ಕರ್ನಾಟಕ ರಾಜ್ಯ ರೈತ ಸಂಘದ ಸಂಸ್ಥಾಪಕರು ಕರ್ನಾಟಕದ ಸಮಾಜವಾದಿ ಚಳವಳಿಯ ರೂವಾರಿ ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿ ಅವರ ಜೀವನಾಧರಿತ ಚಿತ್ರಕ್ಕೆ ಸ್ಯಾಂಡಲ್ವುಡ್ನಲ್ಲಿ ಸಿದ್ಧತೆ ನಡೀತಿದೆ. ಚಿತ್ರದಲ್ಲಿ ಡಾಲಿ ಧನಂಜಯ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಪಾತ್ರ ಮಾಡುವುದು ಬಹುತೇಕ ಖಚಿತವಾಗಿದೆ.
ಕಳೆದ ವರ್ಷವೇ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಬಯೋಪಿಕ್ ಬಗ್ಗೆ ಸ್ಯಾಂಡಲ್ವುಡ್ನಲ್ಲಿ ಗುಸು ಗುಸು ಕೇಳಿಬಂದಿತ್ತು. ನಾಡು ಕಂಡ ಧೀಮಂತ ರೈತ ನಾಯಕ ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿ ಅವರ ಜೀವನವನ್ನು ಸಿನಿಮಾ ಮಾಡಲು ಅವರ ಪುತ್ರ ಪಚ್ಚೆ ನಂಜುಂಡಸ್ವಾಮಿ ಬಯಸಿದ್ದಾರೆ. ಹಲವು ವರ್ಷಗಳಿಂದ ಈ ಚಿತ್ರಕ್ಕಾಗಿ ಚಿತ್ರಕಥೆ ಕೂಡ ಸಿದ್ಧವಾಗುತ್ತಿದೆ. ಈ ಹಿಂದೆ ಕಿಚ್ಚ ಸುದೀಪ್, ಸಂಚಾರಿ ವಿಜಯ್ ಹಾಗೂ ಧನಂಜಯ ಹೆಸರು ಈ ಚಿತ್ರಕ್ಕಾಗಿ ಕೇಳಿ ಬಂದಿತ್ತು. ಇದೀಗ ಡಾಲಿ ಧನಂಜಯ ಈ ಸಿನಿಮಾ ಮಾಡಲು ಆಸಕ್ತಿ ತೋರಿಸಿದ್ದಾರೆ. ಜೊತೆಗೆ ತಾವೇ ಸಿನಿಮಾ ನಿರ್ಮಾಣ ಮಾಡಲು ಮನಸ್ಸು ಮಾಡಿದ್ದಾರೆ.
ಪ್ರೊ. ಎಂ.ಡಿ. ನಂಜುಂಡಸ್ವಾಮಿ ಬಯೋಪಿಕ್ ಬಗ್ಗೆ ಅವರ ಪುತ್ರ ಪಚ್ಚೆ ನಂಜುಂಡಸ್ವಾಮಿ ಆಂಗ್ಲ ಪತ್ರಿಕೆಯೊಂದಕ್ಕೆ ಮಾಹಿತಿ ನೀಡಿದ್ದಾರೆ. ಡಾಲಿ ಧನಂಜಯ ಈ ಸಿನಿಮಾ ಬಗ್ಗೆ ತಮ್ಮೊಟ್ಟಿಗೆ ಮಾತುಕತೆ ನಡೆಸಿದ್ದಾಗಿ ಹೇಳಿದ್ದಾರೆ.
ಹಸಿರು ಶಾಲಿನ ಹರಿಕಾರ
ರೈತ ಹೋರಾಟಗಾರ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರು ಎರಡು ದಶಕಕ್ಕೂ ಹೆಚ್ಚು ಕಾಲ ಕನ್ನಡ ನಾಡಿನ ರೈತ ಸಮುದಾಯದ ದನಿಯಾಗಿದ್ದವರು. ಹಸಿರು ಶಾಲಿನ ಹರಿಕಾರ ಎಂದೇ ಅವರು ಖ್ಯಾತರಾಗಿದ್ದರು. ಕರ್ನಾಟಕದ ರೈತ ಹೋರಾಟಕ್ಕೆ ಹೊಸ ಭಾಷ್ಯ ಬರೆದವರು ಪ್ರೊ. ಎಂ.ಡಿ.ನಂಜುಂಡಸ್ವಾಮಿ.
ಜೀವನವಿಡೀ ಸ್ವದೇಶಿ ಪ್ರಚಾರ ಮಾಡಿದ ಅಪರೂಪದ ಹೋರಾಟಗಾರ. ಜರ್ಮನಿಯಲ್ಲಿ ಕಾನೂನು ವಿಷಯದಲ್ಲಿ ಉನ್ನತ ಶಿಕ್ಷಣ ಪಡೆದು, ಸಮಾಜವಾದಿ ಯುವಜನ ಸಭಾ ಹುಟ್ಟು ಹಾಕಿ ನಿರಂತರ ಹೋರಾಟ ಮಾಡಿದರು. ಅದಮ್ಯ ವಿಚಾರ ಲಹರಿ, ಅತ್ಯುತ್ತಮ ಕನ್ನಡ ಭಾಷಾ ಬಳಕೆ, ಖಚಿತ ಅಂಕಿ ಅಂಶಗಳಿಂದ ಕೂಡಿದ ಭಾಷಣ, ನ್ಯಾಯಾಂಗದ ಬಗ್ಗೆ ಇದ್ದ ಅರಿವು, ಜ್ಯಾತಿ ವ್ಯವಸ್ಥೆಯ ಬಗೆಗಿನ ಆಕ್ರೋಶ ಅವರಲ್ಲಿತ್ತು. ರೈತರಿಗೆ, ಕಾರ್ಮಿಕರಿಗೆ ಯಾರೆಗೆ ಸಮಸ್ಯೆ ಎಂದರು ಬೆಂಬಲವಾಗಿ ನಿಲ್ಲುತ್ತಿದ್ದರು.
ಆಸೆ ವ್ಯಕ್ತಪಡಿಸಿದ್ದ ಡಾಲಿ ಧನಂಜಯ
ಈ ಹಿಂದೆ ಡಾಲಿ ಧನಂಜಯ ಟಿವಿ9 ಸಂದರ್ಶನದಲ್ಲಿ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಬಯೋಪಿಕ್ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದರು. “ಪ್ರೊ. ನಂಜುಂಡಸ್ವಾಮಿ ಕಥೆಗಳನ್ನು ಕೇಳಿದಾಗ ಬಹಳ ಇಂಟ್ರೆಸ್ಟಿಂಗ್ ಅನ್ನಿಸ್ತಿತ್ತು. ಒಬ್ಬ ಪ್ರೊಫೆಸರ್, ಕ್ರಾಂತಿಕಾರಿ, ರಾಜ್ಯದ ರೈತರನ್ನೆಲ್ಲಾ ಒಗ್ಗೂಡಿಸಿದರೆ ಸರ್ಕಾರವೇ ಹೆದರುವುದು ಇದೇ ಅಲ್ಲ, ಅವರ ದೂರದೃಷ್ಟಿ, ಅವರ ಮಾತಿನ ಶೈಲಿ, ಅವರ ಕೆಲಸಗಳು ಅದೆಲ್ಲಾ ಬಹಳ ಅದ್ಭುತ ಎನಿಸುತ್ತದೆ. ಪ್ರೊ. ಎಂ.ಡಿ.ನಂಜುಂಡಸ್ವಾಮಿ ಹಸಿರು ಶಾಲು ಬೀಸಿದರೆ ಲಕ್ಷಾಂತರ ಜನ ಸೇರುತ್ತಿದ್ದರು. ಅಂತಹ ಬಯೋಪಿಕ್ ಮಾಡಲು ಇಷ್ಟ. ಅದನ್ನು ಅಷ್ಟು ಪರಿಣಾಮಕಾರಿಗಾಗಿ ಮಾಡುವವರು ಸಿಕ್ಕರೆ ಮಾಡೋಣ” ಎಂದಿದ್ದರು.
ಪ್ರತಿಮಾ ನಂಜುಂಡಸ್ವಾಮಿ ಆಗಿ ರಮ್ಯಾ
ಪ್ರೊ. ನಂಜುಂಡಸ್ವಾಮಿ ಅವರ ಬಯೋಪಿಕ್ನಲ್ಲಿ ಪ್ರತಿಮಾ ನಂಜುಂಡಸ್ವಾಮಿ ಪಾತ್ರದಲ್ಲಿ ನಟಿ ರಮ್ಯಾ ನಟಿಸುವ ಸಾಧ್ಯತೆಯಿದೆ. ಈ ಬಗ್ಗೆ ಕೂಡ ಪಚ್ಚೆ ನಂಜುಂಡಸ್ವಾಮಿ ಜೊತೆ ಧನಂಜಯ ಜೊತೆ ಚರ್ಚೆ ನಡೆಸಿದ್ದಾರಂತೆ. ಸದ್ಯ ‘ಉತ್ತರಕಾಂಡ’ ಚಿತ್ರದಲ್ಲಿ ಡಾಲಿ ಧನಂಜಯ ಜೊತೆ ರಮ್ಯಾ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರತಿಮಾ ನಂಜುಂಡಸ್ವಾಮಿ ಪಾತ್ರಕ್ಕೂ ಬಹಳ ಮಹತ್ವ ಇರಲಿದೆ. ‘ಆಕ್ಟ್ 1978’ ಸಿನಿಮಾ ಖ್ಯಾತಿಯ ನಿರ್ದೇಶಕ ಮಂಸೋರೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಸಾಧ್ಯತೆಯಿದೆ.
6 ಭಾಷೆಗಳಲ್ಲಿ ಸಿನಿಮಾ ನಿರ್ಮಾಣ
ನಮ್ಮ ತಂದೆ ಅವರ ಕುರಿತು ನನ್ನ ಬಳಿ ಸುಮಾರು 300 ಗಂಟೆಗಳ ವಿಡಿಯೋ ಫುಟೇಜ್ ಇದೆ. ಅದರಲ್ಲಿ 80 ದೃಶ್ಯಗಳನ್ನು ಸಿನಿಮಾ ದೃಶ್ಯಗಳಾಗಿ ಪರಿವರ್ತಿಸಬಹುದು. ಇನ್ನು ಈ ಬಯೋಪಿಕ್ ಸಿನಿಮಾವನ್ನು ಪ್ಯಾನ್ ಸಿನಿಮಾ ಆಗಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ತೆರೆಗೆ ತರುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಎಲ್ಲಾ ಅಂದುಕೊಂಡಂತೆ ಆದರೆ ಇಂಗ್ಲೀಷ್ ಭಾಷೆಗೂ ಡಬ್ ಆಗಲಿದೆ. ಆಂಧ್ರದ ಮಾಜಿ ಸಿಎಂ ವೈಎಸ್ ರಾಜಶೇಖರ್ ರೆಡ್ಡಿ ಬಯೋಪಿಕ್ ‘ಯಾತ್ರಾ’ ಮತ್ತು ರಿಚರ್ಡ್ ಅಟೆನ್ಬರೋ ಅವರ ‘ಗಾಂಧಿ’ ಚಿತ್ರಕ್ಕೆ ಸಮನಾಗಿ ಈ ಸಿನಿಮಾ ಇರಲಿದೆ ಎಂದು ಪಚ್ಚೆ ನಂಜುಂಡಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada