ಬೆಂಗಳೂರು, ಮಾರ್ಚ್ 10: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸೇರಿದ 1,000 ಕೋಟಿ ರೂ.ಗೂ ಅಧಿಕ ಮೌಲ್ಯದ 25 ಎಕರೆ ಭೂಮಿಯನ್ನು ಒತ್ತುವರಿ ಮಾಡಲಾಗಿದೆ. ಇವುಗಳನ್ನು ಕಂದಾಯ ನಿವೇಶನಗಳನ್ನಾಗಿ ಪರಿವರ್ತಿಸಿ ಭೂಗಳ್ಳರು ಹಾಗೂ ಸರ್ಕಾರಿ ಅಧಿಕಾರಿಗಳು ಮಾರಾಟ ಮಾಡಿದ್ದಾರೆ ಎಂದು ಚಿತ್ರ ನಿರ್ಮಾಪಕ ಬೊಮ್ಮನಹಳ್ಳಿ ಟಿಕೆಟ್ ಆಕಾಂಕ್ಷಿ ಉಮಾಪತಿ ಶ್ರೀನಿವಾಸಗೌಡ ಆರೋಪಿಸಿದ್ದಾರೆ.
ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಉಮಾಪತಿ ಗೌಡ, ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿಯ ದೇವರಚಿಕ್ಕನಹಳ್ಳಿ ಮತ್ತು ಸುತ್ತಮುತ್ತಲಿನ ( ಸರ್ವೆ ನಂಬರ್ 27/1 ರಿಂದ 29/35 ವರೆಗಿನ) ಭೂಮಿಯನ್ನು 30 ವರ್ಷಗಳ ಹಿಂದೆ ಬಿಡಿಎ ಖರೀದಿಸಿತ್ತು. ಇದಕ್ಕೆ 16 ಕೋಟಿ ರೂ.ಗಳಷ್ಟು ಖರ್ಚು ಮಾಡಿತ್ತು. ಲೇಔಟ್ ನಿರ್ಮಾನಿಸಲು ಈ ಜಾಗವನ್ನು ಕಾಯ್ದಿರಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಬಿಡಿಎ ಹಕ್ಕುಗಳನ್ನು ಪ್ರಶ್ನಿಸಿ ಕೆಲವರು ಕರ್ನಾಟಕ ಹೈಕೋರ್ಟ್ಗೆ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್ ಬಿಡಿಎ ಪರವಾಗಿ ತೀರ್ಪು ನೀಡಿದೆ ಎಂದು ಅವರು ಹೇಳಿದ್ದಾರೆ. ಅದೇ ಜನರು ನಂತರ ಸುಪ್ರೀಂ ಕೋರ್ಟ್ಗೆ ಮೊರೆ ಹೋದರು. ಅಲ್ಲಿ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿಯಲಾಯಿತು ಎಂದು ತಿಳಿಸಿದ್ದಾರೆ.
‘ಉನ್ನತ ನ್ಯಾಯಾಲಯದ ತೀರ್ಪಿನ ಹೊರತಾಗಿಯೂ, ಭೂಗಳ್ಳರು ಬಿಡಿಎ ಅಧಿಕಾರಿಗಳೊಂದಿಗೆ ಶಾಮೀಲಾಗಿ ನಕಲಿ ದಾಖಲೆಗಳನ್ನು ನಿರ್ಮಿಸಿ ಈ ಭೂಮಿಯನ್ನು ಕಬಳಿಸಿದ್ದಾರೆ. ಆಸ್ತಿಯನ್ನು ಕಂದಾಯ ನಿವೇಶನಗಳನ್ನಾಗಿ ಪರಿವರ್ತಿಸಿ ಲಾಭ ಮಾಡಿಕೊಂಡಿದ್ದಾರೆ. ಮೂಲ ಭೂ ಮಂಜೂರಾತಿದಾರರು ಕಂಗಾಲಾಗಿದ್ದಾರೆ’ ಎಂದು ಉಮಾಪತಿ ಗೌಡ ಗಂಭೀರ ಆರೋಪ ಮಾಡಿದ್ದಾರೆ.
ತನ್ನನ್ನು ಸಂಪರ್ಕಿಸಿರುವ ನೂರಾರು ಮಾಲೀಕರಿಗೆ ನ್ಯಾಯ ಕೋರಿ ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇನೆ ಮತ್ತು ಇದು ರಾಜಕೀಯ ಸ್ಟಂಟ್ ಅಲ್ಲ ಎಂದು ಅವರು ಹೇಳಿದ್ದಾರೆ.
ವಶಪಡಿಸಿಕೊಂಡ ಸೈಟ್ಗಳನ್ನು ರಿಯಲ್ ಎಸ್ಟೇಟ್ ಸಂಸ್ಥೆಗಳ ಮೂಲಕ ಪ್ರತಿ ಚದರ ಅಡಿಗೆ 12,000 ರೂ.ಗೆ ಮಾರಾಟ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ರಾಮ್ ಮೋಹನ್, ಸುನೀತಾ ಬಿ, ಉಮೇಶ್ ಮತ್ತು ಮುನಿ ರೆಡ್ಡಿ ಅವರು ಅವರು ಭಾಗಿಯಾಗಿದ್ದಾರೆ ಎಂದು ಉಮಾಪತಿ ಗೌಡ ಹೇಳಿದ್ದಾರೆ. ಬೆಳಗಾವಿ ಅಧಿವೇಶನದಲ್ಲೂ ವಿಷಯ ಪ್ರಸ್ತಾಪವಾಗಿದ್ದು, ಇದೆಲ್ಲವೂ ಸಿಎಂ ಬಸವರಾಜ ಬೊಮ್ಮಾಯಿಗೆ ಗೊತ್ತಿದೆ ಎಂದು ಹೇಳಿದ್ದಾರೆ.
ಕುತೂಹಲಕಾರಿ ವಿಚಾರವೆಂದರೆ, ಮುನಿರೆಡ್ಡಿ ಬೊಮ್ಮನಹಳ್ಳಿ ಬಿಜೆಪಿ ಶಾಸಕ ಎಂ ಸತೀಶ್ ರೆಡ್ಡಿ ಅವರ ತಂದೆ. ಮಾಜಿ ಉಪಮೇಯರ್ ರಾಮ್ ಮೋಹನ್ ಅವರು ಶಾಸಕರ ಆಪ್ತರಾಗಿದ್ದಾರೆ. ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಾಗಿ ಗೌಡರು ತಿಳಿಸಿದ್ದಾರೆ.
ಉಮಾಪತಿ ಶ್ರೀನಿವಾಸ್ ಗೌಡ ಅವರು ಏಳು ಬಿಡಿಎ ನಿವೇಶನಗಳನ್ನು ಅಕ್ರಮವಾಗಿ ತೆಗೆದುಕೊಂಡಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತ ಹೇಮಂತ್ ರಾಜು ಆರೋಪಿಸಿದ ವಾರಗಳ ನಂತರ ಈ ಆರೋಪಗಳು ಕೇಳಿಬಂದಿವೆ.
‘ಬೇಗೂರು ಹೋಬಳಿಯ ಭೂಮಿಯು ನನಗೆ ಸೇರಿದ್ದು, ಅದು ನನ್ನ ಪೂರ್ವಜರ ಆಸ್ತಿ ಮತ್ತು ನಾನು ನಿಜವಾದ ಮಾಲೀಕ’ ಎಂದು ಉಮಾಪತಿ ಗೌಡ ಸಮರ್ಥಿಸಿಕೊಂಡಿದ್ದಾರೆ.
ಉಮಾಪತಿ ಗೌಡರ ಆರೋಪಗಳು ರಾಜಕೀಯ ಪ್ರೇರತವೆಂದು ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹೇಳಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada