ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಳಗೊಬ್ಬ ಒಳ್ಳೆ ಪ್ರಾಣಿ ಪ್ರೇಮಿ ಇದ್ದಾನೆ. ಅವರ ಪ್ರಾಣಿ-ಪಕ್ಷಿ ಪ್ರೀತಿಗೆ ಸಾಟಿಯಿಲ್ಲ. ಚಿಕ್ಕಂದಿನಿಂದಲೂ ಮೂಕ ಜೀವಿಗಳು ಅಂದರೆ ಅದೇನೋ ಒಲವು. ಮೈಸೂರಿನ ತಮ್ಮ ಫಾರ್ಮ್ಹೌಸ್ನಲ್ಲಿ ಸಾಕಷ್ಟು ಪ್ರಾಣಿ- ಪಕ್ಷಿಗಳನ್ನು ಮಕ್ಕಳಂತೆ ದರ್ಶನ್ ಸಾಕುತ್ತಿದ್ದಾರೆ.
ಚಿತ್ರರಂಗಕ್ಕೆ ಬರೋದಕ್ಕು ಮುನ್ನ ದರ್ಶನ್ ಹಸು ಕಟ್ಟಿ ಹಾಲು ಮಾರಿ ಜೀವನ ಸಾಗಿಸಿದ್ದು ಇದೆ.
ಮೈಸೂರಿನ ಟೀ. ನರಸೀಪುರದ ಮುಖ್ಯರಸ್ತೆಯ ಹಳೇ ಕೆಂಪಯ್ಯನ ಹುಂಡಿಯಲ್ಲಿ ದರ್ಶನ್ ಫಾರ್ಮ್ಹೌಸ್ ಇದೆ. ಈ ಫಾರ್ಮ್ಹೌಸ್ ಮಾಡಿದ್ದರ ಹಿಂದೆ ಇಂಟ್ರೆಸ್ಟಿಂಗ್ ಕಥೆ ಇದೆ. 14- 15 ವರ್ಷ ವಯಸ್ಸಿನವರಾಗಿದ್ದಾಗಲೇ ಈ ರೀತಿ ತೋಟ ಮಾಡಿ ಪ್ರಾಣಿ ಪಕ್ಷಿಗಳನ್ನು ಸಾಕಬೇಕು ಎಂದುಕೊಂಡಿದ್ದರಂತೆ ದರ್ಶನ್. ನಮ್ಮ ತಂದೆ 5 ಎಕರೆ ಜಮೀನು ಮಾಡಿಬಿಟ್ಟಿದ್ದರೆ ನಾನು ಇಂಡಸ್ಟ್ರಿಗೆ ಬರುತ್ತಿರಲಿಲ್ಲ ಎಂದು ದರ್ಶನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಒಂದು ಹಂತದಲ್ಲಿ ತೋಟ ಮಾಡೋಕೆ ಬೇಕಾದ ಎಲ್ಲವನ್ನು ಸಿದ್ಧಪಡಿಸಿಬಿಟ್ಟಿದ್ದರಂತೆ. ಆದರೆ ವಿಧಿ ಎನ್ನುವುದು ಇಲ್ಲಿಯವರೆಗೂ ಕರೆದುಕೊಂಡು ಬಂತು ಎನ್ನುತ್ತಾರೆ.
ಸಂಕ್ರಾಂತಿ ಸಂಭ್ರಮದಲ್ಲಿ ನಟ ದರ್ಶನ್ ತೂಗುದೀಪ ಡೈನಾಸ್ಟಿ ಯೂಟ್ಯೂಬ್ ಚಾನಲ್ಗೆ ವಿಶೇಷ ಸಂದರ್ಶನ ನೀಡಿದ್ದರು. ಇದರಲ್ಲಿ ತಮ್ಮ ಫಾರ್ಮ್ಹೌಸ್ ಟೂರ್ ಮಾಡಿದ್ದರು. ತಾವು ಸಾಕಿರುವ ಪ್ರಾಣಿ- ಪಕ್ಷಿಗಳ ದರ್ಶನ ಮಾಡಿಸಿದ್ದರು. ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು.
5 ಎಕರೆ ಇದ್ದಿದ್ರೆ ಇಂಡಸ್ಟ್ರಿಗೆ ಬರ್ತಿಲಿಲ್ಲ
ತಂದೆ ಖ್ಯಾತ ಖಳ ನಟ ತೂಗುದೀಪ ಶ್ರೀನಿವಾಸ್. ನೂರಾರು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ದರ್ಶನ್ ಅವರಿಗೆ ಆರಂಭದಲ್ಲಿ ಚಿತ್ರರಂಗಕ್ಕೆ ಬರುವ ಆಲೋಚನೆ ಇರಲಿಲ್ಲವಂತೆ. “ಅಪ್ಪಿ ತಪ್ಪಿ ನಮ್ಮ ತಂದೆ 5 ಎಕರೆ ಜಾಗ ಮಾಡಿಟ್ಟಿದ್ದರೂ ನಾನು ಇಂಡಸ್ಟ್ರಿಗೆ ಬರುತ್ತಿರಲಿಲ್ಲ. ನಮ್ಮ ಆಲೋಚನೆಗಳು ಬೇರೆ ತರಹವೇ ಇರುತ್ತಿತ್ತು. ಒಂದಷ್ಟು ಹಸು ಕಟ್ಟಿಕೊಂಡು, ಹಂದಿ ಸಾಕಾಣಿಕೆ ಮಾಡಿಕೊಂಡು ಇರೋಣ ಅಂದುಕೊಂಡಿದೆ. ಒಂದು ಹಂತಕ್ಕೆ ಅದಕ್ಕೆ ಬೇಕಾದ ಎಲ್ಲವನ್ನು ಸಿದ್ಧ ಮಾಡಿದ್ದೆ”
ಹಸು- ಹಂದಿ ಸಾಕಾಣಿಕೆ ಒಲವು
“ಅಂಬಾಸಿಡರ್ ಕಾರ್ ಇತ್ತು. ಅದನ್ನು ಮಾರಿ ಜೀಪ್ ತಗೋಳ್ಳೋಣ. ಹೋಟೆಲ್ಗಳ ಮುಂದೆ ಡ್ರಮ್ ಇಟ್ಟರೆ ವೇಸ್ಟೇಜ್ ಎಲ್ಲಾ ಹಾಕುತ್ತಾರೆ ಅದನ್ನು ತಂದು ಹಂದಿಗಳಿಗೆ ಹಾಕಬಹುದು. ಹಸು ಹೇಗಿದ್ದರೂ ಕಟ್ಟಿದ್ದೆ. ತಂದೆ 5 ಎಕರೆ ಜಾಗ ಮಾಡಿದ್ದರೂ ನಾನು ಇಂಡಸ್ಟ್ರಿಗೆ ಬರುತ್ತಿರಲಿಲ್ಲ. ಇದೆಲ್ಲಾ ವಿಧಿ ಅಷ್ಟೇ. ಆಮೇಲೂ ಕೂಡ ಶೋಕಿ ಹೋಗಿರಲಿಲ್ಲ. ತೋಟ ಮಾಡಬೇಕು ಎನ್ನುವ ಹಂಬಲ ಇತ್ತು.”
‘ಶಾಸ್ತ್ರೀ’ ಟೈಮಲ್ಲಿ ಖರೀದಿಸಿದ ಜಾಗ
ಹಲವು ವರ್ಷಗಳ ಹಿಂದೆ ನಟ ದರ್ಶನ್ ಈ ತೋಟದ ಜಾಗ ಖರೀದಿಸಿದ್ದರು. ನಿನ್ನೆ ಮೊನ್ನೆ ಮಾಡಿದ್ದಲ್ಲ. ಅದು ಯಾವಾಗ ಅಂದರೆ 2005ರಲ್ಲಿ. ‘ಶಾಸ್ತ್ರಿ’ ಸಿನಿಮಾ ಸಕ್ಸಸ್ ಆದಾಗ ನಿರ್ಮಾಪಕರಾಗಿದ್ದ ಸ್ನೇಹಿತ ಅಣಜಿ ನಾಗರಾಜ್ ಕೊಟ್ಟ ಹಣದಲ್ಲಿ ಈ ತೋಟ ಖರೀದಿಸಿದ್ದರು. ಮುಂದೆ ಸಾಕಷ್ಟು ಪ್ರಾಣಿ-ಪಕ್ಷಿಗಳನ್ನು ತಂದು ಸಾಕಿ ಈಗ ಒಂದು ಮಿನಿ ಝೂ ಆ ಫಾರ್ಮ್ಹೌಸ್ನಲ್ಲಿ ನಿರ್ಮಾಣವಾಗಿದೆ.
ಫಾರ್ಮ್ಹೌಸ್ ಆಸೆ ಹುಟ್ಟಿದ್ದೇಕೆ?
ಚಿಕ್ಕಂದಿನಿಂದಲೂ ದರ್ಶನ್ ಅವರಿಗೆ ಫಾರ್ಮ್ಹೌಸ್ ಮಾಡುವ ಕನಸು ಇತ್ತಂತೆ. ಅದು ಯಾಕೆ ಎನ್ನುವುದನ್ನು ಕೂಡ ವಿವರಿಸಿದ್ದಾರೆ. “ಚಿಕ್ಕ ವಯಸ್ಸಿನಲ್ಲಿ ನಮ್ಮ ಮನೆ ಪಕ್ಕ ರಾಜೇ ಗೌಡ್ರು ಅಂತ ಇದ್ರು. ಅವರ ಮಗ ವಿಕ್ಕಿ ಅಂತ ಇದ್ದ. ಅವನು ನನಗಿಂತ ಚಿಕ್ಕವನು. ನಾವು ಆಡಿಕೊಂಡು ಇದ್ದಾಗ ಅವರ ತಂದೆ ಬ್ಯಾಗ್ ಹಿಡ್ಕೊಂಡು ಬರೋರು. ಬಾ ಹೋಗೋಣ ಅಂತ ವಿಕ್ಕಿನ ಕರೆಯೋರು. ಎಲ್ಲಿಗೆ ಅಂದ್ರೆ ಫಾರ್ಮ್ಹೌಸ್ಗೆ ಅನ್ನುತ್ತಿದ್ದರು. ಅವರ ಜೊತೆ ಹೋಗಿ ಹೋಗಿ ನನಗೆ ನನಗೂ ಫಾರ್ಮ್ ಹೌಸ್ ಮಾಡಬೇಕು ಎನ್ನುವ ಆಸೆ ಹುಟ್ಟಿಕೊಂಡಿತ್ತು” ಎಂದು ದರ್ಶನ್ ಹೇಳಿದ್ದಾರೆ.
https://play.google.com/store/apps/details?id=com.speed.newskannada