ಹುಬ್ಬಳ್ಳಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡನೆ ಮಾಡಿರುವ ಕೇಂದ್ರ ಬಜೆಟ್ ಎಲ್ಲಾ ವರ್ಗದ ಜನರಿಗೆ ಪ್ರೋತ್ಸಾಹದಾಯಕವಾಗಿದೆ. ಕಳೆದ ಎಲ್ಲಾ ಬಜೆಟ್ಗಳಿಗಿಂತ ಈ ಬಾರಿಯ ಬಜೆಟ್ ಗಾತ್ರ ದೊಡ್ಡದಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ರಾಜೀವ್ಪ್ರತಾಪ್ ರೂಢಿ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿನಡೆಸಿ ಮಾತನಾಡಿದ ಅವರು, ಎಲ್ಲಾ ವಿಭಾಗಗಳಿಗೂ ಈ ಬಾರಿ ಹೆಚ್ಚಿನ ಅನುದಾನವನ್ನು ಒದಗಿಸಲಾಗಿದೆ. ಕರ್ನಾಟಕಕ್ಕೂ ಹೆಚ್ಚಿನ ಅನುದಾನ ಬಂದಿದೆ. ಪ್ರಧಾನಿಗಳ ಮಾರ್ಗದರ್ಶನದಲ್ಲಿ ವಿತ್ತ ಸಚಿವರು ಜನಪರ ಬಜೆಟ್ ಮಂಡಿಸಿದ್ದಾರೆ ಎಂದರು.
ಮಧ್ಯಮ ವರ್ಗದ ಜನರಿಗೆ ಹಿಂದೆಂದೂ ಸಿಗದಷ್ಟು ಆದಾಯ ತೆರಿಗೆ ವಿನಾಯತಿ ಸಿಕ್ಕಿದೆ. ಬಜೆಟ್ ಗಾತ್ರ ಕಡಿಮೆ ಅನ್ನುವ ವಿರೋಧಿಗಳ ಟೀಕೆಗೆ ಯಾವುದೇ ಆಧಾರಗಳಿಲ್ಲ ಎಂದು ಅವರು ಹೇಳಿದರು.
ಪ್ರಹ್ಲಾದ್ ಜೋಶಿ ಮುಂದಿನ ಸಿಎಮ್ ಅಭ್ಯರ್ಥಿ ಎನ್ನುವ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಏನು ರಾಜಕೀಯ ಬೆಳವಣಿಗೆ ಆಗುತ್ತಿವೆ ನನಗೆ ಗೊತ್ತಿಲ್ಲ. ಪ್ರಹ್ಲಾದ್ ಜೋಶಿ ಒಬ್ಬ ಉತ್ತಮ ನಾಯಕರು. ಬೊಮ್ಮಾಯಿ, ಯಡಿಯೂರಪ್ಪನವರು ಕೂಡ ನಮ್ಮ ಪಕ್ಷದ ಉತ್ತಮ ನಾಯಕರು ಎಂದು ಅವರು ಹೇಳಿದರು.