ಭಾರ್ಗವಿ ನಾರಾಯಣ್ ಪ್ರಖ್ಯಾತ ರಂಗಭೂಮಿ ಕಲಾವಿದೆ ಮತ್ತು ದೂರದರ್ಶನ ಧಾರವಾಹಿಗಳ ಮೌಲ್ಯಯುತ ಪಾತ್ರಗಳ ನಿರ್ವಹಣೆಯ ಅನುಭವಿ ಪಾತ್ರಧಾರಿ ಎಂದು ಪ್ರಸಿದ್ಧರಾಗಿದ್ದವರು ಮಾತ್ರವಲ್ಲ, ನಮ್ಮ ಮಧ್ಯಮ ವರ್ಗದ ಬದುಕನ್ನು ತೆರೆಯ ಮೇಲೆ, ರಂಗದ ಮೇಲೆ ನಮ್ಮ ಬದುಕನ್ನೇ ಪ್ರತಿನಿಧಿಸುತ್ತಿದ್ದಾರೆ ಎಂಬಷ್ಟು ಅಕ್ಕರೆ ಹುಟ್ಟಿಸಿಬಿಟ್ಟಿದ್ದರು. ಭಾರ್ಗವಿ ನಾರಾಯಣ್ 1938ರ ಫೆಬ್ರುವರಿ 4ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಡಾ. ಎಂ. ರಾಮಸ್ವಾಮಿ. ತಾಯಿ ನಾಮಗಿರಿಯಮ್ಮ. ಮಹಾರಾಣಿ ಕಾಲೇಜಿನಿಂದ ಬಿ.ಎಸ್ಸಿ. ಪದವಿ ಪಡೆದ ನಂತರದಲ್ಲಿ ಇಂಗ್ಲಿಷ್ನಲ್ಲಿ ಎಂ.ಎ. ಪದವಿ ಪಡೆದ ಭಾರ್ಗವಿ ಅವರು ಇ.ಎಸ್.ಐ. ಕಾರ್ಪೊರೇಷನ್ನಿನಲ್ಲಿ ವ್ಯವಸ್ಥಾಪಕರ ಹುದ್ದೆ ನಿರ್ವಹಿಸಿ 1990ರಲ್ಲಿ ಸ್ವಯಂ ನಿವೃತ್ತಿ ಪಡೆದರು. ಮಹಾನ್ ಕಲಾವಿದ ಮೇಕಪ್ ನಾಣಿ ಎಂದು ಪ್ರಖ್ಯಾತರಾಗಿದ್ದ ಬೆಳವಾಡಿ ನಂಜುಂಡಯ್ಯ ನಾರಾಯಣ ಅವರ ಬಾಳ ಸಂಗಾತಿಯಾಗಿದ್ದರು. ಇವರ ಮಕ್ಕಳಾದ ಸುಧಾ ಬೆಳವಾಡಿ ಮತ್ತು ಪ್ರಕಾಶ್ ಬೆಳವಾಡಿ ಸಹಾ ರಂಗಭೂಮಿ, ಸಿನಿಮಾ ಮತ್ತು ಕಿರುತೆರೆಗಳಲ್ಲಿ ಮಹತ್ಸಾಧನೆ ಮಾಡಿದ್ದಾರೆ. ಹೈಸ್ಕೂಲಿನಲ್ಲಿದ್ದಾಗಲೇ ರಂಗಭೂಮಿಯ ಬಗ್ಗೆ ಆಸಕ್ತಿ ಮೂಡಿಸಿಕೊಂಡ ಭಾರ್ಗವಿಯವರು ಉಪಾಧ್ಯಾಯಿನಿಯಾಗಿದ್ದ ವಿಮಲಾರವರ ಪ್ರೋತ್ಸಾಹದಂತೆ ತಮ್ಮದೇ ಗುಂಪುಕಟ್ಟಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: