ಬೆಂಗಳೂರು: ಮಯಂಕ್ ಅಗರವಾಲ್ ನಾಯಕತ್ವದ ಬಳಗವು ಆಲೂರಿನ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನವನ್ನು ಎದುರಿಸಲಿದೆ.ಸದ್ಯ ಸಿ ಗುಂಪಿನ ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿರುವ ಕರ್ನಾಟಕದ ಖಾತೆಯಲ್ಲಿ 19 ಅಂಕಗಳಿವೆ.ಎರಡನೇ ಸ್ಥಾನದಲ್ಲಿರುವ ರಾಜಸ್ಥಾನದ ಬಳಿ 14 ಅಂಕಗಳಿವೆ. ಕ್ವಾರ್ಟರ್ಫೈನಲ್ ತಲುಪಬೇಕಾದರೆ ತಂಡವು ತನ್ನ ಮೊದಲ ಸ್ಥಾನವನ್ನು ಕಾಯ್ದುಕೊಳ್ಳುವುದು ಮುಖ್ಯ. ರಾಜಸ್ಥಾನ ಎದುರು ಸೇರಿದಂತೆ ಇನ್ನೂ ಮೂರು ಪಂದ್ಯಗಳನ್ನು ಮಯಂಕ್ ಬಳಗ ಆಡಬೇಕಿದೆ.ವೇಳಾಪಟ್ಟಿಯ ಪ್ರಕಾರ ಕರ್ನಾಟಕ ತಂಡವು ತವರಿನಲ್ಲಿ ಆಡುತ್ತಿರುವ ಕೊನೆಯ ಲೀಗ್ ಪಂದ್ಯ ಇದಾಗಲಿದೆ. ಮುಂದಿನ ಸುತ್ತುಗಳಲ್ಲಿ ಕೇರಳವನ್ನು ತಿರುವನಂತಪುರದಲ್ಲಿ ಮತ್ತು ಜಾರ್ಖಂಡ್ ತಂಡವನ್ನು ರಾಂಚಿಯಲ್ಲಿ ಎದುರಿಸಲಿದೆ.ಕಳೆದ ನಾಲ್ಕು ಪಂದ್ಯಗಳಲ್ಲಿ ಎರಡು ಗೆದ್ದು ಎರಡರಲ್ಲಿ ಡ್ರಾ ಮಾಡಿಕೊಂಡಿದೆ. ಇದರಲ್ಲಿ ಮೂರು ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದವು.ಕಳೆದ ಪಂದ್ಯದಲ್ಲಿ ಛತ್ತೀಸಗಢ ತಂಡದ ಕಠಿಣ ಸವಾಲು ಎದುರಿಸುವಲ್ಲಿ ಮಯಂಕ್ ಬಳಗವು ಯಶಸ್ವಿಯಾಯಿತು. ಐದು ವಿಕೆಟ್ ಗೊಂಚಲು ಗಳಿಸಿದ ವೈಶಾಖ ವಿಜಯಕುಮಾರ್ ಮತ್ತು ವಿದ್ವತ್ ಕಾವೇರಪ್ಪ ಅವರ ಆಟ ಪ್ರಮುಖವಾಯಿತು.ಅಲ್ಲದೇ ನಾಯಕ ಮಯಂಕ್ ಅಗರವಾಲ್ ಮೊದಲ ಇನಿಂಗ್ಸ್ನಲ್ಲಿ ಗಳಿಸಿದ ಶತಕ, ಸಮರ್ಥ್ ಅರ್ಧಶತಕ ಹಾಗೂ ಯುವಪ್ರತಿಭೆ ನಿಕಿನ್ ಜೋಸ್ ಎರಡೂ ಇನಿಂಗ್ಸ್ಗಳಲ್ಲಿ ತೋರಿದ ದಿಟ್ಟ ಆಟ ಗಮನ ಸೆಳೆದಿತ್ತು.ಆದರೆ, ಅನುಭವಿ ಮನೀಷ್ ಪಾಂಡೆ, ವಿಕೆಟ್ಕೀಪರ್ ಬ್ಯಾಟರ್ ಬಿ.ಆರ್. ಶರತ್ ಅವರ ಅಸ್ಥಿರತೆ ಬ್ಯಾಟಿಂಗ್ ವಿಭಾಗದಲ್ಲಿ ಚಿಂತೆಯ ವಿಷಯಗಳಾಗಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada