ಸ್ಯಾಂಡಲ್ವುಡ್ನ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ನಟಿಸಿದ ಕೊನೆಯ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿರು ನಿಧನರಾಗುವುದಕ್ಕೂ ಮುನ್ನ ‘ರಾಜಮಾರ್ತಾಂಡ’ ಸಿನಿಮಾದಲ್ಲಿ ನಟಿಸುತ್ತಿದ್ದರು. ಇದೇ ಸಿನಿಮಾವೀಗ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಈ ಸಿನಿಮಾದ ಶೂಟಿಂಗ್ ಮುಗಿದಿದ್ದು, ಸದ್ಯದಲ್ಲೇ ಸೆನ್ಸಾರ್ ಅಧಿಕಾರಿ ಮುಂದೆ ಪ್ರತ್ಯಕ್ಷ ಆಗಲಿದೆ. ಚಿರು ಅಭಿನಯದ ಕೊನೆಯ ಸಿನಿಮಾ ಆಗಿರುವುದರಿಂದ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ.
2020 ಜೂನ್ ತಿಂಗಳಲ್ಲಿ ಚಿರಂಜೀವಿ ಸರ್ಜಾ ಹಠಾತ್ ಇಹಲೋಕ ತ್ಯಜಿಸಿದ್ದರು. ಆಗ ಚಿರು ಅಭಿಮಾನಿಗಳು ನೋವಲ್ಲಿ ಕಣ್ಣೀರು ಇಟ್ಟಿದ್ದರು. ಅಂದಿನಿಂದ ತನ್ನ ನೆಚ್ಚಿನ ನಟ ಸಿನಿಮಾ ನೋಡಲು ಕಾದು ಕೂತಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ‘ರಾಜಮಾರ್ತಾಂಡ’ ಸಿನಿಮಾ ಪೋಸ್ಟ್ ಪ್ರೊಡಕ್ಷನ್ನಲ್ಲಿ ಬ್ಯುಸಿಯಾಗಿತ್ತು. ಈಗ ಸಿನಿಮಾದ ಚಟುವಟಿಕೆಗಳು ಜೋರಾಗಿದ್ದು, ಅಭಿಮಾನಿಗಳಿಗೆ ಸಿನಿಮಾ ತೋರಿಸಲು ಮುಂದಾಗಿದೆ.
‘ರಾಜಮಾರ್ತಾಂಡ’ ಚಿತ್ರಕ್ಕೆ ಶೀಘ್ರದಲ್ಲೇ ಸೆನ್ಸಾರ್
ಚಿರಂಜೀವಿ ಸರ್ಜಾ ಅಭಿಮಾನಿಗಳನ್ನು ಅಗಲುವ ಮುನ್ನ ‘ರಾಜಮಾರ್ತಾಂಡ’ ಸಿನಿಮಾದ ಪೂರ್ಣಗೊಂಡಿತ್ತು. ಈ ಕಾರಣಕ್ಕೆ ಇದು ಚಿರು ನಟನೆಯ ಕೊನೆಯ ಸಿನಿಮಾವೆಂದು ಚಿತ್ರತಂಡ ಹೇಳಿದೆ. ಚಿರು ಸಾವಿಗೂ ಮುನ್ನವೇ ಚಿರು ಭಾಗದ ಬಹುತೇಕ ಚಿತ್ರೀಕರಣ ಮುಗಿದಿತ್ತು. ಬಳಿಕ ಸಿನಿಮಾದ ಉಳಿದ ಭಾಗದ ಚಿತ್ರೀಕರಣವನ್ನು ಮುಗಿಸಿ, ಪೋಸ್ಟ್ ಪ್ರೊಡಕ್ಷನ್ನಲ್ಲಿ ಬ್ಯುಸಿಯಾಗಿತ್ತು. ಈಗ ಸಿನಿಮಾ ಸೆನ್ಸಾರ್ ಮಂಡಳಿಯ ಮೆಟ್ಟಿಲೇರಲು ಸಜ್ಜಾಗಿದೆ. ಶೀಘ್ರದಲ್ಲೇ ಸೆನ್ಸಾರ್ ಆಗಲಿದ್ದು, ಬಳಿಕ ಸಿನಿಮಾ ಬಿಡುಗಡೆಗೆ ತಯಾರಿ ನಡೆಸಲಿದೆ.
ಧ್ರುವ ಡಬ್ಬಿಂಗ್, ದರ್ಶನ್ ಧ್ವನಿ
ಚಿರಂಜೀವಿ ಸರ್ಜಾ ನಿಧನದ ಬಳಿಕ ಸಹೋದರ ಧ್ರುವ ಸರ್ಜಾ ನಿರ್ಮಾಪಕರ ಮಾತು ಕೊಟ್ಟಿದ್ದರು. ಅಣ್ಣ ಬಿಟ್ಟು ಹೋದ ಸಿನಿಮಾಗೆ ತಾವೇ ಡಬ್ಬಿಂಗ್ ಮಾಡುವುದಾಗಿ ಹೇಳಿದ್ದರು. ಅಂತೆಯೇ ಶೀಘ್ರದಲ್ಲೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಡಬ್ಬಿಂಗ್ ಮಾಡಲಿದ್ದಾರೆ. ವಿಶೇಷ ಅಂದರೆ, ಈ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಧ್ವನಿ ನೀಡಲಿದ್ದಾರೆ. ಹೀಗಾಗಿ ಚಿರು ಅಭಿಮಾನಿಗಳಿಗೆ ಡಬಲ್ ಟ್ರೀಟ್ಮೆಂಟ್ ಸಿಗಲಿದೆ. ಇಬ್ಬರು ದಿಗ್ಗಜರ ಧ್ವನಿಯಲ್ಲಿ ‘ರಾಜಮಾರ್ತಾಂಡ’ ತೆರೆಗಪ್ಪಳಿಸಲಿದೆ.
ಸ್ಯಾಂಡಲ್ವುಡ್ನಲ್ಲಿ ಹಲವು ವರ್ಷಗಳಿಂದ ಸಿನಿ ಸಾಹಿತಿಯಾಗಿ ಫೇಮಸ್ ಆಗಿರುವ ಜೆ.ಕೆ.ರಾಮನಾರಾಯಣ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾವನ್ನು ಪ್ರಣವ್ ಗೌಡ.ಎನ್, ನಿವೇದಿತಾ ಹಾಗೂ ಶಿವಕುಮಾರ್ ನಿರ್ಮಿಸಿದ್ದಾರೆ. ಇದೊಂದು ಪಕ್ಕಾ ಮಾಸ್ ಎಂಟರ್ಟೈನರ್ ಸಿನಿಮಾ ಆಗಿದ್ದು, ಸಿನಿಪ್ರಿಯರಿಗೆ ಇಷ್ಟ ಆಗುತ್ತದೆ ಎಂದು ಚಿತ್ರತಂಡ ಭರವಸೆ ನೀಡಿದೆ. ಹೀಗಾಗಿ ಸರ್ಜಾ ಕುಟುಂಬದ ಅಭಿಮಾನಿಗಳು ಚಿರು ನಟಿಸಿದ ಕೊನೆಯ ಸಿನಿಮಾ ‘ರಾಜಮಾರ್ತಾಂಡ’ ನೋಡಲು ಕಾತರರಾಗಿದ್ದಾರೆ.
‘ರಾಜಮಾರ್ತಾಂಡ’ಗೆ ಅರ್ಜುನ್ ಜನ್ಯ ಮ್ಯೂಸಿಕ್
ಚಿರಂಜೀವಿ ಸರ್ಜಾ ನಟಿಸಿದ ‘ರಾಜಮಾರ್ತಾಂಡ’ ಸಿನಿಮಾಗೆ ಮ್ಯಾಜಿಕಲ್ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ನಾಲ್ಕು ಸುಮಧುರ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಈ ಚಿತ್ರಕ್ಕೆ ಧರ್ಮವಿಶ್ ಹಿನ್ನೆಲೆ ಸಂಗೀತ ನೀಡಿದ್ದು, ಜೆ.ಕೆ.ಗಣೇಶ್ ಛಾಯಾಗ್ರಹಣ, ವೆಂಕಟೇಶ್ ಯು ಡಿ ವಿ ಸಂಕಲನ, ವಿನೋದ್, ಪಳನಿರಾಜ್ ಸಾಹಸ ನಿರ್ದೇಶನವಿದೆ.
ದೀಪ್ತಿ ಸಾತಿ ಸಿನಿಮಾದ ನಾಯಕಿ
ದಿವಂಗತ ಚಿರಂಜೀವಿ ಸರ್ಜಾಗೆ ನಾಯಕಿಯಾಗಿ ದೀಪ್ತಿ ಸಾತಿ ಅಭಿನಯಿಸಿದ್ದಾರೆ. ದೀಪ್ತಿ ಸಾತಿ ಈ ಹಿಂದೆ ನಿಖಿಲ್ ಕುಮಾರ್ ನಟಿಸಿದ ‘ಜಾಗ್ವಾರ್’ ಸಿನಿಮಾದಲ್ಲಿ ನಟಿಸಿದ್ದರು. ಇವರೊಂದಿಗೆ ಮೇಘಶ್ರೀ, ಟಗರು ಖ್ಯಾತಿಯ ತ್ರಿವೇಣಿ ಕೂಡ ನಟಿಸಿದ್ದಾರೆ. ಇನ್ನು ವಿಲನ್ ಲುಕ್ನಲ್ಲಿ ಭಜರಂಗಿ ಲೋಕಿ, ಹಿರಿಯ ಕಲಾವಿದರಾದ ದೇವರಾಜ್, ಸುಮಿತ್ರ, ಶಂಕರ್ ಅಶ್ವಥ್ ಅಭಿನಯಿಸಿದ್ದಾರೆ. ಹಾಸ್ಯ ಪಾತ್ರದಲ್ಲಿ ಚಿಕ್ಕಣ್ಣ ಕಾಣಿಸಿಕೊಂಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada