ಮೀಟು ಅಭಿಯಾನ ಶುರುವಾದ ಮೇಲೆ ನಟ- ನಟಿಯರು ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವಗಳನ್ನು ಬಿಚ್ಚಿಡುತ್ತಾ ಬರ್ತಿದ್ದಾರೆ. ಕಾಸ್ಟಿಂಗ್ ಕೌಚ್ ಹೆಸರಿನಲ್ಲಿ ಮಂಚಕ್ಕೆ ಕರೆಯುವ ಚಿತ್ರರಂಗದವರ ಕರಾಳ ಮುಖವನ್ನು ಅನಾವರಣ ಮಾಡುತ್ತಿದ್ದಾರೆ. ಸ್ಯಾಂಡಲ್ವುಡ್ನಿಂದ ಬಾಲಿವುಡ್ವರೆಗೂ ನಟಿಯರು ತಮಗಾದ ಕೆಟ್ಟ ಅನುಭವವನ್ನು ಹೇಳಿಕೊಂಡಿದ್ದಾರೆ.
ಈಗ ವಿದ್ಯಾ ಬಾಲನ್ ಕೂಡ ಅದೊಂದು ಘಟನೆ ನೆನಪಿಸಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ವಿದ್ಯಾಬಾಲನ್, “ನನಗೆ ನಿಜವಾಗಿಯೂ ಕಾಸ್ಟಿಂಗ್ ಕೌಚ್ ಸಂದರ್ಭ ಎದುರಾಗಿಲ್ಲ. ನಾನು ತುಂಬಾ ಅದೃಷ್ಟಶಾಲಿ. ಏಕೆಂದರೆ ನಾನು ಸಾಕಷ್ಟು ಭಯಂಕರ(ಕಾಸ್ಟಿಂಗ್ ಕೌಚ್) ಕಥೆಗಳನ್ನು ಕೇಳಿದ್ದೇನೆ. ನನ್ನ ಹೆತ್ತವರ ದೊಡ್ಡ ಭಯ ಕೂಡ ಅದೇ ಆಗಿತ್ತು. ನಾನು ಚಿತ್ರರಂಗಕ್ಕೆ ಬರೋದನ್ನು ಅವರು ವಿರೋಧಿಸಿದ್ದರು. ನನಗೆ ಇನ್ನು ಆ ಘಟನೆ ನೆನಪಿದೆ. ನಾನು ಒಂದು ಸೌತ್ ಚಿತ್ರಕ್ಕೆ ಸಹಿ ಮಾಡಿದ್ದೆ. ಅದೇ ಸಮಯದಲ್ಲಿ ಚಿತ್ರದ ನಿರ್ದೇಶಕರನ್ನು ಭೇಟಿ ಮಾಡಬೇಕಿತ್ತು. ನಾನು ಆಗ ಜಾಹೀರಾತು ಚಿತ್ರೀಕರಣಕ್ಕಾಗಿ ಚೆನ್ನೈಗೆ ಹೋಗಿದ್ದೆ.”
ಚೆನ್ನೈಗೆ ಯಾವಾಗ ಬರ್ತೀರಾ ಎಂದು ಫಿಲ್ಮ್ ಮೇಕರ್ ಕೇಳಿದ್ದರು. ಚಿತ್ರಕ್ಕೆ ನಾನು ಕನ್ಫರ್ಮ್ ಆಗಿದ್ದರಿಂದ ಜಾಹೀರಾತು ಶೂಟಿಂಗ್ಗಾಗಿ ಚೆನ್ನೈಗೆ ಬಂದಿದ್ದೇನೆ ಎಂದು ಹೇಳಿದ್ದರಂತೆ. ಕಾಫಿ ಶಾಪ್ನಲ್ಲಿ ನಿರ್ದೇಶಕನನ್ನು ಭೇಟಿಯಾದ ನಂತರ ಆತ ರೂಮ್ಗೆ ಹೋಗೋಣ ಎಂದು ಒತ್ತಾಯಿಸಿದನಂತೆ. “ನನಗೆ ಅರ್ಥ ಆಗಲಿಲ್ಲ ಯಾಕೆ ಅಂತ. ನಾನು ಒಬ್ಬಳೆ ಇದ್ದೆ. ಆದರೆ ನಾನು ಆ ಸಮಯದಲ್ಲಿ ಒಂದು ಉಪಾಯ ಮಾಡಿದೆ. ನಾವು ರೂಮ್ಗೆ ಹೋದಾಗ ನಾನು ಬಾಗಿಲು ಮುಚ್ಚದೇ ತೆರೆದೇ ಇಟ್ಟಿದ್ದೆ.”
“ಆತನಿಗೂ ಅರ್ಥ ಆಯಿತು ಎನಿಸುತ್ತದೆ. ಅಲ್ಲಿಂದ ಹೊರಗೆ ಬರುವುದೇ ಒಂದೇ ಮಾರ್ಗ ಎಂದು, ಹಾಗಾಗಿ ನನಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿತ್ತು ಎನ್ನಲು ಸಾಧ್ಯವಿಲ್ಲ. ಈ ಬಗ್ಗೆ ಯಾವುದೇ ಪ್ರಸ್ತಾಪ, ಕೋರಿಕೆ ಇರಲಿಲ್ಲ. ಆದರೆ ಒಂದು ವಿಚಾರ ಅರ್ಥವಾಯಿತು, ನಾನು ಆ ಸಮಯದಲ್ಲಿ ಜಾಗೃತಳಾದೆ. ನಾನು ಸ್ವಯಂರಕ್ಷಣೆ ಮಾಡಿಕೊಂಡೆ ಎಂದು ಹೇಳಿದ್ದಾರೆ. “ನಂತರ ನನ್ನನ್ನು ಆ ಸಿನಿಮಾದಿಂದ ಕೈಬಿಡಲಾಯಿತು” ಎಂದು ನಗುತ್ತಾ ವಿದ್ಯಾಬಾಲನ್ ಹೇಳಿದ್ದಾರೆ.
ಇತ್ತೀಚೆಗೆ ನಟಿ ವಿದ್ಯಾಬಾಲನ್ ಫೋಟೊಶೂಟ್ವೊಂದು ವೈರಲ್ ಆಗಿತ್ತು. ಬರೀ ನ್ಯೂಸ್ ಪೇಪರ್ನ ಮೈಗೆ ಅಡ್ಡ ಹಿಡಿದು ಬಿಂದಾಸ್ ಪೋಸ್ ಕೊಟ್ಟಿದ್ದರು. ಈ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿತ್ತು. ಫೋಟೊ ನೋಡಿದವರು ‘ಡರ್ಟಿ ಪಿಕ್ಚರ್’ ಎಂದರು. ಸದಾ ಸೀರೆಯಲ್ಲಿ ಕಂಗೊಳಿಸುತ್ತಿದ್ದ ವಿದ್ಯಾ ಈ ರೀತಿ ಪೋಸ್ ಕೊಟ್ಟಿದ್ದು ಸಖತ್ ವೈರಲ್ ಆಗಿತ್ತು. ಖ್ಯಾತ ಸೆಲೆಬ್ರೆಟಿ ಫೋಟೊಗ್ರಫರ್ ದಬೂ ರತ್ನಾನಿ ಈ ಫೋಟೊಶೂಟ್ ಮಾಡಿದ್ದರು.
ಮತ್ತೊಂದು ಸಂದರ್ಶನದಲ್ಲಿ “ನಾನು ಫೋಟೊಗಳಲ್ಲಿ ದಪ್ಪ ಇರುವುದನ್ನು ನೋಡಿ ಜನ ಇಲ್ಲ ಸಲ್ಲದನ್ನೆಲ್ಲಾ ಮಾತನಾಡುತ್ತಾರೆ. ವಿದ್ಯಾ ಗರ್ಭಿಣಿ ಆಗಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ಇದರಿಂದ ನಾನು ಪ್ರತಿ ತಿಂಗಳು ಗರ್ಭಿಣಿಯಾಗುತ್ತಿದ್ದೆ. ಅದೆಷ್ಟು ಮಕ್ಕಳಿಗೆ ಜನ್ಮ ನೀಡಿದ್ದೇನೋ ದೇವರಿಗೆ ಗೊತ್ತು ಎಂದು ವಿದ್ಯಾಬಾಲನ್ ವ್ಯಂಗ್ಯವಾಗಿ ಹೇಳಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada