ಸರ್ವೀಸ್ ರಸ್ತೆಗಳು ಪೂರ್ಣಗೊಳ್ಳುವವರೆಗೂ ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ವೇನಲ್ಲಿ ಟೋಲ್ ಸಂಗ್ರಹವನ್ನು ಮುಂದೂಡಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ಈ ಬಗ್ಗೆ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಹ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು ಬೆಂಗಳೂರು- ನಿಡಘಟ್ಟದವರೆಗೆ ಈಗ ನಿಗದಿಪಡಿಸಿರುವ ಟೋಲ್ ಅನ್ನು ಮಾರ್ಚ್ 14ರಿಂದ ಟೋಲ್ ದುಬಾರಿ ಆಯ್ತು ಎಂದು ಸಾರ್ವಜನಿಕ ವಲಯದಿಂದ ವಿರೋಧ ಬರುತ್ತಿದ್ದಂತೆ ಇಂತಹ ಘೋಷಣೆಯಾಗಿರುವುದು ಸಾರ್ವಜನಿಕರ ಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.ಎಕ್ಸ್ ಪ್ರೆಸ್ ವೇನಲ್ಲಿ ಟೋಲ್ ಸಂಗ್ರಹಿಸುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶನಿವಾರವೇ ಆದೇಶ ಹೊರಡಿಸಿತ್ತು. ಆದರಂತೆ ಭಾನುವಾರವೇ ಟೋಲ್ ಸಂಗ್ರಹ ಪ್ರಾರಂಭವಾಗಬೇಕಿತ್ತು. ಆದರೆ ಇದಕ್ಕೆ ಜಿಲ್ಲಾಡಳಿತ ಯಾವುದೇ ತಯಾರಿ ಮಾಡಿಕೊಂಡಿರಲಿಲ್ಲ. ಯಾವುದೇ ಸೂಚನಾಫಲಕವನ್ನು ಅಳವಡಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಫೆ.28ರಂದು ಮಂಗಳವಾರ ಎಲ್ಲ ತಯಾರಿಯೊಂದಿಗೆ ಪ್ರಾರಂಭಿಸುವ ಬಗ್ಗೆ ರಾಮನಗರ ಜಿಲ್ಲಾಡಳಿತ ತೀರ್ಮಾನ ಕೈಗೊಂಡಿತ್ತು. ಇದೀಗ ಪ್ರತಾಪಸಿಂಹ ಅವರು ಸದ್ಯಕ್ಕೆ ಟೋಲ್ ಸಂಗ್ರಹಿಸುವುದಿಲ್ಲ ಎಂಬರ್ಥದಲ್ಲಿ ಫೇಸ್ ಬುಕ್ ನಲ್ಲಿ ಹೇಳಿದ್ದಾರೆ.ವಿಜಯ ಕರ್ನಾಟಕ ಈ ವಿಚಾರವಾಗಿ ರಾಮನಗರ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ಅವರನ್ನು ಸಂಪರ್ಕಿಸಿದಾಗ, ನಮಗೆ ಯಾವುದೇ ಲಿಖಿತ ಆದೇಶ ಬಂದಿಲ್ಲ. ಕೇವಲ ಮೌಖಿಕವಾಗಿಯಷ್ಟೆ ಟೋಲ್ ಸಂಗ್ರಹವನ್ನು ತಾತ್ಕಲಿಕವಾಗಿ ರದ್ದುಗೊಳಿಸಿ ಎನ್ನಲಾಗಿದೆ. ಹೀಗಾಗಿ ಬೆಳಗ್ಗೆ ಟೋಲ್ ಕೇಂದ್ರದ ಬಳಿ ಬಂದೋಬಸ್ಥ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದರು. ಇದೀಗ ಹೆದ್ದಾರಿ ಪ್ರಾಧಿಕಾರದ ಅಧಿಕೃತ ಪ್ರಕಟಣೆಯಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada