ಪ್ರಯಾಗರಾಜ್: ಪ್ರಯಾಗರಾಜ್ ಹಿಂಸಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಗುರುತಿಸಲ್ಪಟ್ಟಿದ್ದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತ ಜಾವೇದ್ ಮುಹಮ್ಮದ್ ಅವರಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರುಗೊಳಿಸಿದೆ.
ಘಟನೆ ವೇಳೆ ಮುಹಮ್ಮದ್ ಅಲ್ಲಿ ಸೇರಿದ್ದ ಜನರನ್ನು ಪ್ರಚೋದಿಸುತ್ತಿದ್ದರು, ಶಸ್ತ್ರಗಳನ್ನು ಹೊಂದಿದ್ದರು ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ್ದರು ಎಂಬುದನ್ನು ಎಫ್ಐಆರ್ ಅಥವಾ ಪ್ರಾಸಿಕ್ಯೂಶನ್ ಹೇಳಿಕೆಗಳು ಪುಷ್ಠೀಕರಿಸುತ್ತಿಲ್ಲ ಎಂದು ಜಾಮೀನು ಮಂಜೂರುಗೊಳಿಸುವ ವೇಳೆ ನ್ಯಾಯಮೂರ್ತಿ ಸಮೀರ್ ಜೈನ್ ಹೇಳಿದರು.
“ಅರ್ಜಿದಾರ ಹಿಂಸೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆಂದು ಈ ಹಂತದಲ್ಲಿ ಹೇಳಲಾಗದು,” ಎಂದು ನ್ಯಾಯಾಲಯ ಹೇಳಿದೆ.
ಪ್ರವಾದಿ ಮುಹಮ್ಮದ್ ವಿರುದ್ಧ ಅವಮಾನಕಾರಿ ಹೇಳಿಕೆಗಳನ್ನು ನೀಡಿದ್ದ ಇಬ್ಬರು ಬಿಜೆಪಿ ವಕ್ತಾರರು ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಲು ಮುಹಮ್ಮದ್ ಸಂಚು ಹೂಡಿದ್ದರೆಂದು ಆರೋಪಿಸಿ ಅವರನ್ನು ಜೂನ್ ತಿಂಗಳಿನಲ್ಲಿ ಬಂಧಿಸಲಾಗಿತ್ತು.
ಜೂನ್ 12 ರಂದು ಪ್ರಯಾಗರಾಜ್ ನ ಸಂಬಂಧಿತ ಪ್ರಾಧಿಕಾರ ಮುಹಮ್ಮದ್ ಅವರ ಮನೆಯನ್ನು ಅಕ್ರಮ ಕಟ್ಟಡವೆಂದು ಘೋಷಿಸಿ ಅದನ್ನು ನೆಲಸಮಗೊಳಿಸಿತ್ತು.
https://play.google.com/store/apps/details?id=com.speed.newskannada