ಕಾರಿನ ಟಯರ್ ಪಂಕ್ಚರ್ ಆಗಿದೆ ಎಂದು ಸಿವಿಲ್ ಕಂಟ್ರ್ಯಾಕ್ಟರ್ರೊಬ್ಬರ ದಿಕ್ಕು ತಪ್ಪಿಸಿದ ದುಷ್ಕರ್ಮಿಗಳ ತಂಡ, ಕಾರಿನಲ್ಲಿದ್ದ ಐದು ಲಕ್ಷ ರೂ. ದೋಚಿ ಪರಾರಿಯಾಗಿರುವ ಘಟನೆ ಕೆ.ಆರ್.ಪುರ (KR Puram) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಈ ಕುರಿತು ಹಣ ಕಳೆದುಕೊಂಡ ದಶರಥ ರಾಮರೆಡ್ಡಿ (60) ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಸಿವಿಲ್ ಕಂಟ್ರ್ಯಾಕ್ಟರ್ ಆಗಿರುವ ದೊಡ್ಡಗುಬ್ಬಿ ನಿವಾಸಿ ದಶರಥ ಅವರು ತಮ್ಮಲ್ಲಿ ಕೆಲಸ ಮಾಡುವ ಮೇಸ್ತ್ರಿಗಳಿಗೆ ಹಣ ನೀಡುವ ಸಲುವಾಗಿ ಫೆ.3ರಂದು ಮಧ್ಯಾಹ್ನ ಹಳೆ ಮದ್ರಾಸ್ ರಸ್ತೆಯ ಬ್ಯಾಂಕೊಂದಕ್ಕೆ ತೆರಳಿ ಐದು ಲಕ್ಷ ರೂ. ಡ್ರಾ ಮಾಡಿದ್ದರು. ಹಣದ ಕವರ್ ಅನ್ನು ಬ್ಯಾಗ್ನಲ್ಲಿಟ್ಟುಕೊಂಡು ಡ್ರೈವರ್ ಪಕ್ಕದ ಸೀಟಿನಲ್ಲಿಟ್ಟು ತಾವೇ ಸ್ವತಃ ಕಾರು ಚಲಾಯಿಸಿಕೊಂಡು ಟಿ.ಸಿ.ಪಾಳ್ಯ ರಸ್ತೆಯಲ್ಲಿ ಮನೆಗೆ ವಾಪಸ್ ಬರುತ್ತಿದ್ದರು.ಈ ವೇಳೆ ಅವರನ್ನು ಎರಡು ಬೈಕ್ಗಳಲ್ಲಿ ಹಿಂಬಾಲಿಸಿಕೊಂಡು ಬಂದ ನಾಲ್ವರು ತಡೆದು, ಕಾರಿನ ಎಡಭಾಗದ ಟಾಯರ್ ಪಂಕ್ಟರ್ ಆಗಿದೆ ಎಂದಿದ್ದರು. ಹೀಗಾಗಿ, ದಶರಥ ಅವರು ಸಮೀಪದ ಪಂಕ್ಚರ್ ಶಾಪ್ ಬಳಿ ನಿಲ್ಲಿಸಿ ಪಂಕ್ಚರ್ ಹಾಕಿಸಿಕೊಂಡು ವಾಪಸ್ ಮನೆಗೆ ಬಂದು ನೋಡಿದಾಗ ಹಣದ ಬ್ಯಾಗ್ ಇರಲಿಲ್ಲ. ಈ ವೇಳೆ ಅವರಿಗೆ ಪಂಕ್ಚರ್ ನೆಪದಲ್ಲಿ ಹಣ ದೋಚಿದ ಅರಿವಾಗಿದೆ ಎಂದು ಪೊಲೀಸರು ತಿಳಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada