ಸೋಮವಾರ ಚನ್ನರಾಯಪಟ್ಟಣದ ಹಿರಿಸಾವೆ ಗ್ರಾಮದಲ್ಲಿ ಮಾತನಾಡಿದ ಕುಮಾರಸ್ವಾಮಿ, “ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಸಿದ್ಧವಾಗುತ್ತಿದೆ. ಈ ಹಿಂದೆಯೇ ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ಎಂದು ಹೇಳಿದ್ದೆ. ಈಗಲೂ ಅದೇ ಮಾತು ಹೇಳುತ್ತೇನೆ, ಪಕ್ಷದ ಕಾರ್ಯಕರ್ತರಿಗೆ ಆದ್ಯತೆ” ಎಂದು ಹೇಳಿದರು. ಜೆಡಿಎಸ್ ಎರಡನೇ ಪಟ್ಟಿಯಲ್ಲಿ ಹಾಸನದ ಟಿಕೆಟ್ ಸಹ ಘೋಷಣೆಯಾಗಲಿದೆ ಎಂದು ಈ ಹಿಂದೆಯೇ ಸ್ಪಷ್ಟಪಡಿಸಲಾಗಿದೆ. ಹಾಗಾದರೆ ಹಾಸನದ ಟಿಕೆಟ್ ಯಾರಿಗೆ?.
ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಬದಲಾಗಿ ಹೆಚ್. ಪಿ. ಸ್ವರೂಪ್ ಅಭ್ಯರ್ಥಿಯಾಗಬಹುದು ಎಂಬುದು ಲೆಕ್ಕಾಚಾರವಾಗಿದೆ. ಸ್ವತಃ ಎಚ್. ಡಿ. ಕುಮಾರಸ್ವಾಮಿ ಮಾಜಿ ಶಾಸಕರಾದ ದಿ. ಹೆಚ್. ಎಸ್. ಪ್ರಕಾಶ್ ಪುತ್ರ ಸ್ವರೂಪ್ಗೆ ಟಿಕೆಟ್ ನೀಡುವ ಚಿಂತನೆಯಲ್ಲಿದ್ದಾರೆ. ಆದರೆ ಎಚ್. ಡಿ. ರೇವಣ್ಣ ಕುಟುಂಬ ಟಿಕೆಟ್ಗಾಗಿ ಪಟ್ಟು ಹಿಡಿದಿದೆ. ಎಚ್. ಡಿ. ಕುಮಾರಸ್ವಾಮಿ ಯಾರಿಗೆ ಟಿಕೆಟ್ ಘೋಷಣೆ ಮಾಡುತ್ತಾರೆ? ಎಂಬುದೇ ಕುತೂಹಲ.
ಮಾರ್ಚ್ 18ಕ್ಕೆ ಘೋಷಣೆ ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ನಡೆಯುತ್ತಿದೆ. ಆದರೆ ಹಾಸನ ಕ್ಷೇತ್ರದಲ್ಲಿ ಎಂದು ಯಾತ್ರೆ ನಡೆಯಲಿದೆ? ಎಂದು ಎಚ್. ಡಿ. ಕುಮಾರಸ್ವಾಮಿ ಹೇಳಿಲ್ಲ. ಮಾರ್ಚ್ 18ರ ದಿನಾಂಕವನ್ನು ಅವರು ಖಾಲಿ ಇಟ್ಟಿದ್ದಾರೆ. “ಮಾರ್ಚ್ 18ರ ದಿನಾಂಕ ಖಾಲಿ ಇಟ್ಟಿದ್ದೇನೆ. ಅದು ಯಾಕೆ ಎಂದು ನಿಮಗೂ ಆರ್ಥ ಆಗಿರಬಹುದು” ಎಂದು ಹೇಳುವ ಮೂಲಕ ಕುಮಾರಸ್ವಾಮಿ ಅಂದು ಹಾಸನದಲ್ಲಿ ಯಾತ್ರೆ ನಡೆಸುವ ಸುಳಿವು ನೀಡಿದ್ದಾರೆ.
ಅಂದು ಹಾಸನದಲ್ಲಿ ಪಂಚರತ್ನ ರಥಯಾತ್ರೆ ನಡೆದರೆ ಹೆಚ್. ಪಿ. ಸ್ವರೂಪ್ಗೆ ಟಿಕೆಟ್ ಘೋಷಣೆಯಾಗಬಹುದು ಎಂಬ ನಿರೀಕ್ಷೆ ಇದೆ. ಆದರೆ ಇದಕ್ಕೆ ಎಚ್. ಡಿ. ರೇವಣ್ಣ ಕುಟುಂಬ ಒಪ್ಪಲಿದೆಯೇ?, ಮುಂದೆ ಆಗವ ಪರಿಣಾಮಗಳು ಏನು? ಎಂಬುದು ಮುಂದಿನ ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಬಹುದಾಗಿದೆ. ಈಗಾಗಲೇ ಜೆಡಿಎಸ್ ಈ ಬಾರಿಯ ಚುನಾವಣೆಗೆ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಜನವರಿಯಲ್ಲಿ ಮಾತನಾಡಿದ್ದ ಮಾಜಿ ಸಚಿವ ಎಚ್. ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣ, “ಜೆಡಿಎಸ್ನಿಂದ ನನ್ನನ್ನು ಅಭ್ಯರ್ಥಿ ಮಾಡಬೇಕು ಎಂದು ಎಲ್ಲರೂ ಮಾತನಾಡಿಕೊಂಡು ನಿರ್ಣಯ ತೆಗೆದುಕೊಂಡಿದ್ದಾರೆ. ಸ್ವಲ್ಪ ದಿನದಲ್ಲಿಯೇ ನನ್ನ ಹೆಸರು ಘೋಷಣೆಯಾಗಲಿದೆ” ಎಂದು ಹೇಳಿದ್ದರು. ಬಳಿಕ ಹಾಸನ ಕ್ಷೇತ್ರದ ಟಿಕೆಟ್ ಜಟಾಪಟಿ ಆರಂಭವಾಯಿತು. ಭವಾನಿ ರೇವಣ್ಣಗೆ ಟಿಕೆಟ್ ನೀಡಲು ಜೆಡಿಎಸ್ ಪಕ್ಷದಲ್ಲಿಯೇ ವಿರೋಧವಿದೆಯೇ? ಎಂಬುದು ಖಚಿತವಾಗಿಲ್ಲ.
ಎಚ್. ಡಿ. ರೇವಣ್ಣ ಹೊಳೆನರಸೀಪುರ ಶಾಸಕರು, ಸ್ವರೂಪ್ ರೇವಣ್ಣ ಎಂಎಲ್ಸಿ, ಪ್ರಜ್ವಲ್ ರೇವಣ್ಣ ಹಾಸನ ಸಂಸದ. ಇದೇ ಕುಟುಂಬದ ಮತ್ತೊಬ್ಬರಿಗೆ ಟಿಕೆಟ್ ನೀಡಿದರೆ ಕುಟುಂಬ ರಾಜಕೀಯದ ಆರೋಪ ಎದುರಿಸಬೇಕಾಗುತ್ತದೆ ಎಂಬುದು ಕುಮಾರಸ್ವಾಮಿ ಲೆಕ್ಕಾಚಾರವಾಗಿದೆ. ಆದ್ದರಿಂದ ನಾಲ್ಕು ಬಾರಿ ಶಾಸಕರಾಗಿ, ಪಕ್ಷ ಸಂಘಟನೆಗೆ ದುಡಿದಿದ್ದ ದಿ. ಹೆಚ್. ಎಸ್. ಪ್ರಕಾಶ್ ಪುತ್ರ ಹೆಚ್. ಪಿ. ಸ್ವರೂಪ್ಗೆ ಟಿಕೆಟ್ ನೀಡಿ ಕಾರ್ಯಕರ್ತರ ವಿಶ್ವಾಸವನ್ನು ಸಹಗಳಿಸುವುದು ತಂತ್ರವಾಗಿದೆ. ಆದರೆ ಭವಾನಿ ರೇವಣ್ಣಗೆ ಟಿಕೆಟ್ ನಿರಾಕರಿಸಲು ಸಾಧ್ಯವಿದೆಯೇ?.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada