ಬಳ್ಳಾರಿ: ಎಲೆಕ್ಷನ್ ಟೈಮ್ ಅಲ್ಲಿ ರಾಜಕಾರಣಿಗಳು ತಮ್ಮ ವಿರೋಧಿಗಳನ್ನ ಕಂಡ್ರೆ ಕತ್ತಿ ಮಸೆಯುತ್ತಾರೆ. ಮಾತು, ಮಾತಿಗೂ ಯುದ್ಧನೇ ಮಾಡ್ತಾರೆ. ಆದ್ರೆ ಬಳ್ಳಾರಿಯಲ್ಲಿ ಇದಕ್ಕೆ ತದ್ವಿರುದ್ಧವಾದ ಘಟನೆ ನಡೆದಿದೆ. ರಾಜಕೀಯ ಬದ್ಧವೈರಿಗಳು ಪರಸ್ಪರ ಆಲಿಂಗನ ಮಾಡಿಕೊಂಡು ಸಿಹಿ ಮುತ್ತು ಕೊಟ್ಟು ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.
ಸಂಡೂರು ತಾಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ಉಡುಸುಲಮ್ಮ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ಈ ಉತ್ಸವಕ್ಕೆ ಸಾರಿಗೆ ಸಚಿವ ಶ್ರೀರಾಮುಲು, ಕಾಂಗ್ರೆಸ್ ನಾಯಕ ಸಂತೋಷ್ ಲಾಡ್ ಭಾಗಿಯಾಗಿದ್ದರು. ಜಾತ್ರೆಯಲ್ಲಿ ಇಬ್ಬರು ನಾಯಕರನ್ನ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಆಗ ವಾಹನದಲ್ಲಿದ್ದ ಇಬ್ಬರು ನಾಯಕರು ಮುಖಾಮುಖಿ ಆಗುತ್ತಿದ್ದಂತೆ ಆಲಿಂಗನ ಮಾಡಿಕೊಂಡಿದ್ದಾರೆ. ಖುಷಿಯಲ್ಲಿ ತಬ್ಬಿಕೊಂಡ ಸಂತೋಷ್ ಲಾಡ್, ಶ್ರೀರಾಮುಲುಗೆ ಸಿಹಿಮುತ್ತುಗಳನ್ನು ಕೊಟ್ಟಿದ್ದಾರೆ.
ರಾಜಕೀಯ ಬದ್ಧ ವೈರಿಗಳ ಈ ಚುಂಬನ ಬಳ್ಳಾರಿಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಂಡೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿರೋ ಸಚಿವ ಶ್ರೀರಾಮುಲು ಸಾಕಷ್ಟು ಓಡಾಡುತ್ತಿದ್ದಾರೆ. ಇತ್ತ ಪಕ್ಕದ ಕಲಘಟಗಿ ಕ್ಷೇತ್ರದಿಂದ ಸಂತೋಷ್ ಲಾಡ್ಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿಸೋ ಪ್ರಯತ್ನ ನಡೆಯುತ್ತಿದೆ. ಒಂದು ವೇಳೆ ಕಲಘಟಗಿಯಲ್ಲಿ ಟಿಕೆಟ್ ಕೈ ತಪ್ಪಿದರೆ ಸಂತೋಷ್ ಲಾಡ್ ಕಣ್ಣು ಸಂಡೂರಿನ ಮೇಲೆ ಬೀಳಬಹುದು. ಹೀಗಿರುವಾಗ ರಾಜಕೀಯ ಬದ್ಧ ವಿರೋಧಿಗಳು ಬಹಿರಂಗವಾಗಿ ಆಲಿಂಗನ ಮಾಡಿದ್ದು ವಿಶೇಷವಾಗಿದೆ. ಸಂತೋಷ್ ಲಾಡ್ ಹಾಗೂ ಶ್ರೀರಾಮುಲು ಪರಸ್ಪರ ಮುದ್ದಾಟದ ಈ ವಿಡಿಯೋ ಸಾಕಷ್ಟು ವೈರಲ್ ಸಹ ಆಗಿದೆ. ರಾಜಕೀಯದ ಸ್ನೇಹ ಏನೇ ಇರಬಹುದು ಆದರೆ ರಾಮುಲುಗೆ ಸಂತೋಷ್ ಲಾಡ್ ನೀಡಿದ ಎರಡು ಮುತ್ತು ರಹಸ್ಯವಾಗಿಯೇ ಉಳಿದಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada