ಕುಪ್ಪಂ: ಟಿಡಿಪಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಂತ ನಟ ನಂದಮೂರಿ ತಾರಕರತ್ನ ಅವರು ಅಸ್ವಸ್ಥಗೊಂಡು, ಆಸ್ಪತ್ರೆಗೆ ದಾಖಲಾಗಿರೋದಾಗಿ ತಿಳಿದು ಬಂದಿದೆ.
ಇಂದು ನಟ ನಂದಮೂರಿ ತಾರಕರತ್ನ ಅವರು ನಾರಾ ಲೋಕೇಶ್ ಯುವಗಾಲ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಕುಪ್ಪಂ ಬಳಿಯ ಲಕ್ಷ್ಮೀಪುರಂನಲ್ಲಿರುವ ಶ್ರೀ ವರದರಾಜಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಲೋಕೇಶ್ ಅವರ ಪಾದಯಾತ್ರೆ ಪ್ರಾರಂಭವಾಯಿತು. ಸ್ವಲ್ಪ ದೂರ ನಡೆದ ನಂತರ ಲೋಕೇಶ್ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ಸಮಯದಲ್ಲಿ ಲೋಕೇಶ್ ತಾರಕರತ್ನ ಪಕ್ಕದಲ್ಲಿದ್ದರು. ಅವರು ಮಸೀದಿಯಿಂದ ಹೊರಬರುತ್ತಿದ್ದಂತೆ, ಹೆಚ್ಚಿನ ಸಂಖ್ಯೆಯ ಟಿಡಿಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ಈ ವೇಳೆ ಅವರು ಉಸಿರಾಟದ ಸಮಸ್ಯೆ ಉಂಟಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ವೇಳೆ ಅವರ ಆರೋಗ್ಯ ಪರೀಕ್ಷೆ ನಡೆಸಿದಂತ ವೈದ್ಯರು ಅವರ ಸ್ಥಿತಿ ಸ್ಥಿರವಾಗಿದೆ ಎಂಬುದಾಗಿ ಹೇಳಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೇ ನಟ ನಂದಮೂರಿ ಬಾಲಕೃಷ್ಣ ಕೂಡ ಆಸ್ಪತ್ರೆಗೆ ಧಾವಿಸಿ, ನಂದಮೂರಿ ತಾರಕರತ್ನ ಅವರ ಆರೋಗ್ಯವನ್ನು ವಿಚಾರಿಸಿದರು. ಅಲ್ಲದೇ ಅವರ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು.
ಇದೀಗ ಕುಪ್ಪಂ ಬಳಿಯ ಕೆಸಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತ್ರ, ಹೆಚ್ಚಿನ ಚಿಕಿತ್ಸೆಗಾಗಿ ಪಿಸಿಎಸ್ ಆಸ್ಪತ್ರೆಗೆ ನಂದಮೂರಿ ತಾರಕರತ್ನ ಅವರನ್ನು ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
https://play.google.com/store/apps/details?id=com.speed.newskannada