ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಇಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಿವಾಹವಾಗುತ್ತಿದ್ದಾರೆ. ಅದ್ಧೂರಿಯಾಗಿ ನಡೆಯುತ್ತಿರುವ ವಿವಾಹಕ್ಕೆ ಸ್ಯಾಂಡಲ್ವುಡ್ನ ಕೆಲ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದಾರೆ.
ಕುಟುಂಬದವರು ಹಾಗೂ ಕೆಲವು ಆಪ್ತೇಷ್ಟರಿಗಷ್ಟೆ ವಿವಾಹಕ್ಕೆ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಆಹ್ವಾನ ನೀಡಿರುವ ಕಾರಣ ಕೆಲವು ವಧು-ವರರಿಗೆ ಆಪ್ತವಾಗಿರುವ ಕೆಲವು ಸೆಲೆಬ್ರಿಟಿಗಳಷ್ಟೆ ವಿವಾಹಕ್ಕೆ ಬಂದಿದ್ದಾರೆ.
ಬೆಂಗಳೂರಿನಲ್ಲಿ ನಡೆಯಲಿರುವ ರಿಸೆಪ್ಷನ್ಗೆ ಹಲವು ಸೆಲೆಬ್ರಿಟಿಗಳು ಹಾಜರಿ ಹಾಕಿದ್ದಾರೆ.
ವಸಿಷ್ಠ ಸಿಂಹರ ಆಪ್ತ ಗೆಳೆಯ ಡಾಲಿ ಧನಂಜಯ್ ಮದುವೆಗೆ ಆಗಮಿಸಿದ್ದರು. ಅಲ್ಲದೆ, ಡಾಲಿ ಜೊತೆ ಒಂದೇ ಕಾರಿನಲ್ಲಿ ನಟಿ ಅಮೃತಾ ಐಯ್ಯಂಗಾರ್ ಸಹ ಬಂದಿದ್ದು ವಿಶೇಷವಾಗಿತ್ತು. ನವ ಜೋಡಿಯನ್ನು ಹರಸಿದ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಡಾಲಿ, ”ನನಗೆ ವಸಿಷ್ಠ ಬಹಳ ಹಳೆಯ ಗೆಳೆಯ. ಚಿತ್ರರಂಗದವರು ಹೀಗೆ ಮದುವೆ ಆಗುತ್ತಿರುವುದು ನೋಡುವುದು ಖುಷಿ ಎನಿಸುತ್ತದೆ’ ಎಂದಿದ್ದಾರೆ.
ಇನ್ನು ನಟಿ ಅಮೃತಾ ಐಯ್ಯಂಗಾರ್ ಮಾತನಾಡಿ, ”ಹರಿಪ್ರಿಯಾ ತುಂಬಾ ಮುದ್ದಾಗಿ ಕಾಣುತ್ತಿದ್ದರು. ಅವರಿಬ್ಬರ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇನೆ” ಎಂದರು. ತಮ್ಮ ಮದುವೆ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ, ”ಈಗಷ್ಟೆ ಕರಿಯರ್ ಆರಂಭವಾಗಿದೆ. ಇನ್ನೂ ಸ್ವಲ್ಪ ದಿನ ಮದುವೆ ಬೇಡ ಎಂದುಕೊಂಡಿದ್ದೇನೆ” ಎಂದಿದ್ದಾರೆ.
ನಿನ್ನೆ ವಸಿಷ್ಠ ಸಿಂಹ-ಹರಿಪ್ರಿಯಾ ಅವರ ಅರಿಶಿಣ ಶಾಸ್ತ್ರ ಕಾರ್ಯಕ್ರಮ ನಡೆದಿದ್ದು, ಈ ಶಾಸ್ತ್ರದ ಕೆಲವು ಆಪ್ತ ಚಿತ್ರಗಳನ್ನು ಹರಿಪ್ರಿಯಾ ಹಾಗೂ ವಸಿಷ್ಠ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಚಾಮುಂಡಿ ಆರಾಧಕ ಹಾಗೂ ಗಣಪತಿ ಸಚ್ಚಿದಾನಂದ ಆಶ್ರಮದೊಟ್ಟಿಗೆ ಅತ್ಯಾಪ್ತ ಬಂಧವನ್ನು ಹೊಂದಿರುವ ವಸಿಷ್ಠ ಸಿಂಹ ಇಲ್ಲಿಯೇ ವಿವಾಹವಾಗಲು ಇಚ್ಛಿಸಿ ಮೈಸೂರಿನಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಇಂದು ಬೆಳಿಗ್ಗೆ 9:50 ರಿಂದ 10:40 ರವರೆಗೆ ಇದ್ದ ಶುಭ ಲಗ್ನದಲ್ಲಿ ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಗಿದೆ. ಈ ಇಬ್ಬರೂ ಹಲ ತಿಂಗಳಿನಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ವಿವಾಹವಾಗಿದ್ದಾರೆ.
ಮದುವೆ ಕಾರ್ಯಕ್ರಮದ ಮುಗಿದ ಎರಡು ದಿನಗಳ ಬಳಿಕ ಅಂದರೆ ಜನವರಿ 28 ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಂದು ಸ್ಯಾಂಡಲ್ವುಡ್ನ ಹಲವಾರು ಸೆಲೆಬ್ರಿಟಿಗಳು, ರಾಜಕಾರಣಿಗಳು ಕಾರ್ಯಕ್ರಮಕ್ಕೆ ಹಾಜರಾಗಿ ನವ ಜೋಡಿಗೆ ಹರಸಲಿದ್ದಾರೆ.
ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಬಹು ಸಮಯದಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು. ತಮ್ಮ ಪ್ರೀತಿ ಹೇಗಾಯಿತು ಎಂಬ ಬಗ್ಗೆಯೂ ಈ ಜೋಡಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ವಿಷ್ಣುವರ್ಧನ್ ಭಾರತಿ, ಅಂಬರೀಶ್ ಸುಮಲತಾ, ನಟ ಯಶ್-ರಾಧಿಕಾ ಪಂಡಿತ್, ಡಾರ್ಲಿಂಗ್ ಕೃಷ್ಣ ಮಿಲನಾ ನಾಗರಾಜ್ ಹಾಗೆಯೇ ಸಿನಿಮಾ ರಂಗದಲ್ಲಿಯೇ ಇದ್ದು ಸಿನಿಮಾ ನಟಿಯರನ್ನೇ ಮದುವೆ ಆದ ಪಟ್ಟಿಗೆ ಈಗ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರುಗಳು ಸೇರ್ಪಡೆ ಹೊಂದಿದ್ದಾರೆ.
https://play.google.com/store/apps/details?id=com.speed.newskannada