪಾಳಕ್ಕೆ ಹೊಡೆತ ತಿಂದ ಯುವತಿ ಶಿನೋಜ್ನ ಗರ್ಲ್ಫ್ರೆಂಡ್ ಎಂದು ಹೇಳಲಾಗಿದೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿರುವ ದೃಶ್ಯ ಬಸ್ ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲೂ ಸೆರೆಯಾಗಿದೆ. ಯುವತಿಯ ಫೋನ್ ಕಸಿದುಕೊಂಡು ಆಕೆಯ ಕಪಾಳಕ್ಕೆ ಬಾರಿಸಿ ಶಿನೋಜ್ ಎಸ್ಕೇಪ್ ಆಗುವಾಗ ಸರಣಿ ಅಪಘಾತ ನಡೆದಿದೆ.
ಶಿನೋಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada