ದೇಶದ ಸಹಕಾರ ಕ್ಷೇತ್ರದ ಅಭಿವೃದ್ಧಿಗಾಗಿ ನೂತನ ಸಹಕಾರ ನೀತಿ ರೂಪಿಸಲಾಗುತ್ತಿದ್ದು, ಅದಕ್ಕಾಗಿ ಕೇಂದ್ರದ ಮಾಜಿ ಸಚಿವ ಸುರೇಶ್ ಪ್ರಭು ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಸಹಕಾರ ಸಂಘಗಳನ್ನು ಕಂಪೆನಿ ಕಾಯ್ದೆ ವ್ಯಾಪ್ತಿಯಿಂದ ಹೊರಗಿಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಹೇಳಿದರು.ರಾಜ್ಯದ ಸಹಕಾರ ಕ್ಷೇತ್ರ ದೇಶಕ್ಕೇ ಮಾದರಿಯಾಗಿದೆ. ಆದರೆ, ಇಲ್ಲಿನ ಸಹಕಾರ ಕ್ಷೇತ್ರದಿಂದ ಸಾಹುಕಾರರಾದವರು ಸಾಕಷ್ಟು ಜನರಿದ್ದಾರೆ. ಬಂಡವಾಳ ವೃದ್ಧಿಗಾಗಿಯೇ ಸಹಕಾರ ಕ್ಷೇತ್ರದಲ್ಲಿ ತೊಡಗಿಕೊಳ್ಳುವವರೂ ಇದ್ದಾರೆ. ಸಹಕಾರ ಕ್ಷೇತ್ರವು ಸರ್ಕಾರವನ್ನು ರಚಿಸಬೇಕು. ಆದರೆ ಈಗ, ಸರ್ಕಾರವೇ ಸಹಕಾರ ರಂಗವನ್ನು ಆಳುವ ಸ್ಥಿತಿಯಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸಹಕಾರ ಕ್ಷೇತ್ರದಿಂದ ದುಡಿಯುವ ವರ್ಗದ ಆರ್ಥಿಕತೆ ಬೆಳೆಸಲು ಸಾಧ್ಯವಿದೆ. ಸಹಕಾರ ರಂಗದಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಳ್ಳುವುದು ಅಗತ್ಯ. ಎಲ್ಲ ಸದಸ್ಯರು ಅದಕ್ಕಾಗಿ ಶ್ರಮಿಸಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲಸ ಸಹಕಾರ ಸಂಘ, ಬ್ಯಾಂಕ್ಗಳು ಜನರ ವಿಶ್ವಾಸ ಕಳೆದುಕೊಳ್ಳುತ್ತಿವೆ. ರಾಜ್ಯದಲ್ಲಿ ಇನ್ನೂ ಸಹಕಾರ ಕ್ಷೇತ್ರದ ಸಾಮರ್ಥ್ಯ ಪೂರ್ಣಪ್ರಮಾದಲ್ಲಿ ಬಳಕೆಯಾಗುತ್ತಿಲ್ಲ. ಸಹಕಾರ ಕ್ಷೇತ್ರದಿಂದ ಗ್ರಾಮೀಣ ಪ್ರದೇಶದ ಆರ್ಥಿಕತೆ ಹೆಚ್ಚುತ್ತದೆ. ಹೀಗಾಗಿ ಎಲ್ಲರೂ ಸಹಕಾರ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು ಎಂದರು.ಪ್ಯಾಕ್ಸ್ಗಳ ಗಣಕೀರಣ:-ರಾಜ್ಯದ 6,040 ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣಕ್ಕೆ ಚಾಲನೆ ನೀಡಲಾಗಿದೆ. ಕೇಂದ್ರ ಸರ್ಕಾರದ ನೆರವಿನೊಂದಿಗೆ 235.56 ಕೋಟಿ ರೂ. ವೆಚ್ಚದಲ್ಲಿ ಎಲ್ಲ ಕೃಷಿ ಪತ್ತಿನ ಸಹಕಾರ ಸಂಘಗಳ ದಾಖಲೆ, ವ್ಯವಹಾರವನ್ನು ಗಣಕೀಕರಣ ಮಾಡಲಾಗುತ್ತಿದೆ. ಜತೆಗೆ ಆತ್ಮನಿರ್ಭರ ಭಾರತ ಯೋಜನೆ ಅಡಿ ಸಹಕಾರ ಸಂಘಗಳನ್ನು ಬಹುಪಯೋಗಿ ಸೇವಾ ಕೇಂದ್ರಗಳನ್ನಾಗಿ ಪರಿವರ್ತಿಸಲು 158 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು. 2022-23ನೇ ಸಾಲಿನಲ್ಲಿ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 24 ಸಾವಿರ ಕೋಟಿ ರೂ. ಬೆಳೆ ಸಾಲ ವಿತರಿಸುವ ಗುರಿ ಹೊಂದಲಾಗಿದ್ದು, ಈವರೆಗೆ 18.11 ಲಕ್ಷ ರೈತರಿಗೆ 13,480 ಕೋಟಿ ರೂ. ಸಾಲ ವಿತರಿಸಲಾಗಿದೆ. 3 ಲಕ್ಷ ಹೊಸ ರೈತರಿಗೆ ಬೆಳೆ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada