ಬೆಂಗಳೂರು, ಜನವರಿ 31: ನಗರದ ಕುಂದಲಹಳ್ಳಿ ಕೆರೆಯ ದಡದಲ್ಲಿ ಕುಳಿತಿದ್ದ ಸ್ನೇಹಿತರಿಗೆ ಕಿರುಕುಳ ನೀಡುವ ಜೊತೆಗೆ ಬೆದರಿಸಿ ಅವರಿಂದ ಹಣ ಸುಲಿಗೆ ಮಾಡಿದ ಆರೋಪ ಬೆಂಗಳೂರು ಪೊಲೀಸರ ವಿರುದ್ಧ ಕೇಳಿ ಬಂದಿದೆ.
ರಾಷ್ಟ್ರ ರಾಜಧಾನಿ ದೆಹಲಿಯಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ಪ್ರವಾಸಕ್ಕೆಂದು ಬಂದಿದ್ದವರಿಗೆ ನಗರದಲ್ಲಿ ಅಘಾತಕಾರಿ ಅನುಭವ ಆಗಿದೆ ಎಂದು ಸ್ನೇಹಿತೆ ಅರ್ಷಾ ಲತೀಫ್ ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಬೆಂಗಳೂರು ಪೊಲೀಸ್ ಸಿಬ್ಬಂದಿ ವಿರುದ್ಧದ ಆರೋಪಗಳು ಆಗಾಗ ಮರುಕಳಿಸುತ್ತಲೇ ಇವೆ.
ಲತೀಫ್ ಅವರು, ಭಾನುವಾರ ನಾನು ಮತ್ತು ಸ್ನೇಹಿತ ಕುಂದಲಹಳ್ಳಿ ಕೆರೆಯ ದಡದ ಬೆಂಚ್ ಮೇಲೆ ಕುಳಿತಿದ್ದೇವು. ಅಲ್ಲಿಗೆ ಬಂದ ಪೊಲೀಸ್ ಒಬ್ಬರು ನಮ್ಮ ಫೋಟೊ ತೆಗೆದುಕೊಂಡರು. ಅನುಮತಿ ಇಲ್ಲದೇ ಇಲ್ಲಿ ಕುಳಿತಿದ್ದೀರಿ ಎಂದು ಕಿರುಕುಳ ನೀಡಿದರು. ತಾವು ಇಲ್ಲಿಗೆ ಭೇಟಿ ನೀಡಿದ್ದರ ಬಗ್ಗೆ ಸಂಪೂರ್ಣವಾಗಿ ವಿಚಾರಿಸಿದರು. ಜೊತೆಗೆ ನೀವು ಇಲ್ಲಿ ಧೂಮಪಾನ ಮಾಡಬಹುದು ಎಂದು ಸುಖಾ ಸುಮ್ಮನೆ ಆರೋಪಿಸಿದರು. ನಮ್ಮಿಂದಾದ ತಪ್ಪೇನು ಎಂದು ನಾವು ಕೇಳಿದ್ದಕ್ಕೆ ಅನುಮತಿ ಇಲ್ಲದೇ ಕುಳಿತಿದ್ದಕ್ಕೆ ನೀವು ಪೊಲೀಸ್ ಠಾಣೆಗೆ ಬಂದು ದಂಡ ಪಾವತಿಸಬೇಕು ಎಂದು ಪೊಲೀಸ್ ಜೋರು ಮಾಡಿದರು ಎಂದು ತಿಳಿಸಿದ್ದಾರೆ.
ನಂತರ ಪೊಲೀಸ್ ಇದೇಲ್ಲವನ್ನು ಇಲ್ಲಿಗೆ ಬಿಡಬೇಕೆಂದರೆ 1,000 ರೂಪಾಯಿ ನೀಡುವಂತೆ ಬೇಡಿಕೆ ಇಟ್ಟರು. ನಮ್ಮ ಬಳಿ ಹಣ ಇಲ್ಲವೆಂದರೂ ಸಹ ಪೇಟಿಎಂ ಮಾಡುವಂತೆ ಸೂಚಿಸಿ ಬಲವಂತದಿಂದ ಹಣ ಸುಲಿಗೆ ಮಾಡಿದರು ಎಂದು ಸ್ನೇಹಿತರು ಆರೋಪಿಸಿದ್ದಾರೆ. ಸಾರ್ವಜನಿಕರಿಗೆಂದೇ ಇಲ್ಲಿ ಹಾಕಿರುವ ಆಸನಗಳಲ್ಲಿ ಕುಳಿತುಕೊಳ್ಳಲು ಅನುಮತಿ ಪಡೆಯಬೇಕೇ? ಎಂದು ಅವರು ಪ್ರಶ್ನಿಸಿದ್ದಾರೆ.
ಪೊಲೀಸ್ ಠಾಣೆಗೆ ಹೋಗದೆ ವಿಷಯ ಇತ್ಯರ್ಥಪಡಿಸಬೇಕಾದರೆ 1,000 ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟು ಸ್ಥಳಿಯ ಪೊಲೀಸ್ ಸಿಬ್ಬಂದಿಯ ದ್ವಿಚಕ್ರ ವಾಹನದ ಫೋಟೊ ತೆಗೆದು ಲತೀಫ್ ಟ್ವೀಟ್ ಮಾಡಿದ್ದಾರೆ. ಪೊಲೀಸರ ಈ ನಡವಳಿಕೆಯಿಂದ ಅಚ್ಚರಿಯಾಗಿದೆ. ಯಾವ ತಪ್ಪು ಮಾಡದಿದ್ದಕ್ಕಾಗಿ ಇಂತಹ ವರ್ತನೆ, ದೌರ್ಜನ್ಯ ಸಹಿಸಿಕೊಳ್ಳಬೇಕಾಗಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ದೆಹಲಿ ಮೂಲದವರಾಗಿದ್ದರಿಂದ ಸ್ಥಳೀಯವಾಗಿ ಯಾರೂ ಸ್ನೇಹಿತರಿರಲಿಲ್ಲ. ಭಾಷೆ ಗೊತ್ತಿತ್ತು. ಘಟನೆ ಸಂಬಂಧ ನಾನು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಮುಂದಾದೆ.ಆದರೆ ಮರಳಿ ದೆಹಲಿಯತ್ತ ಪ್ರಮಾಣ ಬೆಳೆಸಬೇಕಾದ ಅನಿವಾರ್ಯತೆ ಇದ್ದ ಕಾರಣ ದೂರು ನೀಡಲಿಲ್ಲ ಎಂದು ಅವರು ಸರಣಿ ಟ್ವೀಟ್ನಲ್ಲಿ ವಿವರಿಸಿದ್ದಾರೆ.
ಇಬ್ಬರು ಪೇದೆ ಅಮಾನತು
ಆದರೆ ಈ ಸಂಬಂಧ ಸ್ಥಳಿಯ ಪೊಲೀಸರನ್ನು ಸಂಪರ್ಕಿಸಲಾಯಿತು. ಘಟನೆ ಬಗ್ಗೆ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಕೇಳಿದರೂ ಸಹ ಪೊಲೀಸರಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಹಿಂದುಸ್ತಾನ್ ಟೈಮ್ಸ ವರದಿ ಮಾಡಿದೆ.
ಜನವರಿ ಆರಂಭದಲ್ಲಿ ನೆರೆ ರಾಜ್ಯದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ ಇದೇ ರೀತಿ ಪೊಲೀಸ್ ಸಿಬ್ಬಂದಿಯಿಂದ ಕಿರುಕುಳ ಅನುಭವಿಸಿದ್ದರು. ಆ ಪೊಲೀಸ್ ಸಿಬ್ಬಂದಿ ಬೆದರಿಸಿ ಆ ವ್ಯಕ್ತಿಯಿಂದ ಹಣ ಸುಲಿಗೆ ಮಾಡಿದ್ದರು. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿ ಆ ಇಬ್ಬರು ಪೇದೆಗಳನ್ನು ಅಮಾನತು ಮಾಡಿದ್ದರು.
https://play.google.com/store/apps/details?id=com.speed.newskannada