ವಿಜಯನಗರ: ಜೈನ ಸಮುದಾಯ ದ ಯುವತಿ ಮುಮುಕ್ಷಾ ವಿಧಿ ಕುಮಾರಿ ಇಂದು (ಜ.18) ಮಹಾವೀರ ಜೈನ ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ. ಶ್ರೀ ಆದಿನಾಥ ಜೈನ ಶ್ವೇತಾಂಬರ ಸಂಘದ ವತಿಯಿಂದ ದೀಕ್ಷಾ ಕಾರ್ಯಕ್ರಮ ಹೊಟೇಲ್ ಮಲ್ಲಿಗೆಯಲ್ಲಿ ನಡೆಯಲಿದೆ.
ಹೊಸಪೇಟೆ ಯ ಉದ್ಯಮಿಯಾದ ದಿವಂಗತ ಕಾಂತಿಲಾಲಾ ಜಿ ಜಿರಾವಲಾ ಮತ್ತು ರೇಖಾದೇವಿ ಜಿರಾವಲಾ ದಂಪತಿಯ ನಾಲ್ವರು ಪುತ್ರಿಯರಲ್ಲಿ ಮುಮುಕ್ಷಾ ಮೂರನೇಯವರು. 10ನೇ ತರಗತಿಯಲ್ಲಿ ಶೇ.94.8, ಪಿಯುಸಿಯಲ್ಲಿ ಶೇ.99 ರಷ್ಟು ಫಲಿತಾಂಶ ಪಡೆದಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿನಿ ಎನಿಸಿಕೊಂಡಿದ್ದಾರೆ. ಮುಮುಕ್ಷಾಗೆ ಬಾಲ್ಯದಿಂದಲೇ ಜೈನ ಸನ್ಯಾಸ ತತ್ವದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. 10 ಮತ್ತು 17ನೇ ವಯಸ್ಸಿನಲ್ಲಿ 48 ದಿನ ಉಪಧ್ಯಾನ ತಪ ಸಂಪನ್ನಗೊಳಿಸಿದ್ದಾರೆ.
ದೇಶದಲ್ಲಿ ಪ್ರತಿ ವರ್ಷ 300 ಜನ ಯುವಕ-ಯುವತಿಯರು ಸನ್ಯಾಸತ್ವ ಸ್ವೀಕರಿಸುತ್ತಾರೆ. ಅವರು ಮತ್ತೆ ಲೌಕಿಕ ಬದುಕಿಗೆ ಮರಳಿದ ಉದಾಹರಣೆಗಳಿಲ್ಲ. ಅಷ್ಟರ ಮಟ್ಟಿಗೆ ಜೈನ ಸನ್ಯಾಸತ್ವದಲ್ಲಿ ನಂಬಿಕೆಯನ್ನಿಟ್ಟಿರುತ್ತಾರೆ.
ಅಂದಹಾಗೆ ಸನ್ಯಾಸತ್ವ ಸ್ವೀಕರಿಸಿರುವ ಬಹುತೇಕರು ಕೋಟ್ಯಾಧೀಶರು. ಅವರ ತಂದೆ, ತಾಯಿಗಳು ಸಿರಿವಂತರಾಗಿದ್ದು, ಮನೆಯಲ್ಲಿ ಯಾವುದೇ ಕೊರತೆಗಳಿರುವುದಿಲ್ಲ. ಆದರೆ, ಆಡಂಬರ ಜೀವನ, ಮಾನವ ಸಂಬಂಧಗಳಲ್ಲಿ ಯಾವುದೇ ಅರ್ಥವಿಲ್ಲ ಎಂಬ ವೈರಾಗ್ಯದಿಂದಲೇ ಸನ್ಯಾಸತ್ವ ಸ್ವೀಕರಿಸುತ್ತಾರೆ.
ಯಾವುದೇ ವಸ್ತುಗಳ ಮೇಲೆ ವ್ಯಾಮೊಹ ಇಲ್ಲದೇ ಕೇವಲ ಭಿಕ್ಷೆಯಿಂದಲೇ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಜೈನ ಸಮುದಾಯವಲ್ಲದೇ, ಶುದ್ಧ ಸಸ್ಯಹಾರಿ ಕುಟುಂಬದಿಂದ ಆತಿಥ್ಯದ ಆಹ್ವಾನ ಬಂದರೆ ಖಂಡಿತಾ ಭಿಕ್ಷೆ ಸ್ವೀಕರಿಸುತ್ತಾರೆ.
https://play.google.com/store/apps/details?id=com.speed.newskannada