ಬಳ್ಳಾರಿ, ಜನವರಿ, 20: ಚೊಚ್ಚಲ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಉತ್ಸವದ ಪ್ರಯುಕ್ತ ನಗರದ ವಿವಿಧೆಡೆಯ ಮುಖ್ಯ ವೃತ್ತಗಳು ಹಾಗೂ ಮುಖ್ಯ ರಸ್ತೆಗಳಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿದ್ದು, ಬಳ್ಳಾರಿ ನಗರ ಮಧುವಣಗಿತ್ತಿಯಂತೆ ಜಗಮಗಿಸುತ್ತಿದೆ.
ಗಮನ ಸೆಳೆದ ದೀಪಾಲಂಕಾರ
ಬಳ್ಳಾರಿ ಉತ್ಸವಕ್ಕೆ ಮತ್ತಷ್ಟು ಮೆರಗನ್ನು ನೀಡಲು ಜಿಲ್ಲಾಡಾಳಿತದ ವತಿಯಿಂದ ಆಯೋಜಿಸಿದ್ದ ವಿಶೇಷ ದೀಪಾಲಂಕಾರ ವ್ಯವಸ್ಥೆಗೆ ಹೆಚ್.ಆರ್.ಗವಿಯಪ್ಪ ವೃತ್ತದಲ್ಲಿ ಗುರುವಾರ ಎಂಎಲ್ಸಿ ವೈ.ಎಂ.ಸತೀಶ್ ಚಾಲನೆ ನೀಡಿದರು. ನಗರದ ಮುಖ್ಯ ವೃತ್ತಗಳಾದ ಮೋತಿ ಸರ್ಕಲ್, ಎಸ್ ಪಿ ಸರ್ಕಲ್, ದುರುಗಮ್ಮ ಗುಡಿ ಸೇರಿದಂತೆ ಉತ್ಸವದ ವೇದಿಕೆಗೆ ತಲುಪುವ ಮುಖ್ಯ ರಸ್ತೆಗಳಲ್ಲಿ ದೀಪಾಲಂಕಾರ ಮಾಡಿದ್ದು, ಇದು ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ.
Ballari utsav 2023: ಆಗಸದಿಂದ ಐತಿಹಾಸಿಕ ಸ್ಥಳಗಳ ದೃಶ್ಯವನ್ನು ಸವಿಯಲು “ಬೈಸ್ಕೈ” ವ್ಯವಸ್ಥೆ, ದರದ ವಿವರ ತಿಳಿಯಿರಿ
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಮಹಾನಗರ ಪಾಲಿಕೆ ಮೇಯರ್ ಎಂ.ರಾಜೇಶ್ವರಿ, ಮಾರುತಿ ಪ್ರಸಾದ್, ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಪಾಲಿಕೆ ಆಯುಕ್ತ ಜಿ.ರುದ್ರೇಶ್, ಪಾಲಿಕೆ ಸದಸ್ಯ ಶ್ರೀನಿವಾಸ್ ಮೋ, ರಾಬಕೋವಿ ಜಿಲ್ಲಾ ಹಾಲು ಒಕ್ಕೂಟ ನಿಗಮದ ನಿರ್ದೇಶಕ ವೀರ ಶೇಕರ ರೆಡ್ಡಿ ಸೇರಿದಂತೆ ಮತ್ತಿತರರು ಹಾಜರಿದ್ದರು.
ಬಳ್ಳಾರಿಯಲ್ಲಿ ತಲೆ ಎತ್ತಲಿದೆ ಅಪ್ಪು ಪುತ್ಥಳಿ
ಇನ್ನು ಜನವರಿ 21ರಂದಿ ಬಳ್ಳಾರಿ ಉತ್ಸವ ನಡೆಯಲಿದ್ದು, ಅಂದೇ 23 ಅಡಿ ಎತ್ತರದ ಡಾ.ಪುನೀತ್ ರಾಜ್ಕುಮಾರ್ ಪುತ್ಥಳಿ ಅನಾವರಣಗೊಳ್ಳಲಿದೆ. ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿರುವ ಡಾ.ಪುನೀತ್ ರಾಜ್ಕುಮಾರ್ ಅಂದರೆ ಬಳ್ಳಾರಿ ಜನರಿಗೆ ಎಲ್ಲಿಲ್ಲದ ಪ್ರೀತಿ, ಅಭಿಮಾನ. ಅಪ್ಪು ಇಹಲೋಕವನ್ನು ತ್ಯಜಿಸಿದಾಗ ಇಲ್ಲಿನ ಜನರು ತಮ್ಮ ಮನೆಯ ಮಗನನ್ನೇ ಕಳೆದುಕೊಂಡ ಹಾಗೆ ದುಃಖಿತರಾಗಿದ್ದರು. ಈಗ ಪ್ರೀತಿ, ಅಭಿಮಾನಕ್ಕೆ ಸಾಕ್ಷಿಯಾಗಿ ಗಣಿನಾಡು ಬಳ್ಳಾರಿಯಲ್ಲಿ ಪುನೀತ್ ರಾಜ್ಕುಮಾರ್ ಅವರ ಬೃಹತ್ ಪುತ್ಥಳಿ ತಲೆ ಎತ್ತಲಿದೆ.
ಬಳ್ಳಾರಿ ಜಿಲ್ಲಾ ಕ್ರೀಡಾಂಗಣದ ಮುಂದೆ ಕಬ್ಬಿಣ ಹಾಗೂ ಫೈಬರ್ ಮಿಶ್ರಣದಲ್ಲಿ ಮೂಡಿ ಬಂದಿರುವ 23 ಅಡಿ ಎತ್ತರದ ಪುತ್ಥಳಿಯನ್ನು ಸ್ಥಾಪಿಸಲಾಗಿದೆ. 23 ಅಡಿ ಎತ್ತರದ ಈ ಪುತ್ಥಳಿ ಅತೀ ದೊಡ್ಡ ಪುತ್ಥಳಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಜನವರಿ 21 ರಂದು ನಡೆಯುವ ಬಳ್ಳಾರಿ ಉತ್ಸವ ಸಂದರ್ಭದಲ್ಲಿ ಅಪ್ಪು ಅವರ ಪುತ್ಥಳಿಯನ್ನು ಲೋಕಾರ್ಪಣೆ ಮಾಡಲಾಗುವುದು. ಇದಕ್ಕಾಗಿ ಈಗಾಗಲೇ ಬಳ್ಳಾರಿ ಜಿಲ್ಲಾಡಳಿತ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಶಿವಮೊಗ್ಗದ ಪ್ರಖ್ಯಾತ ಜೀವನ್ ಶಿಲ್ಪಿ ಮತ್ತು ತಂಡದವರು ಪುನೀತ್ ರಾಜ್ಕುಮಾರ್ ಅವರ ಪುತ್ಥಳಿಯನ್ನು ನಿರ್ಮಿಸಿದ್ದಾರೆ. ಸತತ ಐದು ತಿಂಗಳು 15 ಜನ ಸೇರಿ ಪುತ್ಥಳಿಯನ್ನು ತಯಾರಿಸಿದ್ದಾರೆ. 20 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಪುತ್ಥಳಿ ನಿರ್ಮಾಣವಾಗಿದ್ದು, ಇದು ಮೂರು ಸಾವಿರ ಕೆ.ಜಿ. ತೂಕ ಹೊಂದಿದೆ. ಮೊದಲಿಗೆ ಮಣ್ಣಿನಲ್ಲಿ ತಯಾರಿಸಿ ಮೌಲ್ಡ್ ಮಾಡಿ, ನಂತರ ಪ್ರತಿಮೆ ಮಾಡಲಾಗಿದೆ.
https://play.google.com/store/apps/details?id=com.speed.newskannada