ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಚಿಂತಲಪಲ್ಲಿ ಪರಂಪರೆ ಕುರಿತು 800 ವರ್ಷಗಳಷ್ಟು ಇತಿಹಾಸ ಕಾಣಲು ಸಿಗುತ್ತದೆ. ಕಳೆದ ಶತಮಾನದಲ್ಲಿ ಸಹಾ ಚಿಂತಲಪಲ್ಲಿ ವೆಂಕಟರಾಯರು ಹಾಗೂ ರಾಮಚಂದ್ರರಾಯರು ಮೈಸೂರು ಸಾಮ್ರಾಜ್ಯದಲ್ಲಿ ಪಡೆದ ಖ್ಯಾತಿಯ ಬೆನ್ನಲ್ಲೇ ಅದೇ ಕಾಲದಲ್ಲಿ ಆ ಪರಂಪರೆಯ ಬೆಳಕಿನಲ್ಲಿ ಬೆಳಗಿದ ವಿದ್ವನ್ಮಣಿಗಳ ಸಾಲು ಸಹಾ ಇತಿಹಾಸದಷ್ಟು ದೀರ್ಘವಾದದ್ದೇ. ವಿದ್ವಾನ್ ಚಿಂತಲಪಲ್ಲಿ ವೆಂಕಟಾಚಲಯ್ಯ, ಚಿಂತಲಪಲ್ಲಿ ಶೇಷಗಿರಿರಾವ್, ಚಿಂತಲಪಲ್ಲಿ ವೆಂಕಟರಾಮಯ್ಯ, ಚಿಂತಲಪಲ್ಲಿ ಸುಬ್ಬರಾವ್, ಕರ್ನಾಟಕ ಕಲಾಶ್ರೀ ಚಿಂತಲಪಲ್ಲಿ ರಂಗರಾವ್… ಹೀಗೆ ಸಾಗುತ್ತ ಹೋದಂತೆ ಅದರಲ್ಲಿ ಗಾಯನ, ಬೋಧನೆಗಳಲ್ಲಿ ಪ್ರಸಿದ್ಧಿಯನ್ನು ಪಡೆದ ಮತ್ತೊಂದು ಹೆಸರು ಗಾನಸುಧಾನಿಧಿ, ಕರ್ನಾಟಕ ಕಲಾಶ್ರೀ ಚಿಂತಲಪಲ್ಲಿ ಕೃಷ್ಣಮೂರ್ತಿಯವರದ್ದು ಎದ್ದು ತೋರುವಂಥದ್ದು. ಇಂದು ಈ ಮಹಾನುಭಾವರ ಸಂಸ್ಮರಣೆ ದಿನ. ಚಿಂತಲಪಲ್ಲಿ ಪರಂಪರೆಯನ್ನು ಆ ಮನೆತನದ ಹೆಣ್ಣುಮಕ್ಕಳು ಹಾಗೂ ಗಂಡು ಮಕ್ಕಳ ಪರಂಪರೆಯವರಿಬ್ಬರೂ ಬೆಳೆಸಿದರು, ಪೋಷಿಸಿದರು.
ಚಿಂತಲಪಲ್ಲಿ ವೆಂಕಟರಾಯರ ಜೇಷ್ಠ ಪುತ್ರಿ ವೆಂಕಟಲಕ್ಷ್ಮಮ್ಮ ಕೃಷ್ಣಮೂರ್ತಿಯವರ ತಾಯಿ. ತಂದೆಯವರಾದ ಗುಡಿಬಂಡೆಯ ವೇ.ಬ್ರ.ಶ್ರೀ ಅಶ್ವತ್ಥನಾರಾಯಣರಾಯರ ತಾಯಿ ಸಹಾ ಚಿಂತಲಪಲ್ಲಿಯವರೇ. ವೆಂಕಟರಾಯರ ಚಿಕ್ಕಪ್ಪ ಭಾಸ್ಕರರಾವ್ ಎಂಬುವವರ ಮಗಳು ಅಶ್ವತ್ಥಮ್ಮನವರು ಅಶ್ವತ್ಥನಾರಾಯಣರಾಯರ ತಾಯಿ. ಹೀಗಾಗಿ ತಾಯಿ, ತಂದೆ ಎರಡೂ ಕಡೆ ಸಂಗೀತ ಕುಟುಂಬದ ಹಿನ್ನೆಲೆ ಹಾಗೂ ರಕ್ತಗತವಾಗಿ ಬಂದ ಸಂಗೀತ ಕೃಷ್ಣಮೂರ್ತಿಗಳಿಗೆ ಅಯಾಚಿತವಾಗಿ ಬಂದ ಭಾಗ್ಯವಾಗಿದ್ದವು.
ಕೃಷ್ಣಮೂರ್ತಿ ಅವರು 1920ರಲ್ಲಿ ಚಿಂತಲಪಲ್ಲಿಯಲ್ಲಿ ತಾತನ ಮನೆಯಲ್ಲಿ ಜನಿಸಿದರು. ನಾಲ್ಕು ಜನ ಸಹೋದರರು, ನಾಲ್ಕು ಜನ ಸಹೋದರಿಯನ್ನು ಹೊಂದಿದ ದೊಡ್ಡ ಕುಟುಂಬ ಕೃಷ್ಣಮೂರ್ತಿಯವರದ್ದು. ಅಶ್ವತ್ಥನಾರಾಯಣರಾಯರ ಜೇಷ್ಠಪುತ್ರರಾಗಿ ಜನಿಸಿದ ಇವರು ಬೆಳೆದದ್ದು,ಕಲಿತದ್ದು ಎಲ್ಲಾ ತಾತನವರ ಹಾಗೂ ಮಾವನವರ ಬಳಿಯಲ್ಲೇ.
ಕೃಷ್ಣಮೂರ್ತಿಯವರ ತಾಯಿಯ ತಮ್ಮ ಆಸ್ಥಾನ ವಿದ್ವಾನ್ ಚಿಂತಲಪಲ್ಲಿ ರಾಮಚಂದ್ರರಾಯರಿಗೆ ಅಲ್ಲಿ ಮದುವೆಯಾದ ಹೊಸತು. ತಮಗೆ ಇನ್ನೂ ಮಕ್ಕಳಿಲ್ಲದ ಕಾಲದಲ್ಲಿ ಅಕ್ಕನ ಮಗ ಕೃಷ್ಣಮೂರ್ತಿ, ಅವರ ಬಾಯಲ್ಲಿ ಕಿಟ್ಟು ಆಗಿಹೋದ. ಆತನನ್ನು ಮೂರನೇ ವಯಸ್ಸಿನಲ್ಲೇ ತಮ್ಮ ಮನೆಗೆ ಕರೆತಂದು ಸಾಕಿದ್ದೇ ಅಲ್ಲದೆ ಚೌಲ ಮಾಡಿಸಿದ್ದು ಸಹಾ ಮಾವನವರಾದ ರಾಮಚಂದ್ರರಾಯರೇ. ರಾಮಚಂದ್ರರಾಯರ ಶ್ರೀಮತಿಯವರಾದ ಲಕ್ಷ್ಮೀದೇವಮ್ಮ ಕಿಟ್ಟುವಿನ ಬಾಯಲ್ಲಿ ಅತ್ತಿಗೆ. ತಮ್ಮ ಮಕ್ಕಳಿಗಿಂತ ಮುಂಚಿನವನಾದ ಕಿಟ್ಟುವಿಗೆ ಎಣ್ಣೆ ಒತ್ತಿ ನೀರೆರೆದು ಮುಚ್ಚಟೆಯಾಗಿ ಸಾಕಿ ಶೇಷಾದ್ರಿಪುರದ ಆರ್ಯ ವಿದ್ಯಾಶಾಲೆಗೆ ಸೇರಿಸಿದರು. ಅಲ್ಲಿ ಎಲ್.ಎಸ್. ನವರೆಗೆ ಓದಿದ ನಂತರ ಶೇಷಾದ್ರಿಪುರಂ ಹೈಸ್ಕೂಲ್ನಲ್ಲಿ ಎಸ್.ಎಸ್.ಎಲ್.ಸಿ. ಯವರೆ ವಿದ್ಯಾಭ್ಯಾಸ, ಇದಿಷ್ಟು ಅವರ ಲೌಕಿಕಕ ವಿದ್ಯಾಭ್ಯಾಸದ ವಿವರಗಳು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
Please follow and like us: