ಸಿನಿಮಾ ನಟರ ಸಂಭಾವನೆ ಇದೀಗ ಪ್ರತಿಷ್ಠೆಯ ವಿಷಯವಾಗಿಬಿಟ್ಟಿದೆ. ಪ್ರಭಾಸ್ ಒಂದು ಸಿನಿಮಾಕ್ಕೆ ಅಷ್ಟು ಕೋಟಿ ತೆಗೆದುಕೊಂಡರು, ಸುದೀಪ್ ಇಷ್ಟು ಕೋಟಿ, ಶಾರುಖ್ ಖಾನ್ ಅಷ್ಟೊಂದು ಕೋಟಿ, ರಜನೀಕಾಂತ್ ಪಡೆಯುವ ಸಂಭಾವನೆ ನೂರಾರು ಕೋಟಿ ಹೀಗೆ ನಟರು ಪಡೆದುಕೊಳ್ಳುವ ಸಂಭಾವನೆಯಿಂದ ಅವರ ಸ್ಟಾರ್ಡಮ್ ಅಳೆಯುವ ಅಭ್ಯಾಸ ಸಾಮಾಜಿಕ ಜಾಲತಾಣದಲ್ಲಿ ಪ್ರಾರಂಭವಾಗಿದೆ.
ಆದರೆ ಉದ್ಯಮದ ಹಿರಿಯ ನಿರ್ಮಾಪಕರು ನಟರ ಏರುತ್ತಿರುವ ಸಂಭಾವನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಸ್ಟಾರ್ ನಟರು ಸಂಭಾವನೆ ಇಳಿಸಿಕೊಂಡರಷ್ಟೆ ನಿರ್ಮಾಪಕರು ಬದುಕುವು ಸಾಧ್ಯ. ಸ್ಟಾರ್ ನಟರ ಸಂಭಾವನೆಯಿಂದಾಗಿ ಸಿನಿಮಾದ ಬಜೆಟ್ ಮೂರು ಪಟ್ಟು ಹೆಚ್ಚಳವಾಗುತ್ತದೆ. ಇದು ಸಿನಿಮಾದ ಗುಣಮಟ್ಟದ ಮೇಲೂ ಪ್ರಭಾವ ಬೀರುತ್ತದೆ ಎಂದು ಕೆಲವರು ಈಗಾಗಲೇ ಅಭಿಪ್ರಾಯ ಹೊರಹಾಕಿದ್ದಾರೆ. ಆದರೆ ಇಂಥವರ ಮಾತುಗಳು ಸ್ಟಾರ್ ನಟರ ಕಿವಿಗೆ ಬೀಳುವುದಿಲ್ಲ.
ಇದೀಗ ಬಾಲಿವುಡ್ನ ಹಿರಿಯ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್, ನಟರ ಅದರಲ್ಲಿಯೂ ಹೊಸ ನಟರ ಸಂಭಾವನೆ ಬಗ್ಗೆ ತಮ್ಮ ಅಸಮಾಧಾನ ಹೊರಗೆ ಹಾಕಿದ್ದಾರೆ.
ಕೆಲವು ದಿನಗಳ ಹಿಂದೆ ಬಾಲಿವುಡ್ನ ಪ್ರಮುಖ ಸಿನಿಮಾಕರ್ಮಿಗಳು ರೌಂಡ್ ಟೇಬಲ್ ಸಂದರ್ಶನವೊಂದರಲ್ಲಿ ಮಾತನಾಡಿರುವ ಕರಣ್ ಜೋಹರ್, ”ಈ ಕೋವಿಡ್ ಸಂದರ್ಭದಲ್ಲಿಯೂ ಹೊಸ ನಟರು ಸಹ 20-30 ಕೋಟಿ ಸಂಭಾವನೆ ಕೇಳುತ್ತಾರೆ. ಇಂಥವರಿಂದ ನನಗಂತೂ ತಲೆ ಕೆಟ್ಟು ಹೋಗಿದೆ” ಎಂದಿದ್ದಾರೆ.
ಸಿನಿಮಾ ಫ್ಲಾಪ್ ಆದವರೂ ಕೋಟ್ಯಂತರ ಕೇಳುತ್ತಾರೆ: ಕರಣ್
”ಸಿನಿಮಾ ಸಂಕಷ್ಟದಲ್ಲಿರುವ ಈ ಸಮಯದಲ್ಲಿ ನಟರ ಸಂಭಾವನೆ ಏರಿಕೆ ಆಗುತ್ತಲೇ ಇರುವುದು ಗಮಿಸುತ್ತಿದ್ದೇನೆ. ಒಂದೂ ಸಿನಿಮಾ ಬಿಡುಗಡೆ ಆಗಿರುವುದಿಲ್ಲ. ಅವರ ಕೊನೆಯ ಸಿನಿಮಾ ಫ್ಲಾಪ್ ಆಗಿರುತ್ತದೆ. ಸಿನಿಮಾ ಇನ್ನೂ ಪ್ರಾರಂಭವೇ ಆಗಿರುವುದಿಲ್ಲ. ಆದರೆ ಸಂಭಾವನೆ ಮಾತ್ರ ಏರುತ್ತಲೇ ಇರುತ್ತದೆ. ಅವರೆಲ್ಲ ಡಿಜಿಟಲ್ ಹಣದ ಮೇಲೆ ಅವಲಂಭಿತರಾಗಿರುತ್ತಾರೆ ಹಾಗಾಗಿ ಹಣ ಎಂಬುದು ಅವರಿಗೆ ಸಂಖ್ಯೆ ಅಷ್ಟೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಕರಣ್ ಜೋಹರ್.
”ಬಾಕ್ಸ್ ಆಫೀಸ್ನಲ್ಲಿ ಶಕ್ತಿಯೇ ತೋರಿಸಿಲ್ಲ, ಆಗಲೆ ಬೇಡಿಕೆ”
”ಇವರೆಲ್ಲ ಭ್ರಮೆಗಿಂತಲೂ ದೂರ ಹೋಗಿಟ್ಟಿಬಿದ್ದಾರೆ” ಎಂದು ಕೆಲ ಹೊಸ ನಟರನ್ನು ಟೀಕಿಸಿದ ಕರಣ್ ಜೋಹರ್, ”ನಾವು ಈಗಿರುವ ಸಿನಿಮಾ ವ್ಯವಸ್ಥೆಯಲ್ಲಿ ಯಾರೂ ಸಹ ಚಿತ್ರಮಂದಿರಲ್ಲಿ ಆಗುತ್ತಿರುವ ನಷ್ಟವನ್ನು ಗಮನಿಸುತ್ತಲೇ ಇಲ್ಲ. ಸಂಭಾವನೆ ಬದಲಿಗೆ ಲಾಭದಲ್ಲಿ ಪಾಲು ನೀಡುವುದಾಗಿ ಮೆಗಾಸ್ಟಾರ್ಗಳ ಬಳಿ ಒಪ್ಪಂದ ಮಾಡಿಕೊಳ್ಳಬಹುದು. ಅದು ಒಳ್ಳೆಯದು ಸಹ. ಆದರೆ ಹೊಸ ನಟರು ತಮ್ಮ ಶಕ್ತಿಯನ್ನು ಬಾಕ್ಸ್ ಆಫೀಸ್ನಲ್ಲಿ ತೋರಿಸಿಲ್ಲ ಅಂಥವರು ಸಹ 25-30 ಕೋಟಿ ಕೇಳುತ್ತಿದ್ದಾರೆ. ಇದೇನು ಬರೀ ಸಂಖ್ಯೆಗಳ?” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಕರಣ್ ಜೋಹರ್.
ಬಾಲಿವುಡ್ನ ಲಾಂಚ್ ಪ್ಯಾಡ್ ಕರಣ್ ಜೋಹರ್
ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಈವರೆಗೆ ಹಲವು ಹೊಸ ಪ್ರತಿಭೆಗಳನ್ನು ಬಾಲಿವುಡ್ಗೆ ಲಾಂಚ್ ಮಾಡಿದ್ದಾರೆ. ಅದರಲ್ಲಿಯೂ ಸ್ಟಾರ್ ಮಕ್ಕಳನ್ನು ಲಾಂಚ್ ಮಾಡುವ ಮಶೀನ್ ಎಂದೇ ಕರಣ್ ಅನ್ನು ಕರೆಯಲಾಗುತ್ತದೆ. ಕರಣ್ ಲಾಂಚ್ ಮಾಡಿದ ಹಲವು ನಟ-ನಟಿಯರು ಇಂದು ಬಾಲಿವುಡ್ನ ಬೆಸ್ಟ್ ನಟರಾಗಿದ್ದಾರೆ. ಹಾಗಿದ್ದಾಗಿಯೂ ಕರಣ್ ಜೋಹರ್ ಹೊಸಬರ ಬಗ್ಗೆ ಅಸಮಾಧಾನ ಹೊರಹಾಕಿರುವುದು ಆಶ್ಚರ್ಯ ಮೂಡಿಸಿದೆ. ಬಾಲಿವುಡ್ ಮಾತ್ರವೇ ಅಲ್ಲ ದಕ್ಷಿಣ ಭಾರತ ಪ್ರತಿಭೆಗಳನ್ನೂ ಹಿಂದಿ ಸಿನಿಮಾಕ್ಕೆ ಲಾಂಚ್ ಮಾಡುತ್ತಾರೆ ಕರಣ್, ತಮ್ಮ ಮುಂದಿನ ಸಿನಿಮಾದಲ್ಲಿ ವಿಜಯ್ ದೇವರಕೊಂಡಗೆ ಅವಕಾಶ ಕೊಟ್ಟಿದ್ದಾರೆ ಕರಣ್.
ಕಾರ್ತಿಕ್ ಆರ್ಯನ್ ಅನ್ನು ಹೊರಹಾಕಿದ್ದ ಕರಣ್ ಜೋಹರ್
ಕೆಲವು ತಿಂಗಳ ಹಿಂದಷ್ಟೆ ತಮ್ಮದೇ ನಿರ್ಮಾಣದ ಸಿನಿಮಾ ಒಂದರಿಂದ ನಟ ಕಾರ್ತಿಕ್ ಆರ್ಯನ್ ಅನ್ನು ಕರಣ್ ಹೊರಗೆ ಹಾಕಿದರು. ಕಾರ್ತಿಕ್ ಆರ್ಯನ್ ಕರಣ್ ಜೋಹರ್ ನಿರ್ಮಾಣದ ‘ದೋಸ್ತಾನ 2’ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಕಾರ್ತಿಕ್ ಹೆಚ್ಚು ಸಂಭಾವನೆ ಕೇಳಿದರು ಎಂಬ ಕಾರಣಕ್ಕೆ ಅವರನ್ನು ಸಿನಿಮಾದಿಂದ ಹೊರಗೆ ಹಾಕಿದರು. ಕರಣ್ ಹೊರಗೆ ಹಾಕುತ್ತಿದ್ದಂತೆ ಇನ್ನೂ ಕೆಲವು ಸಿನಿಮಾಗಳಿಂದ ಕಾರ್ತಿಕ್ ಆರ್ಯನ್ ಅನ್ನು ಹೊರಗೆ ಹಾಕಲಾಯಿತು. ಹೆಚ್ಚಿನ ಸಂಭಾವನೆಗೆ ಬೇಡಿಕೆ ಇಟ್ಟಿದ್ದಕ್ಕೇ ಹೀಗೆ ಮಾಡಲಾಗಿದೆ ಎನ್ನಲಾಗಿತ್ತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada